ಮಡಿಕೇರಿ: ಚುಮುಚುಮು ಚಳಿಯ ಮಂಜಿನ ನಗರಿಯಲ್ಲಿ ಇಂದು ಕಾಡಾನೆಗಳು ವಾಕಿಂಗ್ ಮಾಡಿದವು. ಮುಂಜಾನೆ 5.30 ಗಂಟೆ ಸುಮಾರಿಗೆ ನಗರದ ಚೈನ್ ಗೇಟ್ ಬಳಿ ಮೈಸೂರು ರಸ್ತೆಗಿಳಿದ ಎರಡು ಕಾಡಾನೆಗಳು ರಾಜಮಾರ್ಗದಲ್ಲಿ ಸವಾರಿ ಮಾಡಿದವು.
ಆದರೆ ವಾಹನಗಳ ಸಂಚಾರ ಆರಂಭವಾಗುತ್ತಿದ್ದಂತೆ ಗಾಬರಿಗೊಂಡ ಆನೆಗಳು ದಿಕ್ಕಾಪಾಲಾಗಿ ಓಡ ತೊಡಗಿದವು. ವಾಹನಗಳಲ್ಲಿ ಬಂದ ಪ್ರಯಾಣಿಕರು ಹಾಗೂ ಪ್ರವಾಸಿಗರು ಅಂತರ ಕಾಯ್ದುಕೊಂಡು ಕಾಡಾನೆಗಳನ್ನು ಓಡಿಸುವ ಉದ್ದೇಶದಿಂದ ಬೊಬ್ಬಿಟ್ಟರು. ಇದರಿಂದ ಮತ್ತಷ್ಟು ವಿಚಲಿತಗೊಂಡ ಕಾಡಾನೆಗಳು ದಿಕ್ಕು ತೋಚದೆ ಎಲ್ಲೆಂದರಲ್ಲಿ ಓಡಲು ಆರಂಭಿಸಿದವು. ಇದರಿಂದ ಕೆಲವು ಮನೆಗಳ ತಡೆಗೋಡೆ ಹಾಗೂ ಹೂವಿನ ಕುಂಡಗಳು ಹಾನಿಗೀಡಾಗಿವೆ. ದಾರಿ ಕಾಣದಾದ ಕಾಡಾನೆಗಳು ಒಂದು ಬದಿಯಿಂದ ಮತ್ತೊಂದು ಬದಿಗೆ ಓಡಾಡಿದವು. ಸಿಕ್ಕ ಸಿಕ್ಕ ತೋಟಗಳಿಗೆ ನುಗ್ಗಿ ಬಾಳೆಗಿಡ ಸೇರಿದಂತೆ ಮನೆಯಂಗಳದ ಸಸಿಗಳನ್ನು ತಿಂದು ತೇಗಿದವು.
ವಿಷಯ ತಿಳಿದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪಟಾಕಿ ಸಿಡಿಸಿ ಆನೆಗಳನ್ನು ಕಾಡಿಗಟ್ಟುವ ಪ್ರಯತ್ನ ಮಾಡಿದರು. ಬೆಳ್ಳಂಬೆಳಗ್ಗೆ ನಗರದ ಜನತೆ ಹಾಗೂ ಪ್ರವಾಸಿಗರನ್ನು ಆತಂಕದಲ್ಲಿ ಮುಳುಗಿಸಿದ ಎರಡು ಕಾಡಾನೆಗಳು ಇದೀಗ ಅರಣ್ಯ ಪ್ರವೇಶಿಸಿವೆ ಎಂದು ಹೇಳಲಾಗುತ್ತಿದೆ. ಆದರೆ ನಗರದ ಜನರಲ್ಲಿ ಭಯದ ವಾತಾವರಣ ಮುಂದುವರೆದಿದೆ.