ಮೈಸೂರು: ಕಪಿಲ ನದಿಯಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದ್ದರಿಂದ ಸದ್ಯ ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಂಡಿದೆ.
ಪ್ರವಾಹದಿಂದಾಗಿ ಕಳೆದ ನಾಲ್ಕು ದಿನಗಳಿಂದ ಮೈಸೂರು-ನಂಜನಗೂಡು-ಊಟಿ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು, ಜನ ಪರದಾಡುವಂತಾಗಿತ್ತಲ್ಲದೆ, ಜನ ನಂಜನಗೂಡಿನಿಂದ ಮೈಸೂರಿಗೆ ತೆರಳಬೇಕಾಗಿದರೆ ಹಜ್ಜಿಗೆ ಬಸವನಪುರ, ಕೆಂಪೀಸಿದ್ದನಹುಂಡಿ, ಇಮ್ಮಾವು, ಅಡಕನಹಳ್ಳಿ ಹುಂಡಿ ಮಾರ್ಗವಾಗಿ ತೆರಳಿ ಕಡಕೊಳ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವಂತಾಗಿತ್ತು. ಮತ್ತೆ ಕಡಕೊಳದಿಂದ ನಂಜನಗೂಡಿಗೆ ಬರಬೇಕಾದರೆ ಅದೇ ಮಾರ್ಗವಾಗಿ ಬರಬೇಕಾಗಿತ್ತು, ಈ ನಡುವೆ ರಸ್ತೆ ತುಂಬಾ ಕಿರಿದಾಗಿದ್ದರಿಂದ ತೊಂದರೆಯಾಗಿತ್ತು.
ಇದೀಗ ಕೇರಳದಿಂದ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ನೀರು ಕಡಿಮೆಯಾಗಿದ್ದರಿಂದ ಜನ ನೆಮ್ಮದಿ ಪಡುವಂತಾಗಿದೆ.
ಮಲ್ಲನಮೂಲೆ ಮಠದಿಂದ ಚಿಕ್ಕಯ್ಯನ ಛತ್ರ ಗ್ರಾಮದ ಶ್ರೀ ಪ್ರಸನ್ನ ನಂಜುಂಡೇಶ್ವರ ದೇವಾಲಯದವರೆಗೆ ರಸ್ತೆಯನ್ನು 3 ರಿಂದ 5 ಅಡಿಯವರೆಗೆ ಎತ್ತರ ಮಾಡಿದರೆ ಕಪಿಲೆಯ ಯಾವುದೇ ಪ್ರವಾಹ ಬಂದರೂ ರಸ್ತೆಯ ಸಂಚಾರಕ್ಕೆ ಅಡಚಣೆಯಾಗದೆ ಸಾರ್ವಜನಿಕರು ಯಾವುದೇ ತೊಂದರೆ ಅನುಭವಿಸದೇ ಅವರ ಕೆಲಸಕ್ಕೆ ಸುಗಮವಾಗಿ ತೆರಳ ಬಹುದಾಗಿದೆ. ಆದ್ದರಿಂದ ಸಂಬಂಧ ಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹಾಗೂ ಜನಪ್ರತಿನಿಧಿಗಳು ಈ ರಸ್ತೆಯ ಎತ್ತರಗೊಳಿಸಲು ಗಮನ ಹರಿಸಿ ಪ್ರವಾಹ ಬಂದಾಗ ಯಾವುದೇ ಅಡಚಣೆಯಿಲ್ಲದೇ ಪ್ರಯಾಣೀಸಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.