ಚಿಕ್ಕಮಗಳೂರು: ವರ್ಷ ಕಳೆದರೂ ಕೂಡ ಅನ್ನದಾತನ ಸಂಕಷ್ಟಕ್ಕೆ ಕೊನೆಯೇ ಇಲ್ಲವಾಗಿದೆ. ರಾಜ್ಯದ ಕೆಲವಡೆ ಈಗಾಗಲೇ ಕೆಲವಡೆ ಬರದ ಛಾಯೆ ಕಾಣಿಸಿದೆ. ಕಳೆದ ವರ್ಷವೂ ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿತು. ಈ ವರ್ಷವೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರಂಭದಲ್ಲಿ ಮಳೆ ಉತ್ತಮವಾಗಿ ಬಂದ ಹಿನ್ನಲೆಯಲ್ಲಿ ರೈತರು ಬಿತ್ತನೆ ಕಾರ್ಯವನ್ನು ಮಾಡಿದ್ದರು. ಸದ್ಯ ಬಯಲುಸೀಮೆಯ ಭಾಗಗಳಲ್ಲಿ ಮಳೆ ಸುರಿಯದೇ ತಿಂಗಳುಗಳೇ ಕಳೆದಿದೆ.
ಇದರಿಂದಾಗಿ ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯಿಲ್ಲದೇ ಬಿರುಕು ಬಿಟ್ಟಿರೋ ಭೂಮಿ, ಒಣಗಿ ಹೋಗುತ್ತಿರೋ ಈರುಳ್ಳಿ ಬೆಳೆ. ಅಳಿದುಳಿದ ಗಿಡಗಳ ನಡುವಿನಲ್ಲಿರೋ ಕಳೆ ತೆಗೆಯುತ್ತಿರೋ ಜನರು, ಮಳೆಯ ಬರುವಿಕೆಗಾಗಿ ಕಾಯುತ್ತಾ ಆಗಸದತ್ತ ಮುಖ ಮಾಡಿರೋ ಅನ್ನದಾತರು. ಇದೆಲ್ಲಾ ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆಯ ಪ್ರದೇಶವಾಗಿರೋ ಚಿಕ್ಕಮಗಳೂರು , ಕಡೂರು, ತರೀಕರೆ ತಾಲ್ಲೂಕಿನ ರೈತರು ಎದುರಿಸುತ್ತಿರು ಸಮಸ್ಯೆ. ಮಳೆಗಾದ ಆರಂಭದಲ್ಲಿ ಬಿದ್ದ ಮಳೆಗೆ ಇಲ್ಲಿನ ರೈತರು ಭೂಮಿಯನ್ನು ಹದ ಮಾಡಿ ಈರುಳ್ಳಿ ಬೆಳೆಯನ್ನು ಬಿತ್ತನೆ ಮಾಡಿದ್ದರು. ಮುಂಗಾರು ಮಳೆ ಮಾಯಾವಾಗಿ ಹಿಂಗಾರು ಆರಂಭವಾಗಿದೆ. ಆದರೆ ಈ ಭಾಗಕ್ಕೆ ಮಾತ್ರ ಮಳೆರಾಯನ ಆಗಮನವಾಗಿಲ್ಲ. ಇದರಿಂದಾಗಿ ಮಳೆಯನ್ನೇ ನಂಬಿ ಈರುಳ್ಳಿ ಬಿತ್ತನೆ ಮಾಡಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರೈತರು ಅತೀ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆದಿದ್ದಾರೆ. ಇದೀಗ ಮಳೆ ಕೈಕೊಟ್ಟಿರುವುದರಿಂದಾಗಿ ಈರುಳ್ಳಿ ಬೆಳೆ ಒಣಗಲಾರಂಭಿಸಿರುವುದು ಸಾಲಸೋಲ ಮಾಡಿ ಈರುಳ್ಳಿ ಬೆಳೆದಿದ್ದ ರೈತರ ಚಿಂತೆಗೆ ಕಾರಣವಾಗಿದೆ. ಜಿಲ್ಲೆಯ ಕಡೂರು, ಹಿರೇನಲ್ಲೂರು, ಗಿರಿಯಾಪುರ, ಬಾಸೂರು, ಅಜ್ಜಂಪುರ, ನರಸೀಪುರ, ಚೋಮನಹಳ್ಳಿ, ಸೇರಿದಂತೆ ಒಟ್ಟು 4 ಸಾವಿರಕ್ಕೂ ಅಧಿಕ ಪ್ರದೇಶಗಳಲ್ಲಿ ವಾಣಿಜ್ಯ ಬೆಳೆಯಾಗಿರೋ ಈರುಳ್ಳಿಯನ್ನು ಬೆಳೆಯಲಾಗುತ್ತಿದೆ. ಕಳೆದ ಬಾರಿ ಉತ್ತಮ ಲಾಭ ಲಭಿಸಿದ್ದರಿಂದಾಗಿ ಈ ಬಾರಿ ಹೆಚ್ಚಿನ ರೈತರು ಇತರ ಬೆಳೆಗಳ ಬದಲಾಗಿ ಈರುಳ್ಳಿಯನ್ನೇ ನೆಚ್ಚಿಕೊಂಡಿದ್ದು, ಸಾವಿರಾರು ರೂಪಾಯಿ ವ್ಯಯಿಸಿ ಈರುಳ್ಳಿಯನ್ನು ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದಂದಿನಿಂದ ಮಳೆ ಮರೆಯಾಗಿದೆ. ಕಳೆದ ವರ್ಷವೂ ಬರಗಾಲ ಈ ಭಾಗಗಲ್ಲಿ ಆವರಿಸಿತ್ತು. ಆದರೆ ಇಲ್ಲಿನ ರೈತರು ಕೊಳವೆ ಬಾವಿಗಳ ಆಶ್ರಯದಿಂದ ಈರುಳ್ಳಿ ಬೆಳಯನ್ನು ಬೆಳೆದಿದ್ದರು. ಸದ್ಯ ಅಂತರ್ ಜಲ ಮಟ್ಟ ಕಡಿಮೆಯಾಗಿದ್ದು ಮಳೆಯೂ ಮಾಯಾವಾಗಿರುವುದು ರೈತರಲ್ಲಿ ಆತಂಕವನ್ನು ಮೂಡಿಸಿದೆ. ಒಟ್ಟಾರೆಯಾಗಿ ರೈತರು ಮಾತ್ರ ಸದಾಕಾಲ ವರುಣನ ಕಣ್ಣಾಮುಚ್ಚಾಲೆಯಾಟಕ್ಕೆ ಬಲಿಯಾಗುತ್ತಲೇ ಇದ್ದಾರೆ. ಬಯಲುಸೀಮೆಯ ಭಾಗದಲ್ಲಿ ಮಳೆ ಮರೆಯಾಗಿರುವುದು ಅನ್ನದಾತನ ಆತಂಕಕ್ಕೆ ಕಾರಣವಾಗಿದೆ. ವಾರದೊಳಗೆ ಮಳೆಯ ಆಗಮನವಾಗದಿದ್ದಲ್ಲಿ ಈರುಳ್ಳಿ ಬೆಳೆ ಸೇರಿದಂತೆ ಪ್ರಮುಖ ಬೆಳೆಗಳು ಮಣ್ಣುಪಾಲಾಗಲಿದೆ.