ಕಾರವಾರ: ಗೋವಾದಿಂದ ವ್ಯಕ್ತಿಯನ್ನು ಸಿನಿಮೆಯ ಮಾದರಿಯಲ್ಲಿ ಅಪಹರಣ ಮಾಡಿಕೊಂಡು ಬರುತ್ತಿದ್ದ ಐದು ಜನರ ತಂಡವನ್ನು ಶಿರಸಿ ಪೊಲೀಸರು ಬಂಧಿಸಿ, ವ್ಯಕ್ತಿಯನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಗೋವಾ ಮೂಲದ ಅಂಬರೀಶ್ ಪ್ರತಾಪ್ ಸಿಂಗ್ (31) ಕಿಡ್ಯಾಪ್ ಆದ ವ್ಯಕ್ತಿ. ಹಣದ ವಿಷಯಕ್ಕೆ ಸಂಬಂಧಿಸಿದಂತೆ ಈತನ ಅಪಹರಣ ಮಾಡಲಾಗಿತ್ತು.
ಕಿಡ್ನಾಪ್ ಮಾಡಿಕೊಂಡಿ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದಾಗ ಯಲ್ಲಾಪುರ ನಾಕಾದಲ್ಲಿ ಮೂವರು ಆರೋಪಿಗಳನ್ನು ಹಾಗೂ ಯಲ್ಲಾಪುರದಲ್ಲಿ ಇಬ್ಬರು ಅಪಹರಣಕಾರರನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ಲಿನ ಮಹಮ್ಮದ್ (36), ಅನೀಸ್ ಮಹಮ್ಮದ್ (46), ನವಾಜ (35), ಮಹಮ್ಮದ್ ಮುಸ್ತುಫ್ (30) ಹಾಗೂ ಸಾಕೀಮ್ ಸುಲೇಮಾನ್ (25) ಬಂಧಿತ ಆರೋಪಿಗಳಾಗಿದ್ದಾರೆ.
ಗ್ಯಾಸ್ ಕಂಪನಿಯ ಮುಖ್ಯಸ್ಥರಾಗಿದ್ದ ಅಪಹರಣಕ್ಕೊಳಗಾದ ವ್ಯಕ್ತಿ ಜೊತೆ ಹಣಕಾಸು ವಿಚಾರಕ್ಕೆ ಆರೋಪಿಗಳು ಗಲಾಟೆ ಮಾಡಿಕೊಂಡಿದ್ದರು. ಆತನನ್ನು ಕಿಡ್ನಾಪ್ ಮಾಡಿಕೊಂಡು ಮಂಗಳೂರಿಗೆ ಒಯ್ಯುತ್ತಿದ್ದರು. ಚೆಕ್ ಪೋಸ್ಟ್ ಬಳಿ ಪೊಲೀಸರನ್ನು ತಪ್ಪಿಸುವ ಭರದಲ್ಲಿ ಕಾರು ಅಪಘಾತಕ್ಕಿಡಾಗಿದೆ. ನಂತರ ಪೊಲೀಸರಿಂದ ಪಾರಾಗಲು ದಾರಿ ಬದಲಿಸಿ ಶಿರಸಿ ಕಡೆಗೆ ಬಂದಿದ್ದಾರೆ ಎನ್ನಲಾಗಿದೆ. ತಕ್ಷಣ ಗೋವಾ ಪೊಲೀಸರು ಶಿರಸಿ ಠಾಣೆಗೆ ಮಾಹಿತಿ ನೀಡಿದ್ದರಿಂದ ಅಪಹರಣಕಾರರು ಸಿಕ್ಕಿಬಿದ್ದಿದ್ದಾರೆ.
ಶಿರಸಿ ಪೊಲೀಸರು ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ, ಸಿಪಿಐ ಬಿ.ಗಿರೀಶ್ ಮುಂದಾಳತ್ವದಲ್ಲಿ ಮಾರುಕಟ್ಟೆ ಠಾಣೆ ಪಿಎಸ್ಐ ಶಶಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಆರೋಪಿಗಳನ್ನು ಗೋವಾ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಶಿರಸಿ ಪೊಲೀಸರು ಮಾಹಿತಿ ನೀಡಿದ್ದಾರೆ.