ಮಡಿಕೇರಿ: ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು 2004ರಿಂದ 2013ರವರೆಗೆ ಚುನಾವಣಾ ಆಯೋಗ ಮತ್ತು ಲೋಕಾಯುಕ್ತರಿಗೆ ಸಲ್ಲಿಸಿರುವ ತಮ್ಮ ಆಸ್ತಿ ವಿವರದ ಬಗ್ಗೆ ಸಂಶಯವಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಮೂಲಕ ತನಿಖೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ವಕ್ತಾರ ಪಿ.ಬಿ.ತಿಮ್ಮಯ್ಯ ಶಾಸಕ ಕೆ.ಜಿ.ಬೋಪಯ್ಯ ಅವರು, ಜನಪ್ರತಿನಿಧಿಯಾದ ನಂತರ ಅವರ ಆದಾಯದಲ್ಲಿ ಶೇ.47ರಷ್ಟು ಹೆಚ್ಚಳವಾಗಿರುವುದು ಅವರು ಈ ಹಿಂದೆ ಲೋಕಾಯುಕ್ತ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರದಿಂದ ತಿಳಿದು ಬಂದಿದೆ ಎಂದು ಆರೋಪಿಸಿದರು.
ಜನಪ್ರತಿನಿಧಿಯಾದವರು ಇಷ್ಟೊಂದು ಪ್ರಮಾಣದಲ್ಲಿ ಆಸ್ತಿ ಗಳಿಸಲು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ಸಂಶಯವಿದ್ದು, ಆಸ್ತಿ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ ಮತ್ತು ಕೊಡಗು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದರು.
ಬೋಪಯ್ಯ ಅವರು 1998ರಿಂದ ಚುನಾವಣಾ ಕಣದಲ್ಲಿದ್ದು, 2004ರಲ್ಲಿ ಅವರು ವಕೀಲ ವೃತ್ತಿಯಿಂದ 60 ಸಾವಿರ ಆದಾಯ ಬಂದಿದ್ದಾಗಿ ತಮ್ಮ ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ. ಅವರು 2013ರಲ್ಲಿ ಸಲ್ಲಿಸಿರುವ ಆಸ್ತಿ ವಿವರದಲ್ಲಿ ತಮ್ಮ ವಾರ್ಷಿಕ ಆದಾಯವನ್ನು 28.41. ಲಕ್ಷ ರೂ.ಗಳೆಂದು ವಿವರಿಸಿದ್ದು, ಈ 10 ವರ್ಷಗಳ ಅವಧಿಯಲ್ಲಿ ಅವರ ವಾರ್ಷಿಕ ಆದಾಯ ಶೇ.47ರಷ್ಟು ಹೆಚ್ಚಳವಾಗಲು ಇರುವ ಆದಾಯದ ಮೂಲಗಳು ಯಾವುದು ಎಂಬುವುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂಬಂಧವಾಗಿ ಪಕ್ಷದ ವತಿಯಿಂದ ‘ಲೆಕ್ಕಕೊಡಿ ಬೋಪಯ್ಯಣ್ಣ’ ಆಂದೋಲನವನ್ನು ರೂಪಿಸುವುದರೊಂದಿಗೆ ನಾಲ್ಕು ಹಂತದ ಕಾರ್ಯಕ್ರಮ ಹಮ್ಮಿಕೊಳ್ಳಲಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್, ಪ್ರಮುಖರಾದ ಬೊಳ್ಳಂಡ ಶರಿ ಹಾಗೂ ನಾಪೋಕ್ಲು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಕೌಶಿಕ್ ಉಪಸ್ಥಿತರಿದ್ದರು.