ತುಮಕೂರು: ದೃಢತೆ, ಧೈರ್ಯ, ಧೀಮಂತಿಕೆ, ಸಾಧನೆ, ಸಂಸ್ಕøತಿಯ ಧ್ವನಿಯೇ ಸ್ವಾಮಿ ವಿವೇಕಾನಂದರು. ಆತ್ಮಾಭಿಮಾನ, ಸೇವೆ, ಆತ್ಮವಿಶ್ವಾಸ, ಆತ್ಮಭಕ್ತಿ ವಿಚಾರಗಳ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿದ್ದರು. ಇಂತಹ ನಿಲುವುಗಳು ಯುವಕರಿಗೆ ಪ್ರೇರಣೆ ನೀಡಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠವು ಮಂಗಳವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 158 ನೇ ಜಯಂತಿ ಹಾಗೂ ರಾಷ್ಟ್ರೀಯ ಯುವದಿನವನ್ನು ಉದ್ಘಾಟಿಸಿ ಮಾತನಾಡಿದರು.
ಯಾವ ಮನುಷ್ಯ ಕಾಲಕ್ಕಿಂತ ಮುಂಚಿತವಾಗಿ ಯೋಚಿಸುತ್ತಾನೋ ಅವನಿಗೆ ನಿಂದನೆ, ಅಡಚಣೆ, ವಿರೋಧಗಳು ಎದುರಾಗುತ್ತವೆ. ಅವುಗಳನ್ನು ಸ್ವಾಗತಿಸಿ ಮುನ್ನುಗ್ಗಬೇಕು. ಮಾನಸಿಕ ಪರಿಶುದ್ಧತೆಯ ಜೊತೆಗೆ ಶುದ್ದವಾದ ವ್ಯಕ್ತಿತ್ವ, ಶ್ರದ್ಧೆ, ಭಕ್ತಿ ಇರಬೇಕು. ಆಧ್ಯಾತ್ಮಿಕತೆ, ನೈತಿಕತೆ ಹೊಂದಿದ್ದರೆ ಒಬ್ಬ ವ್ಯಕ್ತಿ ಏನನ್ನಾದರೂ ಸಾಧಿಸಬಹುದು ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಅನಸೂಯ ಕೆ. ವಿ., ಜಗತ್ತು ಕಂಡಂತಹ ಅಪ್ರತಿಮ ಸನ್ಯಾಸಿ ಸ್ವಾಮಿ ವಿವೇಕಾನಂದರು. ಅವರ ನಿಲುವುಗಳನ್ನು ಅನುಸರಿಸಿದರೆ ಸಾಮಾನ್ಯನು ಕೂಡ ಅಸಮಾನ್ಯನಾಗಬಹುದು ಎಂದರು.
ವಿವೇಕಾನಂದರು ಸದೃಢ ಯುವಕರಷ್ಟೇ ರಾಷ್ಟ್ರನಿರ್ಮಾಣ ಮಾಡಬಲ್ಲರು ಎಂದು ನಂಬಿದ್ದರು. ಶಾರೀರಿಕ ಆರೋಗ್ಯ ಎಷ್ಟು ಮುಖ್ಯವೊ ಹಾಗೇ ಮನಸಿಕ ಆರೋಗ್ಯವೂ ಅಷ್ಟೆ ಮುಖ್ಯ. ಯುವಕರು ಈ ಎರಡರ ನಡುವೆ ಸಮತೋಲನ ಸಾಧಿಸಬೇಕು ಎಂದರು.
ಕುಲಸಚಿವ ನರಸಿಂಹಪ್ಪ, ಸ್ವಾಮಿ ವಿವೇಕಾನಂದ ಅದ್ಯಯನ ಪೀಠದ ಸಂಯೋಜಕ ಹಾಗೂ ವಿವಿ ಕಲಾ ಕಾಲೇಜಿನ ಉಪಪ್ರಾಂಶುಪಾಲ ಟಿ. ಎನ್. ಹರಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.