ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮುಸಲ್ಮಾನರ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿರುವ ಕೊಡಗು ಮುಸ್ಲಿಂ ಸಮಾಜ, ಡಿಸೆಂಬರ್ 3 ರಂದು ನಗರದಲ್ಲಿ ಬೃಹತ್ ಮೆರವಣಿಗೆ ಮತ್ತು ಪ್ರತಿಭಟನಾ ಸಭೆಯನ್ನು ನಡೆಸಲು ನಿರ್ಧರಿಸಿದೆ.
ನಗರದ ಹೊಟೇಲೊಂದರ ಸಭಾಂಗಣದಲ್ಲಿ ನಡೆದ ಕೊಡಗು ಮುಸ್ಲಿಂ ಸಮಾಜದ ಮಹತ್ವದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಮಾಜದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಮುಸಲ್ಮಾನರ ಭಾವನೆಗೆ ಧಕ್ಕೆಯಾಗುತ್ತಿದ್ದರೂ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸದೆ ಇರುವ ಕಾರಣ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿರುವುದಾಗಿ ತಿಳಿಸಿದರು.
ಡಿಸೆಂಬರ್ 3 ರಂದು ನಗರದ ಗದ್ದುಗೆ ಬಳಿಯಿಂದ ಗಾಂಧಿ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ನಡೆಯುವ ಸಭೆಯಲ್ಲಿ ವಿವಿಧ ಹಕ್ಕೊತ್ತಾಯಗಳ ಮೂಲಕ ಸರ್ಕಾರದ ಗಮನ ಸೆಳೆೆಯಲಾಗುವುದೆಂದು ಕೆ.ಎಂ. ಇಬ್ರಾಹಿಂ ತಿಳಿಸಿದರು.
ಮುಸ್ಲಿಂ ಸಮಾಜದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರದ ಸಬಲೀಕರಣದ ಉದ್ದೇಶವನ್ನು ಸಮಾಜ ಹೊಂದಿದೆ ಎಂದರು. ಐಗೂರಿನ ಮಸೀದಿಗೆ ಪ್ರವೇಶ ಮಾಡಿ ಕುರಾನ್ ಅನ್ನು ಸುಟ್ಟುಹಾಕಿದ ಘಟನೆ ನಡೆದು 15 ದಿನಗಳು ಕಳೆೆದರೂ ಇಲ್ಲಿಯವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಜಿಲ್ಲೆಯ ವಿವಿಧೆಡೆ ಪ್ರತಿಭಟನೆಗಳು ಕೂಡ ನಡೆದಿವೆ. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸೂಕ್ತ ಕ್ರಮಕ್ಕಾಗಿ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಇಲ್ಲಿಯವರೆಗೆ ತಪ್ಪಿತಸ್ಥರ ಬಂಧನವಾಗಿಲ್ಲ. ಅಲ್ಪಸಂಖ್ಯಾತರ ಮತ ಪಡೆದು ಅಧಿಕಾರದಲ್ಲಿ ಇರುವವರು ಯಾವುದೇ ಸ್ಪಂದನೆ ನೀಡುತ್ತಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ಹಾಗೂ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಐಗೂರು ಘಟನೆಯ ಬಗ್ಗೆ ವಿಶೇಷ ಸಭೆ ಕರೆದು ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಜಿಲ್ಲೆಯ ಶಾಸಕರು ಮತ್ತು ಸಂಸದರು ಸಾಂತ್ವನ ಹೇಳದೆ ಮೌನ ವಹಿಸಿರುವುದನ್ನು ಗಮನಿಸಿದರೆ ಪವಿತ್ರ ಕುರಾನ್ ಗ್ರಂಥವನ್ನು ಸುಟ್ಟ ಕ್ರಮವನ್ನು ಸಮರ್ಥಿಸಿಕೊಂಡಂತೆ ಕಂಡು ಬರುತ್ತಿದೆಯೆಂದು ಅಬ್ದುಲ್ ಮಜೀದ್ ಆರೋಪಿಸಿದರು.
ಬಿಜೆಪಿ ಮುಂದಿನ ಚುನಾವಣೆಗಳಲ್ಲಿ ಮುಸಲ್ಮಾನರ ಮತಗಳು ಬೇಡವೆಂದು ಬಹಿರಂಗವಾಗಿ ಘೋಷಿಸಲಿ ಎಂದು ಅವರು ಸವಾಲು ಹಾಕಿದರು. ಪಶು ಸಂಗೋಪನಾ ಇಲಾಖೆಯ ಸಚಿವ ಎ. ಮಂಜು, ತಪ್ಪು ಮಾಡಿದವರನ್ನು ಬಂಧಿಸುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡದೆ ಕೇರಳದಿಂದ ಬಂದವರು ಈ ಕೃತ್ಯ ಮಾಡಿದ್ದಾರೆ ಎಂದು ಹೇಳಿಕೆಯನ್ನಷ್ಟೆ ನೀಡಿರುವುದು ಖಂಡನೀಯವೆಂದು ಅಬ್ದುಲ್ ಮಜೀದ್ ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಅಮಿನ್ ಮೊಹಿಸಿನ್ ಮಾತನಾಡಿ, ಐಗೂರು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಕೊಡ್ಲಿಪೇಟೆ, ಕುಶಾಲನಗರ, ಕಂಡಕೆರೆ ವ್ಯಾಪ್ತಿಯಲ್ಲಿ ಈ ಹಿಂದೆ ಮಸೀದಿಗಳ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ನಡೆದು ದೂರು ದಾಖಲಾಗಿದ್ದರೂ ಇಲ್ಲಿಯವರೆಗೆ ಆರೋಪಿಗಳ ಬಂಧನವಾಗದಿರುವುದೇ ಈ ರೀತಿಯ ಪ್ರಕರಣಗಳು ಮರುಕಳಿಸಲು ಕಾರಣವೆಂದು ಆರೋಪಿಸಿದರು.
ಐಗೂರು ಪ್ರಕರಣವನ್ನು ಪೊಲೀಸರಿಂದ ಭೇದಿಸಲು ಸಾಧ್ಯವಾಗದಿದ್ದಲ್ಲಿ ಸಿಐಡಿ ತನಿಖೆೆಗೆ ಒಪ್ಪಿಸಬೇಕೆಂದು ಅಮಿನ್ ಮೊಹಿಸಿನ್ ಒತ್ತಾಯಿಸಿದರು.
ಹಕ್ಕೊತ್ತಾಯಗಳು:
ಸಭೆೆಯಲ್ಲಿ ಆರು ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು. ಐಗೂರು ಮಸೀದಿಯಲ್ಲಿ ಕುರಾನ್ ಗೆ ಬೆಂಕಿ ಹಚ್ಚಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು, ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸಮಾನ ನಾಗರಿಕ ಸಂಹಿತೆ ಕಾಯ್ದೆಯನ್ನು ಕೈಬಿಡಬೇಕು, ವಾರ್ಷಿಕ ಆಯವ್ಯಯದಲ್ಲಿ ಸರ್ಕಾರ ಅಲ್ಪಸಂಖ್ಯಾತರಿಗೆ ಘೋಷಿಸಿರುವ ಅನುದಾನವನ್ನು 1000 ಕೋಟಿಯಿಂದ 10 ಸಾವಿರ ಕೋಟಿಗೆ ಹೆಚ್ಚಿಸಬೆೇಕು. ಕಳೆದ ವರ್ಷದ ಟಿಪ್ಪು ಜಯಂತಿ ಸಂದರ್ಭ ಅಮಾಯಕರ ವಿರುದ್ಧ ಹೂಡಲಾಗಿರುವ ಕೇಸ್ ಗಳನ್ನು ವಾಪಾಸ್ ಪಡೆಯಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು ಸಭೆ ನಡೆಸುವ ಮೂಲಕ ಅಲ್ಪಸಂಖ್ಯಾತರ ಅಭಿವೃದ್ಧಿ ಬಗ್ಗೆ ಸಮಾಲೋಚಿಸಬೇಕು. ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕೆಂದು ಪ್ರತಿಭಟನೆ ಸಂದರ್ಭ ಒತ್ತಾಯಿಸಲು ಸಭೆ ನಿರ್ಣಯ ಕೈಗೊಂಡಿತು.
ಮುಸ್ಲಿಂ ಸಮಾಜದ ಕಾರ್ಯಾಧ್ಯಕ್ಷ ಪಿ.ಎಂ. ಖಾಸಿಂ, ಖಜಾಂಚಿ ಉಸ್ಮಾನ್ ಹಾಜಿ, ಪ್ರಮುಖರಾದ ಮೊಹಮ್ಮದ್ ಹನೀಫ್, ಹಕೀಂ, ಎ.ಬಿ. ಉಮ್ಮರ್, ಮನ್ಸೂರ್, ಶರೀಫ್, ಉಸ್ಮಾನ್, ಕೆ.ಎ.ಆದಂ ಮತ್ತಿತರರು ಉಪಸ್ಥಿತರಿದ್ದರು.