ಕಾರವಾರ: ಜಿಂದಾಲ್ ಕಂಪನಿಗೆ ಭೂಮಿ ನೀಡಲು ಬಿಜೆಪಿ ಸರ್ಕಾರ ಇದ್ದಾಗಲೇ ಹಣ ನಿಗದಿ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಂದಾಲ್ ಕಂಪನಿಗೆ ಸರ್ಕಾರ ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡಿದೆ ಎಂದು ವಿರೋಧ ಪಕ್ಷಗಳು ವಿನಾ ಕಾರಣ ಆರೋಪ ಮಾಡುತ್ತಿವೆ. ಆದರೆ, ಬಿಜೆಪಿ ಸರ್ಕಾರ ಇದ್ದಾಗಲೇ ಕಂಪನಿಗೆ ಭೂಮಿ ನೀಡಲು ಹಣ ನಿಗದಿ ಮಾಡಲಾಗಿದೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಪುನರ್ ಪರಿಶೀಲನಾ ಉಪ ಸಮಿತಿ ರಚಿಸಲಾಗಿದೆ.
ಸಮ್ಮಿಶ್ರ ಸರ್ಕಾರದ ಮೇಲೆ ವಿರೋಧ ಪಕ್ಷದವರು ಅನಾವಶ್ಯಕವಾಗಿ ಆರೋಪ ಮಾಡುವ ಮುನ್ನ ಅದನ್ನು ಸಂಪೂರ್ಣವಾಗಿ ತಿಳಿದು ಮಾತನಾಡಬೇಕು. ಇಂತಹ ವಿಷಯದಲ್ಲಿ ವಿರೋಧ ಪಕ್ಷ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದರು.
ಕಂಪನಿಯವರು ಸಾವಿರಾರು ಕೋಟಿ ಹೂಡಿಕೆ ಮಾಡಿದ್ದು ಸ್ಥಳೀಯರು ಸೇರಿದಂತೆ ಸಾವಿರಾರು ಜನರಿಗೆ ಉದ್ಯೋಗ ನೀಡಲಾಗಿದೆ. ಸ್ಥಳೀಯವಾಗಿ ಅಭಿವೃದ್ಧಿಯನ್ನೂ ಮಾಡಲಾಗಿದೆ. ಈ ರೀತಿ ವಿರೋಧಗಳ ಮೂಲಕ ಸಮಸ್ಯೆ ಉಂಟಾದರೆ ರಾಜ್ಯದಲ್ಲಿ ಬಂಡವಾಳ ಹೂಡಲು ಯಾರೂ ಮುಂದೆ ಬರದಂತಾಗುತ್ತದೆ. ಮೊದಲೇ ಖರೀದಿಸಿದ ಭೂಮಿಗೆ ಈಗ ಬೆಲೆ ಹೆಚ್ಚಳವಾದರೆ ಏನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.