ಮಡಿಕೇರಿ: ಹರಿಯಾಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಗೆ ಕರ್ನಾಟಕ ತಂಡಕ್ಕೆ ಕೊಡಗಿನ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ.
ಮಡಿಕೇರಿ ಮೆಡಿಕಲ್ ಕಾಲೇಜಿನ ಉದ್ಯೋಗಿ ವಿ.ಎಮ್. ತಷ್ಮ ಥ್ರೋಬಾಲ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವುದರೊಂದಿಗೆ ಕೊಡಗಿಗೆ ಹೆಮ್ಮೆ ತಂದಿದ್ದಾರೆ. ಇವರು, ಮಡಿಕೇರಿ ಸಮೀಪದ ಬೆಟ್ಟಗೇರಿಯ ಮಂಜೇಶ್ ಅವರ ಪತ್ನಿ ಯಾಗಿದ್ದು, ಮದೆನಾಡು ಗೋಳಿಕಟ್ಟೆ ಗ್ರಾಮದ ಮುತ್ತಪ್ಪ ಹಾಗೂ ಗಿರಿಜಾ ದಂಪತಿಗಳ ಪುತ್ರಿ ಯಾಗಿದ್ದಾರೆ. ಇವರು ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವುದು ಖುಷಿಯ ವಿಚಾರವಾಗಿದೆ. ಕ್ರೀಡಾಕೂಟಗಳಲ್ಲಿ ಕೊಡಗಿನವರು ಒಂದಲ್ಲ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಜಿಲ್ಲೆಯನ್ನು ಹಿಂದಿನಿಂದಲೂ ಪ್ರತಿನಿಧಿಸುತ್ತಲೇ ಬಂದಿದ್ದಾರೆ. ಅದರಲ್ಲೂ ಹಾಕಿಯಲ್ಲಿ ಕೊಡಗಿನ ಮಂದಿ ಹೆಚ್ಚಿನ ಸಾಧನೆ ಮಾಡಿರುವುದು ಎದ್ದು ಕಾಣುತ್ತಿದೆ. ಉಳಿದಂತೆ ಕ್ರಿಕೆಟ್, ಫುಟ್ಭಾಲ್ ಹೀಗೆ ಎಲ್ಲ ಆಟಗಳಲ್ಲೂ ತಮ್ಮ ಪ್ರಾತಿನಿಧ್ಯ ವಹಿಸಿರುವುದು ಕಂಡು ಬರುತ್ತದೆ.
ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಯು ಅ.29 ರಿಂದ 31 ರವರೆಗೆ ಹರಿಯಾಣದ ಎ.ಡಿ.ವಿ.ವಿ. ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಕರ್ನಾಟಕ ತಂಡವು ಗೆಲುವನ್ನು ಸಾಧಿಸಲಿ ಎನ್ನುವುದೇ ರಾಜ್ಯದ ಕ್ರೀಡಾಭಿಮಾನಿಗಳ ಬಯಕೆಯಾಗಿದೆ.