ಚಿಕ್ಕಮಗಳೂರು: ಎಂಜಿನಿಯರಿಂಗ್ ಪದವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ 13 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡು ರ್ಯಾಂಕ್ ಗಳಿಸಿರುವ ಎಐಟಿ ಕಾಲೇಜು ವಿದ್ಯಾರ್ಥಿ ಸಚಿನ್ ಕೀರ್ತಿ ಅವರನ್ನ ಚಿಕ್ಕಮಗಳೂರು ತಾಲೂಕಿನ ಮಾಗಡಿ ಕೈಮರದಲ್ಲಿ ಗೌರವಿಸಲಾಯಿತು.
ವರದೇಗೌಡ ಅವರ ನಿವಾಸದ ಅಂಗಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಸಚಿನ್ ಕೀರ್ತಿ ಅವರನ್ನು ಗೌರವಿಸಿದ ವಿಧಾನ ಪರಿಷತ್ ಮಾಜಿ ಶಾಸಕಿ ಎ.ವಿ.ಗಾಯತ್ರಿ ಶಾಂತೇಗೌಡ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ರ್ಯಾಂಕ್ ಗಳಿಸುವುದು ಅಷ್ಟು ಸುಲಭದ ಮಾತಲ್ಲ. 13 ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಜಿಲ್ಲೆಯಲ್ಲಿ ಇತಿಹಾಸ ಬರೆದಿದ್ದಾನೆ. ಕಷ್ಟಗಳನ್ನು ಲೆಕ್ಕಿಸದೆ ಕಠಿಣ ಪರಿಶ್ರಮದೊಂದಿಗೆ ಓದುವ ಮೂಲಕ ಸಚಿನ್ ರ್ಯಾಂಕ್ ಗಳಿಸಿ ಜಿಲ್ಲೆಗೆ, ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ. ಆತನ ಪರಿಶ್ರಮವನ್ನು ಇಂದಿನ ವಿದ್ಯಾರ್ಥಿಗಳು ಆದರ್ಶವಾಗಿಸಿಕೊಂಡು ಓದಬೇಕು ಎಂದು ಕಿವಿಮಾತು ಹೇಳಿದರು.
ಐಇಎಸ್ ಓದುವುದಕ್ಕಾಗಿ ಈಗಾಗಲೇ ತರಬೇತಿಯನ್ನು ಪಡೆದಿರುವ ಸಚಿನ್ ಇನ್ನೂ ಉನ್ನತ ವ್ಯಾಸಂಗಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು. ರಾಜ್ಯ ಗುತ್ತಿಗೆದಾರರ ಸಂಘ ಉಪಾಧ್ಯಕ್ಷ ಕೆ.ಎಸ್.ಶಾಂತೇಗೌಡ ಮಾತನಾಡಿ, ಕಷ್ಟಪಟ್ಟು ಓದಿದರೆ ದೊಡ್ಡ ಸಾಧನೆ ಮಾಡಬಹುದು ಎಂಬುದನ್ನು ಸಚಿನ್ ಕೀರ್ತಿ ಸಾಧಿಸಿ ತೋರಿಸಿದ್ದಾರೆ. ಅವರಂತೆ ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದನ್ನು ಮೈಗೂಡಿಸಿಕೊಳ್ಳಬೇಕು. ಸಚಿನ್ ಉನ್ನತ ವ್ಯಾಸಂಗ ಮಾಡುವುದಾದರೆ ನಾವುಗಳು ಸಹಕಾರ ನೀಡುತ್ತೇವೆ ಎಂದು ಹೇಳಿದರು.