ಗೋಣಿಕೊಪ್ಪಲು: ಜನರು ಅನುಭವಿಸುತ್ತಿರುವ ಸಮಸ್ಯೆಗಳ ಮೂಲ ಅರಿತು ವಸ್ತುಸ್ಥಿತಿ ಬಿಂಬಿಸುವ ಉದ್ದೇಶದಿಂದ ಗೋಣಿಕೊಪ್ಪ ಪ್ರೆಸ್ಕ್ಲಬ್ ವತಿಯಿಂದ ಆಯೋಜಿಸಿರುವ ಜನರತ್ತ ಮಾಧ್ಯಮ ಕಾರ್ಯಕ್ರಮಕ್ಕೆ ನೊಕ್ಯಾ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ಕಾಡಾನೆಗಳಿಂದ ನಿತ್ಯ ಯಾತನೆ ಅನುಭವಿಸುತ್ತಿರುವ ನೊಂದ ಕೃಷಿಕರುಗಳಾದ ಚೆಕ್ಕೇರ ಎಂ. ಬೆಳ್ಯಪ್ಪ ಹಾಗೂ ಚೆಪ್ಪುಡೀರ ಕಾರ್ಯಪ್ಪ ಕಾಡಾನೆಗಳಿಂದ ಬೆಳೆ ಕಳೆದುಕೊಂಡಿರುವ ಭತ್ತದ ಗದ್ದೆಯ ಫೋಟೋ ಕ್ಲಿಕ್ಕಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮದ ಕೃಷಿಕರು ಒಂದಾಗಿ ಸಮಸ್ಯೆ ಅನಾವರಣಗೊಳಿಸಿದರು.
ಬೆಳೆಗಾರ ಚೆಪ್ಪುಡೀರ ಕಾರ್ಯಪ್ಪ ಮಾತನಾಡಿ, ಮಾಧ್ಯಮ ಸಂಘಟನೆಯೊಂದು ನೊಂದವರತ್ತ ತೆರಳಿ ವಸ್ತುಸ್ಥಿತಿಯನ್ನು ಬಿಂಬಿಸುವ ಪ್ರಯತ್ನ ಮೆಚ್ಚುವಂತಹದ್ದು. ಬಹುಶಃ ಇಂತಹ ಕಾರ್ಯಕ್ರಮ ಇದೆ ಮೊದಲು ಎಂಬ ಭಾವನೆ ನನ್ನದು, ಕಾಡಾನೆಗಳ ಉಪಟಳದಿಂದ ನೊಂದಿರುವ ನಮಗೆ ಇಂತಹ ಕಾರ್ಯಕ್ರಮ ಕೃಷಿಯತ್ತ ಹೆಚ್ಚು ಪ್ರೋತ್ಸಾಹ ನೀಡುವಂತೆ ಮಾಡಿದೆ. ಮತ್ತಷ್ಟು ಕಾರ್ಯಕ್ರಮಗಳು ಜನರ ಹಿತ ಕಾಯುವಂತಾಗಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಪ್ರೆಸ್ಕ್ಲಬ್ ನಿರ್ದೇಶಕ ಕಿಶೋರ್ ರೈ ಕತ್ತಲೆಕಾಡು ಮಾತನಾಡಿ, ಸಾಕಷ್ಟು ಜನರಿಗೆ ಮಾಧ್ಯಮಗಳಲ್ಲಿ ತಮ್ಮ ಸುದ್ದಿ ಯಾವ ರೀತಿ ಪ್ರಕಟಗೊಳ್ಳುತ್ತದೆ ಎಂಬ ಮಾಹಿತಿ ಇರುವುದಿಲ್ಲ. ಇದರಿಂದ ಸಾಕಷ್ಟು ಸಾಧನೆ, ಸಮಸ್ಯೆಗಳು ಬೆಳಕು ಕಾಣದಂತಾಗಿದೆ. ಇಂತಹ ಕಾರ್ಯಕ್ರಮಗಳು ಸಕಷ್ಟು ಪರಿಣಾಮಕಾರಿಯಾಗಿ, ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುವಂತಾಗಬೇಕು ಎಂದರು.
ಪ್ರೆಸ್ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ಮಾಧ್ಯಮ ಎಲ್ಲಾ ವರ್ಗದವರನ್ನು ತಲುಪುತ್ತಿಲ್ಲ ಎಂಬ ಮಾತುಗಳಿಗೆ ಮುಕ್ತಿ ಹಾಡಲು ಇಂತಹ ಕಾರ್ಯಕ್ರಮಗಳು ಸಾಕಷ್ಟು ಸಹಕಾರಿಯಾಗಲಿದೆ. ಆದಷ್ಟು ತಳಮಟ್ಟದ ನೈಜ ವರದಿಗಾರಿಕೆ ಮೂಲಕ ಸಮಸ್ಯೆ ಮೂಲವನ್ನು ಆಡಳಿತ ವ್ಯವಸ್ಥೆಗೆ ಮುಟ್ಟಿಸುವ ಕೆಲಸದೊಂದಿಗೆ ಸಮಸ್ಯೆ ಪರಿಹಾರಕ್ಕೆ ಗ್ರಾಮಕ್ಕೆ ತೆರಳಿ ವರದಿ ಮಾಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದರು.
ಹಿರಿಯ ಬೆಳೆಗಾರ ಚೆಪ್ಪುಡೀರ ರಾಮಕೃಷ್ಣ ಮಾತನಾಡಿ, ಜನರತ್ತ ಮಾಧ್ಯಮ ಎಂಬ ವಿನೂತನ ಚಿಂತನೆಯ ಕಾರ್ಯಕ್ರಮ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಸಮಸ್ಯೆ ಪರಿಹಾರಕ್ಕೆ ಈ ಮೂಲಕ ನಾಂದಿ ಹಾಡುವಂತಾಗಲಿ ಎಂದರು. ಪ್ರೆಸ್ಕ್ಲಬ್ ಪ್ರ. ಕಾರ್ಯದರ್ಶಿ ಹೆಚ್. ಕೆ. ಜಗದೀಶ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಸ್ಥಳೀಯ ಕೃಷಿಕ ಮಹೇಶ್ ಉಪಸ್ಥಿತರಿದ್ದರು.