ಮಂಡ್ಯ: ಡಾಂಬರು ಕಾಣದೆ ಹಳ್ಳಕೊಳ್ಳಗಳಿಂದ ಕೂಡಿದ ರಸ್ತೆ. ಆಧುನಿಕ ಕಾಲದಲ್ಲೂ ಹೆಂಚು ಕಾಣದೆ ತೆಂಗಿನಗರಿಗಳ ಸೂರಿನ ಗುಡಿಸಲು. ಚರಂಡಿಗಳಿಲ್ಲದೆ ಮನೆ ಬಳಿಯೇ ಹರಿಯುವ ಕಲುಷಿತ ನೀರು. ಮಕ್ಕಳಿದ್ದರೂ ಅಂಗನವಾಡಿಯಿಲ್ಲದೆ ಪರದಾಡುವ ಜನ. ಇದೆಲ್ಲವೂ ಕಂಡು ಬರುತ್ತಿರುವುದು ನಾಗಮಂಗಲ ತಾಲೂಕಿನ ಅಂಚೆಚಿಟ್ಟನಹಳ್ಳಿ ಪಂಚಾಯಿತಿಯ ಚಿಕ್ಕಜಟಕ ದಾಖಲೆ ಗೊಲ್ಲರಹಟ್ಟಿ ಗ್ರಾಮದಲ್ಲಿ.
ಇನ್ನೂ ಗ್ರಾಮದ ಹೆಣ್ಣುಮಕ್ಕಳಿಗೆ ತಿಂಗಳ ಋತು ಚಕ್ರದ ದಿನ ಬಂತೆಂದರೆ ನರಕ. ಏಕೆಂದರೆ ಈಗಿನ ಕಾಲದಲ್ಲೂ ಹೆಣ್ಣು ಮಕ್ಕಳು ಋತು ಚಕ್ರದ ದಿನಗಳಲ್ಲಿ ಗ್ರಾಮದ ಹೊರಗೆ ಕಳೆಯಬೇಕಂತೆ ಇದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ಊರಿನ ರಂಗಸ್ವಾಮಿಗೆ ಮುಟ್ಟು ಮೈಲಿಗೆ ಆಗುವುದಿಲ್ಲವೆಂತೆ. ಹೆರಿಗೆಯಾದ ಬಳಿಕ ಬಾಣಂತಿಯರನ್ನು 9ದಿನಗಳ ತನಕ ಮನೆಗೆ ಕರೆದುಕೊಂಡು ಬಾರದೇ ಆಸ್ಪತ್ರೆಯಲ್ಲಿ ಇರಿಸುವ ಮೂಲಕ ಮೈಲಿಗೆ ಕಳೆಯುತ್ತಾರೆ.
ಅಭಿವೃದ್ಧಿ ಕುರಿತು ಭಾಷಣ ಬಿಗಿಯುವ ನಮ್ಮ ಜನಪ್ರತಿನಿಧಿಗಳು ಈ ಗ್ರಾಮಗಳತ್ತ ಸುಳಿದ ಬಗ್ಗೆ ಯಾವುದೇ ಸಾಕ್ಷಿಗಳು ಕಂಡು ಬರುತ್ತಿಲ್ಲ. ಇಲ್ಲಿ ಅಭಿವೃದ್ಧಿ ಮರೀಚಿಕೆಯಾಗುತ್ತಿದ್ದು ಗ್ರಾಮಸ್ಥರು ಸಂಕಷ್ಟದ ಬದುಕನ್ನು ಅನುಭವಿಸುತ್ತಿದ್ದಾರೆ.
ಗೊಲ್ಲರಹಟ್ಟಿ ಗ್ರಾಮದಲ್ಲಿ ಸುಮಾರು 50 ಮನೆಗಳಿದ್ದು, ಸುಮಾರು 300 ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ ವಾಸಿಸುವವರ ಪೈಕಿ ಹೆಚ್ಚಿನವರು ಬಡವರಾಗಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಾರೆ. ಗ್ರಾಮದಲ್ಲಿ ಅಂಗನವಾಡಿ ಇಲ್ಲದ ಕಾರಣ ಸುಮಾರು ಹದಿನೈದಕ್ಕೂ ಹೆಚ್ಚು ಮಕ್ಕಳು ಮನೆ ಮುಂದೆ ಅಡ್ಡಾಡಿಕೊಂಡು ಕಾಲ ಕಳೆಯುತ್ತವೆ.
ಇನ್ನು 1ರಿಂದ 5ರವರೆಗೆ ಕಿರಿಯ ಪ್ರಾಥಮಿಕ ಶಾಲೆಯಿದ್ದು, ಈ ಶಾಲೆಯಲ್ಲಿ ಸುಮಾರು 15ಮಕ್ಕಳು ಕಲಿಯುತ್ತಿದ್ದಾರೆ. ಒಬ್ಬರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿರಿಯ ಪ್ರಾಥಮಿಕ, ಪ್ರೌಢಶಾಲೆಗೆ ಹೋಗಲು ತೊಂದರೆಯಾಗುವ ಕಾರಣದಿಂದಾಗಿ ಮೂವತ್ತಕ್ಕೂ ಹೆಚ್ಚು ಮಕ್ಕಳು ನಾಗಮಂಗಲದ ವಿದ್ಯಾರ್ಥಿ ನಿಲಯಗಳಲ್ಲಿ ವಾಸ್ತವ್ಯ ಹೂಡಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಗ್ರಾಮಕ್ಕೆ ಕಾಲಿಟ್ಟವರಿಗೆ ಮೂಲಸೌಲಭ್ಯಗಳ ಕೊರತೆಯಿರುವುದು ಕಣ್ಣಿಗೆ ರಾಚುತ್ತದೆ. ಹಳ್ಳಕೊಳ್ಳದ ರಸ್ತೆಗಳು ಇದುವರೆಗೆ ಡಾಂಬರು ಕಂಡಿಲ್ಲ. ಹೀಗಾಗಿ ಮಳೆ ಬಂದರೆ ಕೆಸರು, ಬಿಸಿಲು ಬಂದರೆ ಧೂಳು ಎಂಬಂತಾಗಿದೆ. ಈ ರಸ್ತೆಯಲ್ಲಿ ನಡೆದುಕೊಂಡು ಬರುವುದೇ ಕಷ್ಟ ಹೀಗಿರುವಾಗ ವಾಹನಗಳಲ್ಲಿ ಬರುವುದೆಂದರೆ ಸರ್ಕಸ್ ಮಾಡಿದಂತಾಗಿದೆ.
ರಾಜ್ಯವನ್ನು ಗುಡಿಸಲು ಮುಕ್ತ ಮಾಡುತ್ತೇವೆ ಎಂದು ಬೊಬ್ಬಿರಿಯುವ ಆಡಳಿತರೂಢರಿಗೆ ಗೊಲ್ಲರಬಟ್ಟಿ ಅಪವಾದ ಎಂಬಂತಿದೆ. ಇಲ್ಲಿ ಸುಮಾರು 15ಕ್ಕೂ ಹೆಚ್ಚು ಕುಟುಂಬಗಳು ಗಾಳಿಬೆಳಕಾಡದ, ತೆಂಗಿನ ಗರಿಗಳ ಛಾವಣಿಯ ಪುಟ್ಟ ಗುಡಿಸಲ್ಲಿ ವಾಸಿಸುತ್ತಿದ್ದು, ಇವರಿಗೆ ಮನೆ ಕಟ್ಟಿಕೊಡುವ ಕೆಲಸವನ್ನು ಮಾಡಿಲ್ಲ ಹೀಗಾಗಿ ಹೆಚ್ಚಿನವರು ಗುಡಿಸಿಲಿನಲ್ಲಿ ಹೀನಾಯ ಬದುಕನ್ನು ಸಾಗಿಸುತ್ತಿದ್ದಾರೆ.
ಅಭಿವೃದ್ಧಿ ಹೊಂದುತ್ತಿರುವ ಇಂತಹ ದಿನಗಳಲ್ಲಿಯೂ ಇನ್ನು ಕೂಡ ಮೂಲಭೂತ ಸೌಲಭ್ಯ ದೊರೆಯದೆ, ಕಷ್ಟದಲ್ಲಿ ಜೀವನ ಸಾಗಿಸುವ ಜನರತ್ತ ಚುನಾವಣೆ ಬಳಿಕವಾದರೂ ನಾಯಕರು ಕೃಷೆತೋರುತ್ತಾರಾ ಎಂಬುದನ್ನು ಕಾದು ನೋಡಬೇಕಿದ