ನವದೆಹಲಿ, : ದಿನೇ ದಿನೇ ಶಾಸಕರೂ, ಜನತೆಯೂ ಕಾತರದಿಂದ ಸಂಪುಟ ವಿಸ್ತರಣೆಗೆ ಕಾಯುತ್ತಿದ್ದಾರೆ. ಸೋಮವಾರವೇ ಸಂಪುಟ ಸೇರಲಿರುವವರ ಹೆಸರು ಹೊರಬೀಳಲಿದೆ ಎಂದು ಹೇಳಲಾಗಿತ್ತಾದರೂ ಮಂಗಳವಾರವೂ ನೂತನ ಸಚಿವರ ಹೆಸರುಗಳು ಹೊರ ಬೀಳುವ ಸಂಭವ ಕಾಣುತ್ತಿಲ್ಲ.
ಸೋಮವಾರ ರಾತ್ರಿ ಬಿಜೆಪಿ ರಾಷ್ಟ್ರೀಯ ಆದ್ಯಕ್ಷ ಜೆ.ಪಿ. ನಡ್ಡ ಭೇಟಿ ಮಾಡಿ ಸುದೀರ್ಘವಾದ ಸಮಾಲೋಚನೆ ನಡೆಸಿದ್ದಾರೆ. ಆದರೆ ಹೈಕಮಾಂಡ್ ನಾಯಕರಿಂದ ಸಚಿವ ಸಂಪುಟಕ್ಕೆ ಅನುಮೋದನೆ ಸಿಕ್ಕಿಲ್ಲ. ಇದರಿಂದ ಸಂಪುಟ ವಿಸ್ತರಣೆ ಇನ್ನಷ್ಟು ವಿಳಂಬವಾಗುತ್ತಿದ್ದು ಗುರುವಾರ (ಆಗಸ್ಟ್ 5) ಅಥವಾ ಶುಕ್ರವಾರ (ಆಗಸ್ಟ್ 6) ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸಂಪುಟ ವಿಸ್ತರಣೆಯಲ್ಲಿ ತೊಡಕಾಗಿರುವುದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಕೋ ಬೇಡವೋ?, ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ?
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಬಂದು ಬಿಜೆಪಿ ಸರ್ಕಾರ ರಚನೆ ಆಗಲು ಕಾರಣಕರ್ತರಾದ ವಲಸೆ ಸಚಿವರ ಪೈಕಿ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕೋ ಬೇಡವೋ? ತಮ್ಮ ರಾಸಲೀಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇರುವ ಸಿಡಿಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯಗಳಿಂದ ತಡೆಯಾಜ್ಞೆ ತಂದಿರುವ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ? ಈ ಸರ್ಕಾರಕ್ಕೆ ಇನ್ನು ಒಂದು ಮುಕ್ಕಾಲು ವರ್ಷ ಮಾತ್ರ ಬಾಕಿ ಇರುವುದರಿಂದ ಒಂದೇ ಸಲಕ್ಕೆ 30 ಜನರನ್ನು ಸಚಿವ ಸಂಪುಟ ಸೇರಿಸಿಕೊಳ್ಳಬೇಕೋ ಅಥವಾ ಕೆಲವು ಸ್ಥಾನಗಳನ್ನು ಹಾಗೆ ಇಟ್ಟುಕೊಳ್ಳಬೇಕೋ? ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿ ಮಾಡಬೇಕೋ ಬೇಡವೋ? ಮಾಡಿದರೆ ಎಷ್ಟು ಜನರನ್ನು ಮಾಡಬೇಕು ಮತ್ತು ಯಾವ ಮಾನದಂಡ ಅನುಸರಿಸಬೇಕು? ಕೆಲವು ಹಿರಿಯರನ್ನು ಸಂಪುಟದಿಂದ ಕೈಬಿಡಬೇಕಾ ಬೇಡವಾ? ಈ ವಿಷಯದಲ್ಲಿ ಯಾವ ನಿಲುವು ತೆಗೆದುಕೊಳ್ಳಬೇಕು? ಯಾರನ್ನು ಕೈಬಿಡಬೇಕು? ಎಂಬ ವಿಷಯಗಳೇ ಇನ್ನೂ ಹೈಕಮಾಂಡ್ ಒಮ್ಮತಕ್ಕೆ ಬರಲು ಸಾದ್ಯವಾಗುತ್ತಿಲ್ಲ ಎನ್ನಲಾಗಿದೆ.
ಇನ್ನೊಂದೆಡೆ ಅರವಿಂದ ಬೆಲ್ಲದ್, ಲಕ್ಷಣ ಸವದಿ, ಸಿ ಸಿ ಪಾಟೀಲ್, ಸುನಿಲ್ ವಲ್ಯಾಪುರ, ರಾಜೂಗೌಡ ಮತ್ತು ಸತೀಶ್ ರೆಡ್ಡಿ, ಹೊಳಲ್ಕೆರೆ ಚಂದ್ರಪ್ಪ ಕೂಡ ದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಚಿವರನ್ನಾಗಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ.
ಸಂಪುಟ ವಿಸ್ತರಣೆ ತಡವಾಗುತ್ತಿರುವುದರಿಂದ ಮಂಗಳವಾರ ಬೆಳಿಗ್ಗೆಯೇ ಬೆಂಗಳೂರಿಗೆ ತೆರಳಬೇಕಿದ್ದ ಬಸವರಾಜ ಬೊಮ್ಮಾಯಿ ದೆಹಲಿಯಲ್ಲೇ ಠಿಕಾಣಿ ಹೂಡಿದ್ದಾರೆ.
ಬೊಮ್ಮಾಯಿ- ನಡ್ಡಾ ಭೇಟಿ ಬಳಿಕವೂ ಬಗೆ ಹರಿಯದ ಸಂಪುಟ ವಿಸ್ತರಣೆಯ ತೊಡಕು
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.