ಬೆಂಗಳೂರು : ಈಗಾಗಲೇ ಮಾಜಿ ಮುಖ್ಯ ಮಂತ್ರಿ ಬಿ ಯಸ್ ಯಡಿಯೂರಪ್ಪ ಮಂತ್ರಿ ಮಂಡಲದ ವಿಷಯವಾಗಿ ನಾನು ಮಧ್ಯಪ್ರವೇಶ ಮಾಡಲ್ಲ ಎಂದಿದ್ದರೂ ಕೂಡ ಆಕಾಂಕ್ಷಿಗಳು ಬರುವುದು ತಪ್ಪುತ್ತಿಲ್ಲ. ನನ್ನ ಬಳಿಯೂ ಯಾರ ಕೂಡ ಬರಬಾರದು ಎಂದು ಆದೇಶಿಸಿದ್ದರೂ ಕೂಡ ಸುಮ್ಮನಾಗದ ಸಚಿವ ಸ್ಥಾನದ ಆಕಾಂಕ್ಷಿಗಳು ಯಡಿಯೂರಪ್ಪ ಭೇಟಿಗೆ ಬರುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದಲೂ ನಿತ್ಯ ಶಾಸಕರು ಕಾವೇರಿ ನಿವಾಸಕ್ಕೆ ಬರುತ್ತಿದ್ದು, ಇವತ್ತು ಬೆಳಿಗ್ಗೆಯಿಂದಲೂ ಒಂದಷ್ಟು ಜನ ಶಾಸಕರು ಕಾವೇರಿ ಗೆ ಬಂದಿದ್ದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಕ್ಯಾಬಿನೆಟ್ ನಲ್ಲಿ ಮಂತ್ರಿ ಆಗಲು ಕಸರತ್ತು ನಡೆಸುತ್ತಿರುವ ಸಚಿವ ಸ್ಥಾನದ ಆಕಾಂಕ್ಷಿಗಳು, ಮಾಜಿ ಮುಖ್ಯಮಂತ್ರಿ ಗಳ ಕಾವೇರಿ ನಿವಾಸದ ಬಳಿ ದಿನ ನಿತ್ಯ ಬರ್ತಿದ್ದು, ತಮಗೆ ಸಚಿವ ಸ್ಥಾನ ಕೊಡಿಸುವಂತೆ ದುಂಬಾಲು ಬಿದ್ದಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ಶಿವನಗೌಡ ನಾಯಕ್ ಸೇರಿದಂತೆ ಹಲವು ಶಾಸಕರು ಬಿಎಸ್ವೈ ಭೇಟಿಗೆ ಆಗಮಿಸಿದ್ರು. ಆದರೆ ಯಡಿಯೂರಪ್ಪ ಸ್ನಾನಕ್ಕೆ ತೆರಳಿದ್ದಾರೆಂದು ಆವರ ಆಪ್ತರು ಹೇಳಿದ ನಂತರ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ಸು ತೆರಳಿದ್ರು. ಎಲ್ಲೋ ಒಂದು ಕಡೆ ಶಾಸಕರ ಭೇಟಿಗೆ ಮಾಜಿ ಸಿಎಂ ಯಡಿಯೂರಪ್ಪ ಇಚ್ಚಿಸುತ್ತಿಲ್ಲ ಎಂದು ಹೇಳಲಾಗ್ತಿದೆ.
ಈಗಾಗಲೇ ಅಧಿಕಾರದಿಂದ ಕೆಳಗೆ ಇಳಿದಿರುವ ಮಾಜಿ ಸಿಎಂ ಯಡಿಯೂರಪ್ಪ ಸದ್ಯಕ್ಕೆ ಕಾವೇರಿ ನಿವಾಸದಲ್ಲಿ ಸುಮ್ಮನೆ ಇದ್ದಾರೆ. ಆದರೆ ಬಂದ ಶಾಸಕರ ಭೇಟಿಗೆ ಮಾತ್ರ ಅವರು ಮನಸ್ಸು ಮಾಡುತ್ತಿಲ್ಲ. ಯಾಕೆಂದರೆ ಹೀಗಾಗಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯನ್ನು ವಿರೋಧ ಪಕ್ಷಗಳು ರಬ್ಬರ್ ಸ್ಟ್ಯಾಂಪ್ ಸಿಎಂ ಎಂದು ಟೀಕೆ ಮಾಡುತ್ತಿವೆ. ಹೀಗಾಗಿ ಮಂತ್ರಿ ಮಂಡಲ ದಲ್ಲಿ ಏನಾದರೂ ತಾನು ಮಧ್ಯಪ್ರವೇಶ ಮಾಡಿದ್ರೆ ಎಲ್ಲಿ ತಾನು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂದು ಶಾಸಕರ ಭೇಟಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗ್ತಿದೆ.
ಮಂತ್ರಿ ಮಂಡಲ ಅನ್ನೋದು ಜೇನು ಗೂಡಿಗೆ ಕೈ ಹಾಕಿದಂತಾಗಿದೆ. ಬಿಜೆಪಿ ಸರ್ಕಾರದ ಅವಧಿ ಇನ್ನೂ 21 ತಿಂಗಳು ಮಾತ್ರ. ಹೀಗಾಗಿ ಮಂತ್ರಿ ಸ್ಥಾನ ಪಡೆಯಲು ಹಿರಿಯರು ಸೇರಿದಂತೆ ಕಿರಿಯರು ಪೈಪೋಟಿಗಿಳಿದಿದ್ದಾರೆ. ಇಂತವರನ್ನು ಸಮಾಧಾನ ಪಡಿಸಲು ಸಿಎಂ ಬಸವರಾಜ್ ಬೊಮ್ಮಾಯಿ ಅವ್ರು ಯಾವ ರೀತಿ ತಂತ್ರ ಮಾಡ್ತಾರೆ ಎಂಬುದೇ ಸದ್ಯಕ್ಕೆ ಇರುವ ಕುತೂಹಲ.
ಮಂತ್ರಿ ಮಂಡಲ ರಚನೆಯಲ್ಲಿ ನಾನಿಲ್ಲ ಅಂದರೂ ಯಡಿಯೂರಪ್ಪ ಮನೆಗೆ ಆಕಾಂಕ್ಷಿಗಳ ಭೇಟಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.