ಬೆಂಗಳೂರು – ಮಹಾರಾಷ್ಟ್ರ , ಕೇರಳ ಮತ್ತು ಇನ್ನಿತರ ರಾಜ್ಯಗಳಿಂದ ರಾಜಧಾನಿ ಬೆಂಗಳುರಿಗೆ ಆಗಮಿಸುವ ಪ್ರಯಾಣಿಕರು ಕೊರೋನ ನೆಗೆಟಿವ್ ವರದಿ ಹೊಂದಿಲ್ಲದಿದ್ದರೆ ಅವರನ್ನು 7 ದಿನಗಳ ಕಾಲ ಕ್ವಾರಂಠೈನ್ ಗೆ ಒಳಪಡಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡುತಿದ್ದ ಅವರು , ನೆಗೆಟಿವ್ ವರದಿ ಹೊಂದಿಲ್ಲದ ಅಂತಾರಾಜ್ಯ ಪ್ರಯಾಣಿಕರನ್ನು ಕ್ವಾರಂಟೈನ್ಗೆ ಒಳಪಡಿಸುವ ಕಾರ್ಯ ಸೋಮವಾರದಿಂದಲೇ ಜಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.
ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರನ್ನು ಬಿಬಿಎಂಪಿ ಸಿಬ್ಬಂದಿಗಳು ಹಾಗೂ ಪೊಲೀಸರು ಜಂಟಿ ತಪಾಸಣೆ ನಡೆಸಲಿದ್ದಾರೆ. ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳದೆ ಇಲ್ಲಿಗೆ ಬರುವ ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆ ಕ್ವಾರಂಟೈನ್ಗೆ ಒಳಪಡಿಸುವಂತೆ ವಲಯ ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.ಆರ್ಟಿಪಿಸಿಆರ್ ವರದಿ ನೀಡಲು ವಿಳಂಭವಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿರುವ ಹಿನ್ನಲೆಯಲ್ಲಿ ಕೊರೊನಾ ತಪಾಸಣೆ ನಡೆಸುವ ಲ್ಯಾಬ್ಗಳು 24 ಗಂಟೆಯೊಳಗೆ ವರದಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ನಗರದಲ್ಲಿ ಪ್ರತಿನಿತ್ಯ 500ರೊಳಗೆ ಸೋಂಕಿತರು ಪತ್ತೆಯಾಗುತ್ತಿರುವುದರಿಂದ ಯಾವುದೇ ಅತಂಕ ಇಲ್ಲ. ಆದರೂ ಸೋಂಕಿನ ಪ್ರಮಾಣ ಮತ್ತಷ್ಟು ಇಳಿಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸೋಂಕು ತಡೆಗಟ್ಟೆಲು ಮತ್ತೆ ವಿಕೇಂಡ್ ಲಾಕ್ಡೌನ್ ಜಾರಿ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಅವರು ಹೇಳಿದರು.ಈಗಾಗಲೇ ಲಸಿಕೆ ಪಡೆದವರ ಮೇಲೆ ಸೋಂಕು ಪರಿಣಾಮ ಬೀರುವುದು ಕಡಿಮೆ. ಹೀಗಾಗಿ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸುವತ್ತ ಗಮನ ಹರಿಸಿದ್ದೇವೆ. ಕಳೆದ ತಿಂಗಳು ನೀರಿಕ್ಷೆಯಷ್ಟು ಲಸಿಕೆ ಲಭ್ಯವಾಗಿಲ್ಲ. ಈ ತಿಂಗಳು ಲಸಿಕೆ ಸಿಗುವ ಸಾಧ್ಯತೆ ಇದೆ.
ನಗರದಲ್ಲಿ ಪ್ರತಿನಿತ್ಯ ಒಂದೂವರೆ ಲಕ್ಷ ಲಸಿಕೆ ಹಾಕುವ ಸಾಮಥ್ರ್ಯ ಹೊಂದಿದ್ದೇವೆ. ನಮಗೆ ಅಷ್ಟು ಲಸಿಕೆ ಲಭ್ಯವಾದರೆ, ಎಲ್ಲರಿಗೂ ಹಂತ ಹಂತವಾಗಿ ಲಸಿಕೆ ಹಾಕಲು ಸಿದ್ದರಿದ್ದೇವೆ ಎಂದು ಅವರು ವಿವರಿಸಿದರು. ಮೂರನೇ ಅಲೆಯಲ್ಲಿ ಸಂಭವಿಸಬಹುದಾದ ಅನಾಹುತ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಮ್ಲಜನಕ ಘಟಕ ಅಳವಡಿಸಿಕೊಳ್ಳುವಂತೆ ನಾವು ಮಾಡಿಕೊಂಡ ಮನವಿಗೆ ಸ್ಪಂದಿಸಿರುವ ಕೆಲವು ಖಾಸಗಿ ಆಸ್ಪತ್ರೆಯವರು ಪ್ಲಾಂಟ್ ಸ್ಥಾಪಿಸಿಕೊಂಡಿದ್ದಾರೆ. ನಾವು ಒಂದು ಬಿಬಿಎಂಪಿ ಆಸ್ಪತ್ರೆಯಲ್ಲಿ ಘಟಕ ಸ್ಥಾಪನೆ ಮಾಡಿದ್ದೇವೆ.ಒಟ್ಟಾರೆ, ಮೂರನೆ ಅಲೆ ಪರಿಣಾಮ ಎದುರಿಸಲು ನಾವು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ. ಜನ ಆತಂಕಕ್ಕೆ ಒಳಗಾಗಬಾರದು. ಆದರೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಜನದಟ್ಟಣೆ ಪ್ರದೇಶಗಳಿಗೆ ತೆರಳದಂತೆ ನೋಡಿಕೊಳ್ಳುವ ಮೂಲಕ ಮಹಾಮಾರಿಯಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.