ಬೆಂಗಳೂರು, -ರಾಜಕೀಯ ನಾಯಕರು ಹಾಗೂ ಮತ್ತಿತರರ ಗಣ್ಯ ವ್ಯಕ್ತಿಗಳ ಫೋನ್ ಕದ್ದಾಲಿಕೆ ಹಾಗೂ ಪೆಗಾಸಸ್ ಬೇಹುಗಾರಿಕೆ ವಿರೋಧಿಸಿ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಾಜಭವನಕ್ಕೆ ಮುತ್ತಿಗೆ ಹಾಕಲು ನುಗ್ಗಿದ ಕಾಂಗ್ರೆಸ್ ನಾಯಕರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು.
ಪೆಗಾಸಸ್ ಬೇಹುಗಾರಿಕೆ ನಡೆಸುವುದನ್ನು ತೀವ್ರವಾಗಿ ವಿರೋಧಿಸಿರುವ ಕಾಂಗ್ರೆಸ್ ಶಾಸಕರು ಮುಖಂಡರುಗಳು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿ ರಾಜಭವನ ಮುತ್ತಿಗೆ ಹಾಕಿದರು.
ಪೆಗಾಸಸ್ ಬೇಹುಗಾರಿಕೆ ವಿರುದ್ಧ ದೇಶಾದ್ಯಂತ ಇಂದು ಕಾಂಗ್ರೆಸ್ ಪ್ರತಿಭಟನೆ ನಡೆಯುತ್ತಿದ್ದು ರಾಜ್ಯದಲ್ಲೂ ಕೈ ಶಾಸಕರು ಮುಖಂಡರುಗಳು ವಿಧಾನಸೌಧ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿ ನಂತರ ಮೆರವಣಿಗೆಯನ್ನು ಹೊರಟು ರಾಜಭವನಕ್ಕೆ ಮುತ್ತಿಗೆ ಹಾಕಿದರು.
ಪ್ರತಿಭಟನೆಗೂ ಮುನ್ನ ಬೆಳಗ್ಗೆ ವಿಧಾನಸೌಧದಲ್ಲಿ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಿ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಬಸನಗೌಡ ತುರವಿಹಾಳ್ ಅವರನ್ನು ಸಿದ್ದರಾಮಯ್ಯ ಅಭಿನಂದಿಸಿದರು.
ಶಾಸಕಾಂಗ ಸಭೆಯ ಬಳಿಕ ಕಾಂಗ್ರೆಸ್ ನಾಯಕರು ವಿಧಾನಸೌಧದ ಬಳಿ ಇರುವ ಮಹಾತ್ಮಗಾಂಧಿ ಪ್ರತಿಮೆ ಬಳಿ ಧರಣಿ ಸತ್ಯಾಗ್ರಹ ನಡೆಸಿ ಪೆಗಾಸಸ್ ಬೇಹುಗಾರಿಕೆ ಪ್ರಕರಣ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಬಿಜೆಪಿ ಪ್ರಜಾಪ್ರಭುತ್ವವನ್ನು ದಮನ ಮಾಡುತ್ತಿದೆ. ಪ್ರತಿಪಕ್ಷದ ನಾಯಕರು, ರಾಜಕೀಯ ಧುರೀಣರು, ನ್ಯಾಯಧೀಶರು, ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರ ಫೋನ್ಗಳನ್ನು ಟ್ಯಾಪ್ ಮಾಡಿ ಬೇಹುಗಾರಿಕೆ ಮಾಡುವ ಮೂಲಕ ಸಂವಿಧಾನಬಾಹಿರವಾಗಿ ನಡೆದುಕೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಬೇಹುಗಾರಿಕೆಯ ಹಿಂದಿದ್ದಾರೆ. ವ್ಯಕ್ತಿಗತ ಸ್ವಾತಂತ್ರ್ಯದ ಹರಣವಾಗುತ್ತಿದೆ. ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು. ಗಾಂಧಿ ಪ್ರತಿಮೆಯಿಂದ ಕಾಲ್ನಡಿಗೆ ಜಾಥಾ ಮೂಲಕ ರಾಜಭವನದ ಮುತ್ತಿಗೆಗಾಗಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪೆಗಾಸಸ್ ಕದ್ದಾಗಲಿಕೆ ಪ್ರಕರಣ ರಾಷ್ಟ್ರೀಯ ಭದ್ರತೆಗೆ ಧಕ್ಕೆಯುಂಟು ಮಾಡಿದೆ. ಈ ಬಗ್ಗೆ ವಿಸ್ತೃತ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ.
ಯಡಿಯೂರಪ್ಪ ಅವರ ರಾಜೀನಾಮೆಗೂ ನಮಗೂ ಸಂಬಂಧವಿಲ್ಲ. ಅದು ಅವರ ಪಕ್ಷಕ್ಕೆ ಸೇರಿದ ವಿಚಾರ. ನಾವು ಪಕ್ಷ ಸಂಘಟನೆಯತ್ತ ಗಮನ ಹರಿಸುತ್ತೇವೆ. ಆಸ್ಕರ್ ಫರ್ನಾಂಡೀಸ್ ಅವರ ಅನಾರೋಗ್ಯದ ಕಾರಣದಿಂದಾಗಿ ನಾಳೆ ಮಂಗಳೂರಿನಲ್ಲಿ ನಡೆಯಬೇಕಾಗಿದ್ದ ಸಭೆ ರದ್ದಾಗಿದೆ. ತುಮಕೂರಿನಲ್ಲಿ ನಡೆಯುವ ಸಭೆ ನಡೆಯಲಿದೆ ಎಂದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಯಡಿಯೂರಪ್ಪ ಅವರ ಬದಲಾವಣೆ ಬಗ್ಗೆ ನಾನು ೬-೭ ತಿಂಗಳಿನಿಂದಲೂ ಹೇಳುತ್ತಿದ್ದೇನೆ. ಈ ಬಗ್ಗೆ ನನಗೆ ಖಚಿತ ಮಾಹಿತಿ ಇತ್ತು. ಯಡಿಯೂರಪ್ಪ ಅವರ ಬದಲಾವಣೆಯಿಂದ ಕಾಂಗ್ರೆಸ್ಗೇನೂ ಲಾಭ ಇಲ್ಲ ಎಂದು ಹೇಳಿದರು.
ಯಡಿಯೂರಪ್ಪ ಭ್ರಷ್ಟರು ಅವರ ಜತೆಗಿರುವ ಬಿಜೆಪಿಯ ಬಹಳಷ್ಟು ಮಂದಿ ಭ್ರಷ್ಟರಿದ್ದಾರೆ. ಭ್ರಷ್ಟರು ಯಾವತ್ತೂ ಅಧಿಕಾರದಲ್ಲಿ ಉಳಿಯುವುದಿಲ್ಲ. ಬದಲಿ ಮುಖ್ಯಮಂತ್ರಿ ಮಾಡಿ ಸರ್ಕಾರ ಮುಂದುವರೆಸುವುದು ಸರಿಯಲ್ಲ ಎಂದು ತಿಳಿಸಿದರು.
ದೇಶದಲ್ಲಿ ಕೊರೊನಾದ ಎರಡನೆ ಅಲೆಯಿಂದ ೫೦ ಲಕ್ಷ ಮಂದಿ ಸತ್ತಿದ್ದಾರೆ. ರಾಜ್ಯದಲ್ಲೂ ಸರ್ಕಾರ ನೀಡಿರುವ ಲೆಕ್ಕಕ್ಕಿಂತ ಹತ್ತುಪಟ್ಟು ಹೆಚ್ಚು ಸಾವುಗಳಾಗಿವೆ. ಇವರ ದುರಾಡಳಿತದಿಂದ ಜನ ಪ್ರಾಣ ಕಳೆದುಕೊಂಡಿದ್ದಾರೆ. ಸತ್ತವರಿಗೆ ಪರಿಹಾರ ಕೊಟ್ಟಿಲ್ಲ. ಇವರು ಅಧಿಕಾರ ಬಿಟ್ಟು ತೊಲಗಿದರೆ ಚುನಾವಣೆ ಎದುರಾಗಲಿ. ಅದನ್ನು ಎದುರಿಸಲು ನಾವು ಸಿದ್ದ ಎಂದು ಹೇಳಿದರು.
ಜೆಡಿ ಎಸ್ ನ ಭಾಗಿ:
ಜೆಡಿಎಸ್ನ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಕೂಡಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರ ಮಾಡಿರುವುದು ತಪ್ಪು ಎಂದು ಹೇಳುವ ಧೈರ್ಯ ನನ್ನಲ್ಲಿದೆ. ತಪ್ಪನ್ನು ಸಹಿಸಿಕೊಂಡಿರಲು ಆತ್ಮಸಾಕ್ಷಿ ಒಪ್ಪುವುದಿಲ್ಲ. ಅದಕ್ಕಾಗಿ ಕಾಂಗ್ರೆಸ್ನವರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಸಿದ್ದೇನೆ ಎಂದರು.
ಕಾಂಗ್ರೆಸಿಗರ ಪಾದಯಾತ್ರೆಯನ್ನು ಪೊಲೀಸರು ತಿಮ್ಮಯ್ಯ ಸರ್ಕಲ್ ಬಳಿ ತಡೆದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ರಾಜಭವನಕ್ಕೆ ತೆರಳಿ ಮನವಿ ನೀಡಲು ಅವಕಾಶ ನೀಡುವಂತೆ ಒತ್ತಾಯಿಸಿದರು. ಆದರೆ ಪೊಲೀಸರು ಅವಕಾಶ ನೀಡಲಿಲ್ಲ. ಪ್ರತಿಭಟನೆ ಮುಂದುವರೆದಾಗ ಹಿರಿಯ ನಾಯಕರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು.
ಪ್ರತಿಪಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ, ವಿಧಾನಪರಿಷತ್ನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಿರಿಯ ಮುಖಂಡರಾದ ಎಚ್.ಕೆ.ಪಾಟೀಲ್, ಅಲ್ಲಂವೀರಭದ್ರಪ್ಪ, ರಾಮಲಿಂಗಾರೆಡ್ಡಿ, ಕೆ.ಆರ್.ರಮೇಶ್ಕುಮಾರ್, ಸಲೀಂ ಅಹಮ್ಮದ್, ಈಶ್ವರ್ ಖಂಡ್ರೆ ಕೆ.ಜೆ.ಜಾರ್ಜ್, ಬಿ.ಕೆ.ಹರಿಪ್ರಸಾದ್, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ತುಕಾರಾಮ್, ಅಖಂಡ ಶ್ರೀನಿವಾಸಮೂರ್ತಿ, ಎನ್.ಎ.ಹ್ಯಾರಿಸ್, ಅಜಯ್ಸಿಂಗ್, ರೂಪಾಶಶಿಧರ್, ಅಂಜಲಿಲಿಂಬಾಳ್ಕರ್, ಬಸನಗೌಡ ದದ್ದಲ್, ಕೆ.ಸಿ.ಕೊಂಡಯ್ಯ, ಡಾ.ರಂಗನಾಥ್, ನಾರಾಯಣಸ್ವಾಮಿ, ಪಿ.ಆರ್.ರಮೇಶ್ ಸೇರಿದಂತೆ ಅನೇಕ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕಾಂಗ್ರೆಸ್ ಕಾರ್ಯಕರ್ತರ ರಾಜಭವನ ಮುತ್ತಿಗೆ ವಿಫಲ ; ಪೋಲೀಸ್ ವಶ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.