ಕೆ.ಆರ್.ಪೇಟೆ: ಕೊಟ್ಟಿಗೆಯಲ್ಲಿ ಸೀಮೆಎಣ್ಣೆ ದೀಪವನ್ನು ಹಚ್ಚುವ ವೇಳೆ ಆಕಸ್ಮಿಕವಾಗಿ ಹುಲ್ಲಿಗೆ ಬೆಂಕಿ ಹೊತ್ತಿಕೊಂಡು ಹೊರ ಬಂದ ದಟ್ಟ ಹೊಗೆಯಿಂದ ರೈತ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಕುಂದೂರು ಗ್ರಾಮದಲ್ಲಿ ನಡೆದಿದೆ.
ಕುಂದೂರು ಗ್ರಾಮದ ಪುಟ್ಟೇಗೌಡರ ಮಗ ರಾಮೇಗೌಡ(48) ಮೃತಪಟ್ಟಿರುವ ರೈತ. ಇವರು ಆಡು, ಕುರಿ ಜೊತೆಗೆ ದನಕರುಗಳನ್ನು ಸಾಕಿದ್ದರು. ಮನೆಗೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದ ಕಾರಣ ಸೀಮೆಎಣ್ಣೆ ದೀಪದಲ್ಲಿ ವಾಸ ಮಾಡಿಕೊಂಡಿದ್ದರು. ಅಲ್ಲದೆ ಜಾನುವಾರುಗಳ ಮೇವನ್ನು ದನದ ಕೊಟ್ಟಿಗೆಯಲ್ಲಿಯೇ ಸಂಗ್ರಹಿಸಿಟ್ಟುಕೊಂಡಿದ್ದರು.
ಎಂದಿನಂತೆ ಮಧ್ಯರಾತ್ರಿ ಜಾನುವಾರುಗಳಿಗೆ ಮೇವು ಹಾಕಲು ಹೋಗಿದ್ದಾಗ, ದೀಪ ಹಿಡಿದುಕೊಂಡು ಹುಲ್ಲನ್ನು ತೆಗೆಯಲು ಮುಂದಾಗಿದ್ದು, ಈ ವೇಳೆ ಹುಲ್ಲಿಗೆ ಬೆಂಕಿ ತಗುಲಿ ಹುಲ್ಲು ಉರಿಯಲು ಆರಂಭಿಸಿದೆ. ಒಣಗಿದ ಹುಲ್ಲಿನ ಮೇವು ಆದ ಕಾರಣ ಧಗಧಗನೆ ಉರಿಯಲು ಆರಂಭಿಸಿ ಮನೆಯ ಒಳಗೆ ದಟ್ಟವಾದ ಹೊಗೆ ತುಂಬಿಕೊಂಡಿದೆ. ಕಿಟಕಿ ಇಲ್ಲದ ಕಾರಣ ಮನೆಯೊಳಗೆ ದಟ್ಟಹೊಗೆ ಆವರಿಸಿಕೊಂಡ ಕಾರಣ ರೈತ ರಾಮೇಗೌಡ ಉಸಿರುಗಟ್ಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೆಂಕಿಯ ಕೆನ್ನಾಲಿಗೆ ಹೆಂಚಿನ ಮನೆ ಭಾಗಶಃ ಸುಟ್ಟು ಹೋಗಿದೆ.
ಮನೆಯೊಳಗೆ ಮಲಗಿದ್ದ ಪತ್ನಿ ನಿಂಗಮ್ಮ ಬೆಂಕಿ ಉರಿಯುತ್ತಿರುವುದನ್ನು ಕಂಡು ಹೊರಗಡೆ ಓಡಿ ಬಂದು ಪಕ್ಕದ ಮನೆಯವರನ್ನು ಕೊಂಡಿದ್ದಾರೆ. ಆಗ ಅಕ್ಕಪಕ್ಕದ ಮನೆಯವರು ಬಂದು ಬಾಗಿಲು ಕೊಟ್ಟಿಗೆಯ ಬಾಗಿಲು ಮುರಿದು ಆಡುಕುರಿ ಮತ್ತು ದನಗಳÀನ್ನು ರಕ್ಷಿಸಿದರಾದರೂ ಅಷ್ಟರಲ್ಲೇ ರೈತ ರಾಮೇಗೌಡ ಉಸಿರುಕಟ್ಟಿ ಮೃತಪಟ್ಟಿದ್ದರು ಎಂದು ಮೃತ ಪತ್ನಿ ನಿಂಗಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ತಾಲೂಕು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಅಕ್ಕಪಕ್ಕದ ಮನೆಗೆ ತಗುಲಿ ಸಂಭವಿಸಬಹುದಾದ ಬಾರಿ ಅನಾಹುತವನ್ನು ತಪ್ಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಿಕ್ಕೇರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.