ಕಾರವಾರ: ಭಾರೀ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಕರ್ತವ್ಯದಲ್ಲಿದ್ದ ಅರಣ್ಯ ರಕ್ಷಕ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಾವಿನಗುಂಡಿ ರಸ್ತೆಯ ಕುಳಿಬಿಡು ಎಂಬಲ್ಲಿ ಮಂಗಳವಾರ ಸಂಭವಿಸಿದೆ.
ಅರಣ್ಯ ರಕ್ಷಕ ಶಶಿಧರ್ (58) ಘಟನೆಯಲ್ಲಿ ಮೃತಪಟ್ಟ ಅಧಿಕಾರಿ. ಕರ್ತವ್ಯದಲ್ಲಿದ್ದ ಅವರು ಬೈಕ್ ಮೇಲೆ ಸಾಗುತ್ತಿದ್ದಾಗ ಗಾಳಿಯ ರಭಸಕ್ಕೆ ಬೃಹತ್ ಮರ ಶಶಿಧರ್ ಅವರ ಮೇಲೆ ಬಿದ್ದಿದೆ. ಇದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅವರ ಬೈಕ್ ಸಹ ಸಂಪೂರ್ಣ ನುಜ್ಜುಗುಜ್ಜಾಗಿದೆ. ರಸ್ತೆ ಸಂಚಾರ ಬಂದ್ ಆಗಿದ್ದು ಅರಣ್ಯ ಇಲಾಖೆಯವರು, ಸ್ಥಳೀಯರ ಸಹಕಾರದಿಂದ ಮರ ತೆರವು ಕಾರ್ಯಾಚರಣೆ ಆರಂಭಗೊಂಡಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.