ಕೊಳ್ಳೇಗಾಲ: ಸಾಮಾನ್ಯವಾಗಿ ಕೆಲವೆಡೆ ಸರ್ಕಾರಿ ಕಚೇರಿಗಳ ಬಳಿ ಉದ್ಯಾನವಿದ್ದರೂ ಅದು ಸ್ವಚ್ಛವಾಗಿರುವುದಿಲ್ಲ. ಕಾರಣ ನೂರಾರು ಮಂದಿ ಭೇಟಿ ನೀಡಿ ಎಲ್ಲೆಂದರಲ್ಲಿ ಕಸ ಎಸೆದು ಹೋಗುವುದರಿಂದ ಸ್ವಚ್ಛತೆ ಕಾಪಾಡುವುದು ಕಷ್ಟ ಸಾಧ್ಯವಾಗಿದೆ.
ಪೌರಕಾರ್ಮಿಕರಿಗೂ ಉದ್ಯಾನದ ಸ್ವಚ್ಛತೆ ಕಾಪಾಡುವುದು ಕಷ್ಟಸಾಧ್ಯವಾಗಿದೆ. ಬಹಳಷ್ಟು ಕಡೆಗಳಲ್ಲಿ ಕಸದ ತೊಟ್ಟಿಯಿದ್ದರೂ ಅಲ್ಲಿಗೆ ಕಸವನ್ನು ಹಾಕದೆ. ತಾವು ಎಲ್ಲಿ ಕುಳಿತಿದ್ದರೋ ಅಲ್ಲಿಯೇ ಎಸೆದು ಹೋಗುವ ಜನರಿಗೇನು ಕೊರತೆಯಿಲ್ಲ. ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಬಾರದ ತನಕ ಈ ಸಮಸ್ಯೆಗೆ ಪರಿಹಾರ ಕಾಣುವುದು ಅಸಾಧ್ಯವೇ. ಈಗಾಗಲೇ ಬಹಳಷ್ಟು ಸಂಘಸಂಸ್ಥೆಗಳು ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ.
ಕೊಳ್ಳೇಗಾಲದ ನ್ಯಾಯಾಲಯ ಆವರಣದಲ್ಲಿರುವ ಉದ್ಯಾನದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಇಲ್ಲಿಗೆ ದಿನನಿತ್ಯ ನೂರಾರು ಮಂದಿ ಭೇಟಿ ನೀಡುವ ಕಾರಣ ಮತ್ತು ಸ್ವಚ್ಛತೆಯ ಅರಿವಿನ ಕೊರತೆಯಿಂದಾಗಿ ಕಸಗಳು ಎಲ್ಲೆಂದರಲ್ಲಿ ಕಂಡು ಬರುತ್ತಿದ್ದವು. ಸ್ವಚ್ಛಗೊಳಿಸಿದಷ್ಟು ಮತ್ತೆ ಮತ್ತೆ ಕಸ ಬೀಳುತ್ತಿದ್ದವು. ಇದನ್ನು ಮನಗಂಡ ಕರ್ನಾಟಕ ವನ್ಯಜೀವಿ ಟ್ರಸ್ಟ್ ಹಾಗೂ ನ್ಯಾಯಾಲಯದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸುವ ಮೂಲಕ ನೆರೆದ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರೊಂದಿಗೆ ಉದ್ಯಾನವನ್ನು ಶುಚಿಗೊಳಿಸಲಾಯಿತು.
ಸ್ವತಃ ನ್ಯಾಯಾಧೀಶರೇ ಪೊರಕೆ ಹಿಡಿದು ಸ್ವಚ್ಛತೆಗೆ ಮುಂದಾಗಿದ್ದನ್ನು ಕಂಡು ಸಾರ್ವಜನಿಕರು ದಂಗಾದರು. ಅಷ್ಟೇ ಅಲ್ಲ ಎಲ್ಲೆಂದರಲ್ಲಿ ಕಸ ಎಸೆಯದೆ ಸ್ವಚ್ಛತೆ ಕಾಪಾಡಬೇಕೆಂಬುದನ್ನು ಅರಿತುಕೊಂಡರು. ಸ್ವಚ್ಛತಾ ಕಾರ್ಯಕ್ಕೆ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಜಿ.ಪ್ರಮೋದ್ ಚಾಲನೆ ನೀಡಿದರು. ಈ ಸಂದರ್ಭ ಕರ್ನಾಟಕ ವನ್ಯಜೀವಿ ಟ್ರಸ್ಟ್ ಅಧ್ಯಕ್ಷ ಟಿ.ಜಾನ್ಪೀಟರ್, ಕಾರ್ಯದರ್ಶಿ ಮನೋಜ್ಕುಮಾರ್, ಕಾನೂನು ಸಲಹೆಗಾರ ಸಿ.ಬಿ.ಮಹೇಶ್ ಕುಮಾರ್, ಟ್ರಸ್ಟಿ ಹಾಗೂ ಖಜಾಂಚಿ ಗೋಪಿನಾಥ್, ಭಾರತೀಯ ಸೇನಾ ನಿವೃತ್ತ ಕಮಾಂಡೋ ದಿವ್ಯ ಸುಂದರ್ ಸೇರಿದಂತೆ ಹಲವರು ಸ್ವಚ್ಛತಾ ಕಾರ್ಯ ನಡೆಸಿ, ಉದ್ಯಾನದಲ್ಲಿರುವ ಗಿಡಗಳಿಗೆ ನೀರು ಹಾಯಿಸಿ ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದರು.