ಕಾಸರಗೋಡು: ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎಂಡೋಸಲ್ಫಾನ್ ಸಂತ್ರಸ್ತ ಹೋರಾಟ ಸಮಿತಿ ತಿರುವನಂತಪುರದ ರಾಜ್ ಭವನ್ ಮುಂಭಾಗದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲವಾಗಿ ಇಂದು ಕಾಸರಗೋಡಿನಲ್ಲಿ ಉಪವಾಸ ಸತ್ಯಾಗ್ರಹ ಹಾಗೂ ಪ್ರತಿಭಟನೆ ನಡೆಯಿತು.
ನಗರದ ಹೊಸ ಬಸ್ ನಿಲ್ದಾಣ ಪರಿಸರದ ಸಹಿ ವೃಕ್ಷ ಮರದಡಿಯಲ್ಲಿ ಉಪವಾಸ ಸತ್ಯಾಗ್ರಹ ಹಾಗೂ ಅಂಚೆ ಕಚೇರಿ ಮುತ್ತಿಗೆ ನಡೆಯಿತು.
ಮೊಂಬತ್ತಿ ಉರಿಸುವ ಮೂಲಕ ಸತ್ಯಾಗ್ರಹವನ್ನು ಉದ್ಘಾಟಿಸಲಾಯಿತು. ಪಿ. ಎಂ. ಝುಬೈರ್ ಪಡುಪ್ಪು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ನ್ಯಾಯವಾದಿ ಎ. ಗೋವಿಂದನ್ ನಾಯರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾಂತಮ್ಮ ಫಿಲಿಪ್, ಅಬ್ದುಲ್ ಖದರ್ ವಿಜುಲ ಲಕ್ಷ್ಮಿ, ಮುನೀರ್, ಪ್ರಭಾಕರನ್, ಚಂದ್ರಾವತಿ, ಶೋಭನಾ ಮೊದಲಾದವರು ಮಾತನಾಡಿದರು.
ಸತ್ಯಾಗ್ರಹದ ಬಳಿಕ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಸಂತ್ರಸ್ತರು ಪ್ರಧಾನ ಅಂಚೆ ಕಚೇರಿಗೆ ಮುತ್ತಿಗೆ ಹಾಕಿದರು. ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎಂಡೋಸಲ್ಫಾನ್ ಸಂತ್ರಸ್ತ ಜನಪರ ಒಕ್ಕೂಟದಿಂದ ತಿರುವನಂತಪುರದ ರಾಜ್ ಭವನ್ ಮುಂಭಾಗದಲ್ಲಿ ಬುಧವಾರದಿಂದ ನಿರಾಹಾರ ಸತ್ಯಾಗ್ರಹ ಆರಂಭಿಸಿದೆ.
ಎಲ್ಲಾ ಸಂತ್ರಸ್ತರನ್ನು ಸಂತ್ರಸ್ತ ಪಟ್ಟಿಗೆ ಸೇರ್ಪಡೆಗೊಳಿಸಬೇಕು. ಸುಪ್ರೀಂ ಕೋರ್ಟ್ ತೀರ್ಪಿನಂತೆ ಎಲ್ಲಾ ಸಂತ್ರಸ್ತರಿಗೆ ಸಹಾಯಧನ ವಿತರಿಸಬೇಕು, ಸಂತ್ರಸ್ತರ ಸಾಲ ಮನ್ನಾ ಮಾಡಬೇಕು ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸತ್ಯಾಗ್ರಹ ನಡೆಸಲಾಗುತ್ತಿದೆ.
ಸತ್ಯಾಗ್ರಹಕ್ಕೆ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಮುಖಂಡರು, ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಸರಕಾರ ಬೇಡಿಕೆ ಈಡೇರಿಸುವ ತನಕ ಹೋರಾಟ ಮುಂದುವರಿಯಲಿದೆ ಎಂದು ಸಮಿತಿ ಮುನ್ನೆಚ್ಚರಿಕೆ ನೀಡಿದೆ.