ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆಯ ಕಾಡಂಚಿನ ಗ್ರಾಮಗಳು ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಜನವರಿ ಬಂತೆಂದರೆ ಕಾಫಿ ಕೊಯ್ಲು ಮಾಡಲು ಕಾರ್ಮಿಕರಾಗಿ ಕೇರಳದತ್ತ ತೆರಳುವುದು ಮಾಮೂಲಿಯಾಗಿದ್ದು, ಇದೀಗ ಕೇರಳದ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.
ಹೆಚ್ಚಿನ ಬಡ ರೈತರು, ಕೂಲಿ ಕಾರ್ಮಿಕರು ಇತ್ತೀಚೆಗಿನ ವರ್ಷಗಳಲ್ಲಿ ಕೇರಳದತ್ತ ಜನವರಿ ತಿಂಗಳಲ್ಲಿ ಕುಟುಂಬ ಸಹಿತ ತೆರಳುವುದು ಮಾಮೂಲಿಯಾಗಿದೆ. ಕೇರಳದ ಕೆಲವು ಕಡೆಗಳಲ್ಲಿರುವ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರ ಸಮಸ್ಯೆಯಿರುವುದರಿಂದ ಕಾಫಿ ಕೊಯ್ಲಿಗೆ ಹೆಚ್ಚಿನ ಬೇಡಿಕೆಯಿದ್ದು, ಇಲ್ಲಿನ ಕಾರ್ಮಿಕರಿಗೆ ಅಲ್ಲಿ ಕೈತುಂಬಾ ಕೆಲಸ ಮತ್ತು ಹಣ ದೊರೆಯುತ್ತದೆ ಎಂಬ ಕಾರಣಕ್ಕೆ ಈ ಸಮಯದಲ್ಲಿ ಕೇರಳದತ್ತ ಪ್ರಯಾಣ ಬೆಳೆಸುತ್ತಿದ್ದು, ಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿರುವುದನ್ನು ಕಾಣಬಹುದಾಗಿದೆ.
ಕೇರಳದಲ್ಲಿ ಕೆಲವು ಸಮಯಗಳ ಕಾಲ ಕೆಲಸ ಮಾಡಿ, ಕಾಫಿ ಕೊಯ್ಲು ಮುಗಿಯುತ್ತಿದ್ದಂತಯೇ ತಾವು ಸಂಪಾದಿಸುವ ಹಣದೊಂದಿಗೆ ತಮ್ಮ ಊರುಗಳಿಗೆ ಹಿಂತಿರುಗುತ್ತಾರೆ. ಇನ್ನು ಕುಟುಂಬ ಸಹಿತ ಕೇರಳಕ್ಕೆ ಹೋಗುವುದರಿಂದ ಮತ್ತು ಅಲ್ಲಿ ದಿನಕ್ಕೆ 600 ರೂ. ಗಳಿಗೂ ಹೆಚ್ಚು ಕೂಲಿ ದೊರೆಯುತ್ತಿರುವುದರಿಂದ ಒಂದಷ್ಟು ಸಂಪಾದನೆ ಮಾಡಿಕೊಂಡು ಬರಲು ಸಾಧ್ಯವಾಗುತ್ತಿದೆ.
ಕೆಲವು ಕಡೆ ಕಾಫಿಗೆ ಕೆಜಿ ಲೆಕ್ಕದಲ್ಲಿ ಕೂಲಿ ನೀಡುವುದರಿಂದ ಕುಟುಂಬ ಸಹಿತ ಕೊಯ್ಲು ಮಾಡಬಹುದಾಗಿದೆ. ಕುಟುಂಬದವರೆಲ್ಲ ಸೇರಿ ಕಾಫಿ ಕೊಯ್ಲು ಮಾಡಿದರೆ ಸಂಜೆ ವೇಳೆಗೆ ಸಾವಿರಾರು ರೂಪಾಯಿ ಸಂಪಾದನೆ ಮಾಡಬಹುದಾಗಿದೆ. ಆದರೆ ಪೋಷಕರು ಶಾಲೆಗೆ ಹೋಗುವ ಮಕ್ಕಳನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗುವುದರಿಂದ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಕೇರಳಕ್ಕೆ ವರ್ಷದ ಮೊದಲ ತಿಂಗಳಲ್ಲಿ ತೆರಳಿ ಒಂದಷ್ಟು ಅಲ್ಲಿದ್ದು, ಕಾಫಿ ಕೊಯ್ಲು ಮುಗಿಯುತ್ತಿದ್ದಂತೆಯೇ ಸ್ವಗ್ರಾಮಕ್ಕೆ ಮರಳುವುದರಿಂದ ಕೈತುಂಬಾ ಹಣ ಸಿಗುವುದಲ್ಲದೆ, ಮಾಡಿದ ಸಾಲ ತೀರಿಸಲು ಸಾಧ್ಯವಾಗುತ್ತದೆ ಎಂಬುದು ಬಡ ಕಾರ್ಮಿಕರ ಮನದಾಳ ಮಾತಾಗಿದೆ.
ಪೋಷಕರು ಕೂಲಿಗಾಗಿ ಬೇರೆ ಊರುಗಳಿಗೆ ತೆರಳುವುದರಿಂದ ಶಾಲೆಗೆ ತೆರಳುವ ಮಕ್ಕಳಿಗೆ ತೊಂದರೆಯಾಗುತ್ತಿದೆ. ಕೆಲವು ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಹಣದ ಸಂಪಾದನೆಯ ರುಚಿ ನೋಡುವುದರಿಂದ ಶಾಲೆಗೆ ತೆರಳಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇನ್ನಾದರೂ ಸಂಬಂಧಿಸಿದವರು ಇದಕ್ಕೊಂದು ಪರಿಹಾರದ ಮಾರ್ಗ ಕಂಡು ಹಿಡಿಯಬೇಕಿದೆ.