ಚಿಕ್ಕಮಗಳೂರು: ಒಂದ್ ಹಾವ್ ನೋಡಿದ್ರೇನೆ ಜೀವ ಝಲ್ ಅನ್ನುತ್ತೆ. ಒಂದೇ ಜಾಗದಲ್ಲಿ ಎರಡ್ ನೋಡುದ್ರಂತು ಗುಂಡ್ಗೆ ನಿಂತೇ ಹೋಗುತ್ತೆ. ಆದ್ರೆ, ಒಂದೇ ಸಮಯದಲ್ಲಿ ಒಂದೇ ಜಾಗದಲ್ಲಿ ಎರಡು ಹಾವುಗಳ ಜೊತೆ 300ಕ್ಕೂ ಅಧಿಕ ಮೊಟ್ಟೆ ನೋಡುದ್ರೆ ಎದೆಬಡಿತ ಎನಾಗ್ಬೇಡ ಹೇಳಿ. ಆದ್ರೆ, ಅಲ್ಲೊಂದು ಕಣ್ಣೀರ ಕಥೆ ಇದೆ. ಮಕ್ಕಳನ್ನ ಅಗಲಿದ ನೋವಿನ ವ್ಯಥೆ ಇದೆ. ಬದುಕಿನ ಕ್ರೂರತ್ವಕ್ಕೆ ಸಾಕ್ಷಿಯಿದೆ. ಅನಾಥ ಪ್ರಜ್ಞೆ ಕಾಡ್ತಿದೆ. ಇದು ಕಾಫಿನಾಡಿನ ಎರಡೂ ಹಾವುಗಳ ಕಣ್ಣೀರಕಥೆ. ಈ ಕುರಿತು ಒಂದು ವರದಿ ಇಲ್ಲಿದೇ ನೋಡಿ.
ಕಾಫಿನಾಡಿನ ಕಲ್ಯಾಣ ನಗರದಲ್ಲಿ ನವೀನ್ ಎಂಬುವರು ಮನೆ ಕಟ್ಟಲೆಂದು ತಿಂಗಳ ಹಿಂದೆ ಮರಳನ್ನ ಹಾಕ್ಸಿದ್ರು. ಕೆಲಸಕ್ಕೆಂದು ಮರಳು ತೆಗೆಯುವಾಗ ಮರಳಿನೊಳಗೆ ಒಂದೇ ಜಾಗದಲ್ಲಿ ಒಂದಕ್ಕೊಂದು ಅಂಟಿಕೊಂಡಂತೆ ಸುಮಾರು 300ಕ್ಕೂ ಅಧಿಕ ಮೊಟ್ಟೆಗಳು ಸಿಕ್ಕಿವೆ. ಜೊತೆಗೆ ಎರಡೂ ಹಾವುಗಳು ಇವೆ. ಕೆಲಸಗಾರರಿಗೆ ಆಶ್ಚರ್ಯ. ಕೂಡಲೇ ಸ್ಥಳಕ್ಕೆ ಬಂದ ಸ್ನೇಕ್ ನರೇಶ್ ಎರಡೂ ಹಾವುಗಳ ಜೊತೆ 300 ಕ್ಕೂ ಅಧಿಕ ಮೊಟ್ಟೆಗಳನ್ನ ರಕ್ಷಿಸಿದ್ದಾರೆ. ಆದ್ರೆ, ಒಂದೇ ಜಾಗದಲ್ಲಿ ಹಾವುಗಳ ಜೊತೆ ಅಷ್ಟೊಂದು ಮೊಟ್ಟೆ ನೋಡಿದ ಸ್ಥಳಿಯರು ತೀವ್ರ ಆಶ್ಚರ್ಯ ಚಕಿತರಾಗಿದ್ದಾರೆ. 300 ಮೊಟ್ಟೆ ಇದೆ ಎಂಬ ವಿಷಯ ತಿಳಿದು ಸ್ಥಳಕ್ಕೆ ಬಂದ ನರೇಶ್ ಸಾವಿರಾರು ಹಾವು ಹಿಡಿದಿದ್ರು, ಒಂದೇ ಜಾಗದಲ್ಲಿ ಇಷ್ಟೊಂದು ಮೊಟ್ಟೆ ಆಶ್ಚರ್ಯ ವ್ಯಕ್ತಪಡಿಸಿದ್ರು. ಇತ್ತೀಚಿನ ದಿನಗಳಲ್ಲಿ ನೀರಾವುಗಳ ಸಂತತಿಯೂ ತೀರಾ ಕಡಿಮೆಯಾಗಿದೆ. ಆದ್ರೆ, ನಾಗರಹಾವು ಏಕಕಾಲದಲ್ಲಿ 5-10-15 ಮೊಟ್ಟೆ ಇಟ್ರೆ, ನೀರಾವು 40-50 ಮೊಟ್ಟೆ ಇಡ್ತಾವೆ. ಆದ್ರೆ, ಹೀಗೆ ನೂರು-ನೂರೈವತ್ತು ಮೊಟ್ಟೆಯನ್ನೂ ಇಡ್ತಾವೆ. ಆದ್ರೆ, ಅದು ತೀರಾ ವಿರಳ ಅಂತಾರೆ ನರೇಶ್.
ಎರಡೂ ಹಾವುಗಳನ್ನ ರಕ್ಷಿಸಿರೋ ನರೇಶ್ ಅವುಗಳನ್ನ ಕಾಡಿಗೆ ಬಿಟ್ಟಿದ್ದಾರೆ. ಆದ್ರೆ, ಮೊಟ್ಟೆಗಳನ್ನ ಮನೆಗೆ ತಂದಿದ್ದಾರೆ. ಅವುಗಳಿಗೆ ತಾಪದ ಜಾಗದಲ್ಲಿ ಇಟ್ಟು, ಕಾವು ನೀಡಿ, ಅವುಗಳು ಮರಿಯಾದ ಮೇಲೆ ಅವುಗಳನ್ನ ಕಾಡಿಗೆ ಬಿಡಲು ಮುಂದಾಗಲಿದ್ದಾರೆ. ಯಾರು ಎಷ್ಟೇ ಹೊತ್ತಲ್ಲಿ ಫೋನ್ ಮಾಡಿದ್ರು, ಹೋಗಿ ಹಾವುಗಳನ್ನ ರಕ್ಷಿಸಿ, ಅವುಗಳ ಸಂತತಿಯನ್ನು ಹೆಚ್ಚಿಸ್ತಿರೋ ನರೇಶ್ ಕಾರ್ಯಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನೀರಾವು ಹೀಗೆ ಎಲ್ಲೆಂದರಲ್ಲಿ ಮೊಟ್ಟೆ ಇಡೋಲ್ಲ. ನದಿ, ಕೆರೆ ದಡದ ಬಳಿಯಲ್ಲೇ ಇಡೋದು. ಸಾಲದಕ್ಕೆ ನೀರಾವು ಹೆಚ್ಚಾಗಿ ನೀರಲ್ಲೇ ಇರಲು ಬಯಸುತ್ತೆ. ಆದ್ರೆ, ಕಾಫಿನಾಡಲ್ಲಿ ಹಿಂದೆಂದೂ ಕಾಣದಂತಹ ಬರವಿದ್ದು, ಕೆರೆ-ಕಟ್ಟೆಗಳು ಬತ್ತಿರೋದ್ರಿಂದ ಹಾವುಗಳು ಹೀಗೆ ಎಲ್ಲೆಂದರಲ್ಲಿ ಮೊಟ್ಟೆ ಇಡ್ತಿವೆ ಅನ್ನೋದು ಹಿರಿಯರ ಮಾತು. ಅದೇನೆ ಇದ್ರು, ಹಾವಿನ ಮೊಟ್ಟೆಯನ್ನು ಮನೆಗೆ ತಂದು ಮರಿ ಮಾಡಿ ಕಾಡಿಗೆ ಬಿಡ್ತಾ ಉರಗದ ಸಂತತಿ ಹೆಚ್ಚಿಸ್ತಿರೋ ನರೇಶ್ ಕಾರ್ಯಕ್ಕೆ ಮಾತ್ರ ಭೇಷ್ ಅನ್ಬೇಕು…..