ಸುಳ್ಯ: ನೀತಿ, ನಿಯತ್ತು, ಕಾನೂನು ಇಲ್ಲದ ರಾಜ್ಯ ಸರ್ಕಾರದ ತುಘಲಕ್ ಆಡಳಿತದಿಂದಾಗಿ ಹಿಂದೂಗಳಿಗೆ ಬದುಕಲು ಸಾಧ್ಯವಿಲ್ಲದಂತಹಾ ಸ್ಥಿತಿ ನಿರ್ಮಾಣವಾಗಿದೆ. ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ಕೃಷಿಕರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಹಿಂದೂ ಯುವಕರ ಹತ್ಯೆಯನ್ನು ಖಂಡಿಸಿ, ಸಮಾಜಘಾತುಕ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಮಂಗಳೂರು ಚಲೋ ಜನಸುರಕ್ಷಾ ಯಾತ್ರೆಯ ಅಂಗವಾಗಿ ಸುಳ್ಯದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಬ್ರಿಟೀಷರಿಗಿಂತ ಹೆಚ್ಚು ಸಮಾಜವನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವ ಸಿದ್ಧರಾಮಯ್ಯ ಸರ್ಕಾರದ ತುಘಲಕ್ ದರ್ಬಾರ್ ನಿಂದಾಗಿ ಹಿಂದುಗಳ ಭಾವನೆ, ನಂಬಿಕೆಗಳಿಗೆ ಬೆಲೆ ಇಲ್ಲದಂತಾಗಿದೆ. ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ. ಕ್ರಿಮಿನಲ್ ಕೇಸುಗಳನ್ನು ಹಿಂದಕ್ಕೆ ಪಡೆದು ಸಮಾಜ ಘಾತುಕ ಶಕ್ತಿಗಳಿಗೆ ಪ್ರೋತ್ಸಾಹ ನೀಡುವ ಸರ್ಕಾರದ ನಿಲುವಿನಿಂದಾಗಿ ಅವ್ಯಾಹತವಾಗಿ ಹಿಂದೂಗಳ ಕೊಲೆಯಾಗುತಿದೆ. ಡ್ರಗ್ಸ್ ಮಾಫಿಯಾ ರಾಜ್ಯದಾದ್ಯಂತ ವ್ಯಾಪಿಸಿದ್ದು ಜನಸಾಮಾನ್ಯರಿಗೆ ಕಂಠಕವಾಗಿದೆ. ಮರಳು ಮಾಫಿಯಾ, ಡ್ರಗ್ಸ್ ಮಾಫಿಯಾ, ಭೂಮಾಪಿಯಾಗಳಿಗೆ ಮಾತ್ರ ಸಂರಕ್ಷಣೆ ಮತ್ತು ಬೆಂಬಲ ದೊರೆಯುತ್ತಿದೆ ಎಂದು ಅವರು ಆಪಾದಿಸಿದರು.
ಅಡಕೆ ವಿಷಕಾರಕ ವರದಿ ಹಿಂಪಡೆಯುತ್ತೇವೆ
ಅಡಕೆ ವಿಷಕಾರಕ ಎಂದು ವರದಿ ನೀಡಿರುವುದು ಹಿಂದಿನ ಯುಪಿಎ ಸರ್ಕಾರ. 2019ರ ಮೊದಲು ಈ ವರದಿಯನ್ನು ಕೇಂದ್ರ ಸರ್ಕಾರ ಹಿಂಪಡೆಯಲಿದೆ ಎಂದು ಕಟೀಲ್ ಹೇಳಿದ್ದಾರೆ.
ಅಡಕೆ ವಿಷಕಾರಕ ಎಂಬ ವರದಿಯನ್ನು ಕೇಂದ್ರ ಸರ್ಕಾರದ ಕೃಷಿ ಮತ್ತು ಆರೋಗ್ಯ ಸಚಿವಾಲಯ ಪುನರ್ ಪರಿಶೀಲನೆ ನಡೆಸಲಾಗುತ್ತಿದ್ದು ಹೊಸ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಅಡಕೆ ಕೃಷಿಕರನ್ನು ಸಂರಕ್ಷಣೆ ಮಾಡಲು ಕೇಂದ್ರ ಸರ್ಕಾರ ಬದ್ಧ ಎಂದು ಪ್ರಧಾನಮಂತ್ರಿಗಳೇ ಹೇಳಿದ್ದಾರೆ. ಈ ಕುರಿತು ಕೃಷಿಕರು ಆತಂಕ ಪಡುವ ಅಗತ್ಯವಿಲ್ಲ. ಇದರ ಬಗ್ಗೆ ಗುಲ್ಲೆಬ್ಬಿಸುವುದು ಕಾಂಗ್ರೆಸ್ ನ ರಾಜಕೀಯ ನಾಟಕ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಸಿಆರ್ ಎಫ್ ನಿಧಿಯಿಂದ ಅನುದಾನ ಬಿಡುಗಡೆ ಮಾಡಿದರೂ ರಾಜಕೀಯ ದುರುದ್ದೇಶದಿಂದ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಲಾರ ತಡೆ ಮಾಡಿದೆ ಎಂದು ಹೇಳಿದ ಸಂಸದರು ರಮಾನಾಥ ರೈ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಾಡದ ಅಭಿವೃದ್ಧಿ ಕೆಲಸಕ್ಕಿಂತ ಹೆಚ್ಚು ಅಭಿವೃದ್ಧಿ ಕಾರ್ಯವನ್ನು ಶಾಸಕರಾಗಿ ಎಸ್.ಅಂಗಾರ ಸುಳ್ಯದಲ್ಲಿ ಮಾಡಿದ್ದಾರೆ ಎಂದರು.
ಚುನಾವಣೆಯ ಮೂಲಕ ಪಾಠ ಕಲಿಸಿ: ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ ಮಾತನಾಡಿ ಹಿಂದುಗಳ ಬದುಕಿನ ರಕ್ಷಣೆಗಾಗಿ ಬಿಜೆಪಿ ಈ ಯಾತ್ರೆಯನ್ನು ಕೈಗೊಂಡಿದೆ. ಕ್ರಿಮಿನಲ್ ಕೇಸುಗಳನ್ನು ಹಿಂಪಡೆದು ಅವರಿಗೆ ಬೆಂಬಲ ನೀಡುವ ಮೂಲಕ ಸಮಾಜ ಘಾತುಕಶಕ್ತಿಗಳನ್ನು ಸರ್ಕಾರವೇ ಪ್ರೋತ್ಸಾಹಿಸಿ ಹಿಂದೂ ಯುವಕರ ಕೊಲೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು. ಜನರು ಎಚ್ಚೆತ್ತುಕೊಂಡು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸರಿಯಾದ ಪಾಠ ಕಲಿಸದಿದ್ದರೆ ರಾಜ್ಯದಲ್ಲಿ ಹಿಂದುಗಳಿಗೆ ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಬಹುದು. ಎಲ್ಲರೂ ಒಂದೇ ಎಂದು ಎಲ್ಲರನ್ನೂ ಸ್ವೀಕರಿಸುವ ಶಾಂತಿ, ಸೌಹಾರ್ದತೆಯ ಸಂದೇಶ ಸಾರುವುದು ಹಿಂದೂ ಧರ್ಮ ಮಾತ್ರ ಎಂದು ಹೇಳಿದ ಅವರು ಕರಾವಳಿ ಜಿಲ್ಲೆಗಳ ಪ್ರತಿಷ್ಠೆ, ಹಿರಿಮೆ ಮರುಸ್ಥಾಪನೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಶಾಸಕ ಎಸ್.ಅಂಗಾರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಪ್ರಧಾನ ಕಾಯದರ್ಶಿಗಳಾದ ಬ್ರಿಜೇಶ್ ಚೌಟ, ಸುದರ್ಶನ ಮೂಡಬಿದ್ರೆ, ಕಾರ್ಯದರ್ಶಿ ಭಾಗೀರಥಿ ಮುರುಳ್ಯ, ಹಿಂದುಳಿದ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಜಿಲ್ಲಾ ಚುನಾವಣಾ ಉಸ್ತುವಾರಿ ಮೋನಪ್ಪ ಭಂಡಾರಿ, ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಅಪ್ಪಯ್ಯ ಮಣಿಯಾಣಿ, ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ವಂದಿಸಿದರು. ವೆಂಕಟ್ ದಂಬೆಕೋಡಿ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕ ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ಪಾದಯಾತ್ರೆ ನಡೆಯಿತು.