ರಾಮನಗರ: ಆಂಧ್ರಪ್ರದೇಶದ ಹಿಂದುಪುರದಲ್ಲಿ ಕಳೆದೆರಡು ವರ್ಷಗಳ ಹಿಂದೆ ನಡೆದಿದ್ದ ಜೋಡಿ ಕೊಲೆಯ ನಿಗೂಢತೆಯನ್ನು ಬೇಧಿಸುವಲ್ಲಿ ತಾವರೆಕೆರೆ ಪೊಲೀಸರು ಯಶಸ್ವಿಯಾಗಿದ್ದು ಐವರು ಹಂತಕರನ್ನು ಬಂಧಿಸಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿಯ ನವೀನ್(21), ತಿರುಪತಿ ಆಂಧ್ರಪ್ರದೇಶದ ಪೃದ್ವಿಶ್ಯಾಮ್(21), ಆಂಧ್ರಪ್ರದೇಶದ ಹಿಂದೂಪುರದ ಮಿಥುನ್(21), ಕೃಷ್ಣಗಿರಿಯ ತಮಿಳುನಾಡಿನ ಶಕ್ತಿ ಅರಸ್(23) ಹಾಗೂ ತಾವರೆಕೆರೆ ಹೋಬಳಿಯ ಜೋಗೆರೆಹಳ್ಳಿ ಗ್ರಾಮದ ಅಭಿಷೇಕ್(20) ಬಂಧಿತ ಆರೋಪಿಗಳು.
ಆಂಧ್ರಪ್ರದೇಶದ ಹಿಂದೂಪುರದ ಹಿಂದುಳಿದ ವರ್ಗಗಳ ಸಂಘದ ಅಧ್ಯಕ್ಷರಾದ ನಾರಾಯಣಸ್ವಾಮಿ ಹಾಗೂ ಆತನ ಪ್ರೇಯಸಿ ಮೇಖ ಕಲ್ಪನಾ ಎಂಬುವವರನ್ನು ಆ. 18, 2015 ರಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಅಲ್ಲದೆ ಈ ಸಂಬಂಧ ಆಂಧ್ರ ಪ್ರದೇಶ ಹಿಂದೂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಕೊಲೆಗೆ ಸಂಬಂಧಿಸಿದಂತೆ ಇದುವರೆಗೂ ಆರೋಪಿಗಳ ಪತ್ತೆಯಾಗಿರಲಿಲ್ಲ.
ಕಾರಿನಿಂದ ಪ್ರಕರಣ ಬಯಲಾಯಿತು: ಈ ನಡುವೆ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಗೇನಹಳ್ಳಿ ಗ್ರಾಮದ ಮಂಗಳ ಎಂಬುವವರಿಗೆ ಸೇರಿದ ಕೆಎ-41-ಬಿ 2291 ಎಂಬ ನಂಬರಿನ ಬುಲೋರೋ ಪಿಕ್ಆಪ್ ವಾಹನ ಜೂ.15 ರಂದು ಕಳ್ಳತನವಾಗಿತ್ತು. ಈ ಪ್ರಕರಣವನ್ನು ದಾಖಲಿಸಿಕೊಂಡ ವೃತ್ತ ನಿರೀಕ್ಷ ಶಬರೀಶ್, ತಾವರೆಕೆರೆ ಪಿಎಸ್ಐ ವೆಂಕಟೇಶ್, ಆರೋಪಿ ಮತ್ತು ಮಾಲು ಪತ್ತೆಗಾಗಿ 2 ತಂಡಗಳನ್ನು ರಚಿಸಿ ಕಾರ್ಯಾಚರಣೆ ಆರಂಭಿಸಿದ್ದರು.
ಪ್ರಕರಣದ ಬೆನ್ನುಹತ್ತಿ ಹೋದ ತನಿಖಾತಂಡಕ್ಕೆ ಜೋಗೆಹಳ್ಳಿಯ ಅಭಿಷೇಕ್ ಬುಲೋರೋ ವಾಹನವನ್ನು ಕಳ್ಳತನ ಮಾಡಿ 5ನೇ ಆರೋಪಿ ತಮಿಳುನಾಡಿನ ಶಕ್ತಿ ಅರಸಸ್ ಗೆ ಮಾರಾಟ ಮಾಡಿರುವುದು ಆಗ ಬೆಳಕಿಗೆ ಬಂದಿತ್ತು.
ಈ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಿದಾಗ ಇದೇ ಪೃದ್ವಿ ಶ್ಯಾಮ್ ಹಾಗೂ ನವೀನ್ ಸೇರಿ ಮತ್ತೊಂದು ವಾಹನವನ್ನು ಮಾರಾಟ ಮಾಡಿರುವುದು ಗೊತ್ತಾಗಿತ್ತು. ಆ ವಾಹನ ನಾರಾಯಣಸ್ವಾಮಿ ಅವರ ಟಾಟಾ ಸಫರಿ ಸ್ಟೋಮ್ ವಾಹನ ಎಂಬುದು ಗೊತ್ತಾಗಿತ್ತಲ್ಲದೆ, ಈ ಹಂತಕರು ನಾರಾಯಣಸ್ವಾಮಿ ಹಾಗೂ ಆತನ ಪ್ರೇಯಸಿ ಮೇಖ ಕಲ್ಪನಾ ರವರನ್ನು ಕೊಲೆ ಮಾಡಿ ನಾರಾಯಣಸ್ವಾಮಿಗೆ ಬಳಿಯಿದ್ದ ಟಾಟಾ ಸಫರಿ ಸ್ಟೋಮ್ ವಾಹನವನ್ನು ಕೂಡ ಕಳ್ಳತನ ಮಾಡಿ ಶಕ್ತಿ ಅರಸ್ ಗೆ ಮಾರಾಟ ಮಾಡಿರುವುದು ವಿಚಾರಣೆ ವೇಳೆ ಹೊರಬಂದಿತ್ತು.
ಇನ್ನಷ್ಟು ತನಿಖೆಯ ನಂತರ ಕೊಲೆಯನ್ನು ಏತಕ್ಕಾಗಿ ಮಾಡಲಾಗಿದೆ ಎಂಬುದು ತಿಳಿಯಬೇಕಾಗಿದೆ ಎಂದು ರಾಮನಗರ ಎಸ್ಪಿ ರಮೇಶ್ ಬಾನೋತ್ ಮಾಗಡಿ ಪೊಲೀಸ್ ಠಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಪುರುಷೋತ್ತಮ್ ವೃತ್ತ ನಿರೀಕ್ಷಕ ಶಬರೀಶ್, ತಾವರೆಕೆರೆ ಪಿಎಸ್ಐ ವೆಂಕಟೇಶ್, ಸಿಬ್ಬಂದಿ ಶಿವಶಂಕರ್, ಗೋವಿಂದರಾಜು, ಸತೀಶ್, ಗುರುಮೂರ್ತಿ, ವಿಶ್ವನಾಥ್, ಲಕ್ಷ್ಮೀಕಾಂತ್, ನವೀನ್ ಕುಮಾರ್, ಹುಲಿರಾಜ್ ಭಾಗವಹಿಸಿದ್ದರು