ಶೃಂಗೇರಿ: ಈ ಭಾಗದ ಪ್ರಧಾನ ಬೆಳೆಯಾಗಿರುವ ಅಡಿಕೆಯ ಸೇವನೆಯು ಆರೋಗ್ಯಕ್ಕೆ ಹಾನಿಕರ ಮತ್ತು ಕ್ಯಾನ್ಸರ್ ಕಾರಕ ಎಂಬ ವರದಿಯು ಸರ್ವೋಚ್ಛ ನ್ಯಾಯಾಲಯದಲ್ಲಿದ್ದು, ಇದು ಅಡಿಕೆ ಬೆಳೆಗಾರರ ಮೇಲೆ ಮತ್ತು ಬೆಲೆಯ ಮೇಲೆ ಪ್ರಭಾವ ಬೀರಿ ಬೆಳೆಗಾರರಲ್ಲಿ ಮತ್ತೊಮ್ಮೆ ಆತಂಕ ಸೃಷ್ಠಿಸಿದೆ ಎಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ, ವಕ್ತಾರ ಕಡ್ತೂರು ದಿನೇಶ್ ಹೇಳಿದರು.
ಪಟ್ಟಣದ ಮೆಸ್ಕಾಂ ಮುಂಭಾಗದಲ್ಲಿ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ವಿರುದ್ದ ಸಂಘಟಿಸಲಾದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಅವರು ಅಡಿಕೆ ಜಗಿಯುವಿಕೆ ಕಾನ್ಯರ್ ಕಾರಕ ಎಂಬ ವರದಿಯನ್ನು ಪುನರುಚ್ಛರಿಸಿರುವುದು ರೈತರ ಪಾಲಿಗೆ ಮರಣಶಾಸನವಾಗಿದೆ ಎಂದರು.
ರಾಜ್ಯ ಕಿಸಾನ್ ಸೆಲ್ ಅಧ್ಯಕ್ಷ ಸಚಿನ್ ಮೀಗಾ ಮಾತನಾಡಿ, ಅಡಿಕೆ ಆರೋಗ್ಯಕ್ಕೆ ಹಾನಿಕರ ವರದಿ ವಿಚಾರದಲ್ಲಿ ಇಲ್ಲಿಯ ಶಾಸಕರು ಮತ್ತು ಸಂಸದರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಹಾನಿ ಬಗ್ಗೆ 2001ರಲ್ಲಿ ರತ್ನಂ ಸಮಿತಿ ಸುಧೀರ್ಘ ವರದಿ ತಯಾರಿಸಿದ್ದು, ಈ ಸಮಿತಿ ಸದಸ್ಯರಾಗಿದ್ದ ಮ್ಯಾಮ್ಕೋಸ್ ಮತ್ತು ಕ್ಯಾಂಪ್ಕೋ ಸಂಸ್ಥೆಯ ಪ್ರತಿನಿಧಿಗಳೇ ವರದಿಗೆ ಸಹಿ ಮಾಡಿದ್ದಾರೆ ಎಂದು ದೂರಿದರು.
ಮುಂದೆ 2013ರಲ್ಲಿ ಪರಿಷ್ಕೃತ ವರದಿಯನ್ನು ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇದರಲ್ಲೂ ಹಾನಿಯ ಅಂಶ ಕಾಣಿಸಿದ್ದು, ಇದಕ್ಕೆ ಬಿಜೆಪಿಯವರೇ ಉತ್ತರದಾಯಿಗಳಾಗಿದ್ದಾರೆ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಂ.ನಟರಾಜ್ ಮಾತನಾಡಿ, ಕೇಂದ್ರ ಸರ್ಕಾರವು ಕಾರ್ಪೋರೆಟ್ ಲಾಬಿ ಮುಷ್ಟಿಯಲ್ಲಿದೆ. ಜನರಿಗೆ ಅಚ್ಛೆ ದಿನ ಕೊಡುವುದಾಗಿ ಹೇಳಿದ ಪ್ರಧಾನಿಯವರು 3 ವರ್ಷ ಕಳೆದರೂ ಏನನ್ನೂ ಮಾಡದೇ ಮೋದಿಯವರು ಇದ್ದ ನೆಮ್ಮದಿಯನ್ನು ಹಾಳು ಮಾಡಿದ್ದಾರೆ. ಪೆಟ್ರೋಲ್. ಡಿಸೇಲ್ ಗ್ರಾಹಕ ವಸ್ತುಗಳ ಬೆಲೆ ಏರಿಕೆ. ವಾಹನಗಳ ವಿಮಾ ಮತ್ತು ಶುಲ್ಕಗಳ ಹಲವು ಪಟ್ಟು ಹೆಚ್ಚಳ, ಬಲಾಢ್ಯರು ಬ್ಯಾಂಕಿನಲ್ಲಿ ಸಾಲಪಡೆದು ಮೋಸ ಮಾಡಿ ವಿದೇಶಕ್ಕೆ ಪಲಾಯನ ಮಾಡುತ್ತಿದ್ದಾರೆ. ದಿಕ್ಕು ಇಲ್ಲದೇ ಸಾಗುತ್ತಿರುವ ಕೇಂದ್ರ ಸರ್ಕಾರದ ಆಡಳಿತದ ವಿರುದ್ಧ ಪ್ರತಿಭಟನೆಯ ಹಾದಿಯನ್ನು ಹಿಡಿಯಬೇಕಾಗಿದೆ ಎಂದು ಹೇಳಿದರು.
ಪಕ್ಷದ ಹಿರಿಯ ನಾಯಕ ಟಿ.ಡಿ.ರಾಜೇಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯ ಬಜೆಟ್ ನಲ್ಲಿ ಈ ಭಾಗದ ಒತ್ತುವರಿದಾರರ ಸಂಕಷ್ಟಕ್ಕೆ ಅನೇಕ ಪರಿಹಾರವನ್ನು ಒದಗಿಸಿಕೊಟ್ಟು ಒತ್ತುವರಿ ತೆರವಿನ ಆತಂಕವನ್ನು ದೂರಮಾಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಜನರು ಕಾಂಗ್ರೆಸ್ ಪರವಾಗಿ ನಿಂತು ಸಿದ್ಧರಾಮಯ್ಯ ಅವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂದರು.