ಕಾಸರಗೋಡು: ಇಲ್ಲಿನ ಕನ್ನಡಿಗರ ಪರಿಸ್ಥಿತಿ, ಹಕ್ಕು ಸಂರಕ್ಷಣೆ, ಶಾಲೆಗಳ ಸ್ಥಿತಿ ಬಗ್ಗೆ ಎಲ್ಲಾ ಕನ್ನಡ ಪರ ಸಂಘಟನೆಗಳನ್ನು ವಾರದೊಳಗೆ ಬೆಂಗಳೂರಿಗೆ ಕರೆದು ನಿಯೋಗವೊಂದು ಕರ್ನಾಟಕ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಗಮನಕ್ಕೆ ತರಲಾಗುವುದು ಎಂದು ಕಸ್ತೂರಿ ಕರ್ನಾಟಕ ಜನಪದ ವೇದಿಕೆ ಅಧ್ಯಕ್ಷ ರಮೇಶ್ ಗೌಡ ಹೇಳಿದರು.
ಭಾಷಾ ಅಲ್ಪಸಂಖ್ಯಾತರ ಸಂವಿಧಾನ ಬದ್ಧವಾದ ಹಕ್ಕುಗಳನ್ನು ಕಸಿಯುವ ಸರಕಾರದ ನಿಲುವು ಮತ್ತು ಕನ್ನಡ ವಿರೋಧಿ ನೀತಿಯನ್ನು ಪ್ರತಿಭಟಿಸಿ ಕೇರಳ ರಾಜ್ಯೋತ್ಸವ ದಿನವಾದ ಇಂದು(ಗುರುವಾರ) ಕಾಸರಗೋಡು ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಕನ್ನಡ ಸಂಘಗಳ ಆಶ್ರಯದಲ್ಲಿ ಕರಂದಕ್ಕಾಡಿನಲ್ಲಿ ಕನ್ನಡ ಹಕ್ಕು ಸಂರಕ್ಷಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು ಕನ್ನಡ ಶಾಲೆಯಲ್ಲಿ ಕನ್ನಡ ಶಿಕ್ಷಕರ ನೇಮಕ ಮಾಡಬೇಕು, ಕನ್ನಡ ಭಾಷಿಗರನ್ನು ಗೌರವಿಸಿ, ಕಾಸರಗೋಡಿನ ಕನ್ನಡಿಗರ ಹಿತರಕ್ಷಣೆ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಅವರು ಕೇರಳದ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಬೇಕು, ಭಾಷೆ, ಗಡಿ, ಶಾಲೆಗಳ ವಿಚಾರಗಳ ಬಗ್ಗೆ ಕರ್ನಾಟಕ ಮುಖ್ಯಮಂತ್ರಿವರು ಕಾಸರಗೋಡಿಗೆ ಬಂದು ಜನರ ಭಾವನೆಯನ್ನು ಕೇಳಬೇಕು ಎಂದು ಹೇಳಿದರು.
ಕಾಸರಗೋಡಿನ ಕನ್ನಡಿಗರ ಸಂವಿಧಾನ ಬದ್ಧವಾದ ಹಕ್ಕುಗಳಂತೆ ಅವರ ನ್ಯಾಯುತ ಬೇಡಿಕೆಗಳನ್ನು ಒಂದು ವರ್ಷದ ಒಳಗೆ ಈಡೇರಿಸದೇ ಇದ್ದಲ್ಲಿ ಮುಂದಿನ ನವಂಬರ ತಿಂಗಳಲ್ಲಿ ಕನ್ನಡ ಭಾಷಿಕರ ಮೇಲೆ ನಡೆಯುವ ಅನ್ಯಾಯ ಪ್ರತಿಭಟಿಸಲು ಕಸ್ತೂರಿ ಕರ್ನಾಟಕ ಜನಪದ ವೇದಿಕೆಯ ಒಂದು ಸಾವಿರ ಕಾರ್ಯಕರ್ತರು ಕಾಸರಗೋಡಿಗೆ ಆಗಮಿಸಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪಂಚಾ ಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಕನ್ನಡ ಸಾಹಿತಿ ಪರಿಷತ್ತು ಕೇರಳ ಘಟಕದ ಅಧ್ಯಕ್ಷ ಎಸ್. ವಿ. ಭಟ್, ರವೀಶ ತಂತ್ರಿ ಕುಂಟಾರು, ಟಿ.ಎಸ್.ಸತೀಶ ಅಡಪ, ಸುಂದರ ಬಾರಡ್ಕ, ರಾಧಾಕೃಷ್ಣ ಉಳಿಯತ್ತಡ್ಕ , ಟಿ.ಎಸ್. ಶಂಕರ ನಾರಾಯಣ ಭಟ್, ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದಕೆಂದ್ರ ಸಮಿತಿ ಅಧ್ಯಕ್ಷ ರವೀಂದ್ರನಾಥ ಬಲ್ಲಾಳ್, ಸಂಘಟನೆಯ ಕುಂಬಳೆ ಉಪಜಿಲ್ಲಾ ಅಧ್ಯಕ್ಷ ಶ್ರೀಧರ ಮಾಸ್ಟರ್,ಮಂಗಲ್ಪಾಡಿ ಹೈಸ್ಕೂಲು ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಅಂಬಾರು ಮೊದಲಾದವರು ಪಾಲ್ಗೊಂಡರು. ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಭಾಸ್ಕರ ನಿರೂಪಿಸಿದರು.