ನವದೆಹಲಿ: ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾದ ಮೇಲೆ ಸದನದಲ್ಲಿ ಮಾಡಿದ ಚೊಚ್ಚಲ ಭಾಷಣದ ಕೆಲ ಭಾಗಗಳನ್ನು ಲೋಕಸಭೆಯ ಕಡತದಿಂದ ತೆಗೆದು ಹಾಕಿರುವ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
‘ಈ ಕ್ರಮ ಸಂಸದೀಯ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದ್ದು, ಕಡತದಿಂದ ತೆಗೆದುಹಾಕಿರುವ ಭಾಷಣದ ಭಾಗಗಳನ್ನು ಮರು ಸ್ಥಾಪಿಸುವಂತೆ’ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರ ಭಾಷಣವನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, ‘ನನ್ನ ಇಡೀ ಭಾಷಣದಿಂದ ಒಂದು ಪದವನ್ನಷ್ಟೇ ತೆಗೆದುಹಾಕಿ ಅನುರಾಗ್ ಠಾಕೂರ್ ನನ್ನ ಮೇಲೆ ಆರೋಪ ಮಾಡಿರುವುದು ಅಚ್ಚರಿ ಮೂಡಿಸಿದೆ. ಹೀಗೆ ಒಬ್ಬರ ಮಾತಿನಲ್ಲಿನ ಆಯ್ದ ಅಂಶಗಳನ್ನಷ್ಟೇ ಕೈಬಿಡುವುದರಿಂದ ಇಡೀ ಚರ್ಚೆಯೇ ಹಾದಿ ತಪ್ಪುತ್ತದೆ’ ಎಂದಿದ್ದಾರೆ.
‘ಸದನದ ನಡಾವಳಿಯಿಂದ ಕೆಲ ಟೀಕೆಗಳನ್ನು ತೆಗೆದುಹಾಕುವ ಅಧಿಕಾರ ಸಭಾಧ್ಯಕ್ಷರಿಗೆ ಇದೆ. ಆದರೆ ಅದಕ್ಕೂ ಕೆಲ ಷರತ್ತುಗಳು ಇವೆ. ಲೋಕಸಭೆ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮ 380ರಲ್ಲಿ ಈ ಬಗ್ಗೆ ವಿವರಿಸಲಾಗಿದೆ’ ಎಂದರು.
‘ಕಡತದಿಂದ ತೆಗೆದು ಹಾಕಿರುವ ನನ್ನ ಭಾಷಣದ ಭಾಗಗಳು ನಿಯಮ 380ರ ಅಡಿಯಲ್ಲಿ ಬರುವುದಿಲ್ಲ ಎಂದು ನಾನು ಖಚಿತಪಡಿಸುತ್ತೇನೆ. ನಾನು ಸದನದಲ್ಲಿ ಹೇಳಿದ್ದು ನೆಲದ ವಾಸ್ತವ ಸತ್ಯವನ್ನು. ಸದನದ ಪ್ರತಿಯೊಬ್ಬ ಸದಸ್ಯನು ಜನರ ಧ್ವನಿಯನ್ನು ಪ್ರತಿನಿಧಿಸುತ್ತಾನೆ. ಪ್ರತಿಯೊಬ್ಬರಿಗೂ ಸಂವಿಧಾನದ 105 (1) ನೇ ವಿಧಿಯಲ್ಲಿ ಪ್ರತಿಪಾದಿಸಿರುವ ವಾಕ್ ಸ್ವಾತಂತ್ರ್ಯವಿದೆ’ ಎಂದು ಹೇಳಿದರು.
‘ಸದನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಪ್ರತಿಯೊಬ್ಬ ಸಂಸದನ ಹಕ್ಕಾಗಿದೆ. ಇದೇ ಹಕ್ಕನ್ನು ನಾನು ನಿನ್ನೆ ಪ್ರತಿಪಾದಿಸಿದ್ದೇನೆ. ನನ್ನ ಭಾಷಣದ ಭಾಗಗಳನ್ನು ಕಡತಗಳಿಂದ ಕಿತ್ತು ಹಾಕಿರುವುದು ಸಂಸದೀಯ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ’ ಎಂದರು.
ಇನ್ನು ಭಾಷಣದ ಭಾಗಗಳನ್ನು ಕಡತದಿಂದ ತೆಗೆದುಹಾಕಿರುವ ಕುರಿತಂತೆ ಸಂಸತ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, ‘ಮೋದಿ ಅವರ ಜಗತ್ತಿನಿಂದ ಸತ್ಯವನ್ನು ಕಿತ್ತು ಹಾಕಬಹುದು. ಆದರೆ, ವಾಸ್ತವದಲ್ಲಿ ಅದು ಸಾಧ್ಯವಿಲ್ಲ’ ಎಂದರು.