ಲಕ್ನೋ: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಬಳಿಕ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಯೂಟರ್ನ್ ತೆಗೆದುಕೊಂಡಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ತಮ್ಮ ಉತ್ತರಾಧಿಕಾರಿ ಸ್ಥಾನದಿಂದ ಕೆಳಗಿಳಿಸಿದ್ದ ಸೋದರಳಿಯ ಆಕಾಶ್ ಆನಂದ್ ರನ್ನು ಈಗ ಮರು ನೇಮಿಸಿದ್ದಾರೆ.
ತಮ್ಮ ಉತ್ತರಾಧಿಕಾರಿ ಜೊತೆಗೆ ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಗೆ ಮರುನೇಮಕ ಮಾಡಲಾಗಿದೆ.
ಮಾಯಾವತಿ ಅವರು ಮೇ ತಿಂಗಳ ಆರಂಭದಲ್ಲಿ ಅವರ ಸೋದರಳಿಯ ಆಕಾಶ್ ಆನಂದ್ ಅವರನ್ನು ಬಿಎಸ್ಪಿಯ ರಾಷ್ಟ್ರೀಯ ಸಂಯೋಜಕ ಮತ್ತು ಅವರ ಉತ್ತರಾಧಿಕಾರಿ ಹುದ್ದೆಯಿಂದ ತೆಗೆದುಹಾಕಿದ್ದರು. ಆಕಾಶ್ ಇನ್ನೂ ಅಪ್ರಬುದ್ಧ ಎಂದು ಆ ಸಮಯದಲ್ಲಿ ಮಾಯಾವತಿ ಹೇಳಿದ್ದರು. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಅವರು, ನಾನು ಆಕಾಶ್ ಆನಂದ್ ಅವರನ್ನು ಬಿಎಸ್ಪಿಯ ರಾಷ್ಟ್ರೀಯ ಸಂಯೋಜಕ ಮತ್ತು ನನ್ನ ಉತ್ತರಾಧಿಕಾರಿ ಎಂದು ಘೋಷಿಸಿದೆ. ಆದರೆ ಪಕ್ಷ ಮತ್ತು ಚಳವಳಿಯ ಹಿತಾಸಕ್ತಿಯಿಂದ, ಅವರು ಪ್ರಬುದ್ಧರಾಗುವವರೆಗೂ ಈ ಎರಡೂ ಪ್ರಮುಖ ಜವಾಬ್ದಾರಿಗಳಿಂದ ಅವರನ್ನು ದೂರ ಇಡಲಾಗುತ್ತಿದೆ ಎಂದು ಬರೆದಿದ್ದರು. ಈಗ ಮಹತ್ವದ ಬದಲಾವಣೆಯಲ್ಲಿ ಮತ್ತೆ ಆಕಾಶ್ಗೆ ಮಾಯಾವತಿ ಅವರು ಪಟ್ಟ ಕಟ್ಟಿದ್ದಾರೆ.