ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರಿಗೆ ಜೀವ ಬೆದರಿಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
₹ 20 ಕೋಟಿ ನೀಡದಿದ್ದರೆ ಕೊಲೆ ಮಾಡುವುದಾಗಿ ಇಮೇಲ್ನಲ್ಲಿ ವ್ಯಕ್ತಿಯೊಬ್ಬ ಅಂಬಾನಿಗೆ ಬೆದರಿಕೆ ಹಾಕಿದ್ದಾನೆ. “ನೀವು ನಮಗೆ 20 ಕೋಟಿ ರೂಪಾಯಿ ನೀಡದಿದ್ದರೆ, ನಾವು ನಿಮ್ಮನ್ನು ಕೊಲ್ಲುತ್ತೇವೆ. ನಾವು ಭಾರತದಲ್ಲಿ ಅತ್ಯುತ್ತಮ ಶೂಟರ್ಗಳನ್ನು ಹೊಂದಿದ್ದೇವೆ ಎಂದು ಇಮೇಲ್ ನಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 27 ರಂದು ಶಾದಾಬ್ ಖಾನ್ ಎಂಬ ಹೆಸರಿನ ವ್ಯಕ್ತಿಯಿಂದ ಇಮೇಲ್ ಬಂದಿದೆ. ಮುಂಬೈನ ಗಾಮ್ದೇವಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 387 ಮತ್ತು 506 (2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರನ್ನು ಗುರಿಯಾಗಿಸಿಕೊಂಡು ಅನಾಮಧೇಯ ಕರೆ ಮಾಡಿದ್ದಕ್ಕಾಗಿ ಮುಂಬೈ ಪೊಲೀಸರು ಕಳೆದ ವರ್ಷ ಬಿಹಾರದ ವ್ಯಕ್ತಿಯನ್ನು ಬಂಧಿಸಿದ್ದರು. ದಕ್ಷಿಣ ಮುಂಬೈನಲ್ಲಿರುವ ಅಂಬಾನಿ ಕುಟುಂಬದ ನಿವಾಸ ‘ಆಂಟಿಲಿಯಾ’ ಜೊತೆಗೆ ಎಚ್ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಕರೆ ಮಾಡಿದ್ದಾತ ಬೆದರಿಕೆ ಒಡ್ಡಿದ್ದ.