ಹೊಸಬರ ಸಿನೆಮಾವೊಂದು ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಇತ್ತೀಚೆಗೆ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳು ಹೊಸ ಪ್ರೇಕ್ಷಕರನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗುತ್ತಿವೆ. ಈಗಾಗಲೇ ಬಿಡುಗಡೆಯಾಗಿರುವ ಇಂಥ ಹಲವು ಸಿನಿಮಾಗಳಂತೆ ‘ದಾಮಾಯಣ’ ಕೂಡ ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತದೆ ಎಂದು ಈ ಚಿತ್ರದ ನಿರ್ದೇಶಕ, ನಟ ಶ್ರೀಮುಖ ಸುಳ್ಯ ತಿಳಿಸಿದ್ದಾರೆ. ಬೇರೆ ಬೇರೆ ಉದ್ಯೋಗ ಮಾಡಿ, ಕಿರುಚಿತ್ರಗಳನ್ನು ನಿರ್ದೇಶನ ಮಾಡಿ ಅನುಭವವಿರುವ ಅವರು ಇದೇ ಮೊದಲ ಬಾರಿಗೆ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.
‘ನಮ್ಮ ದಾಮಾಯಣ ಸಿನಿಮಾ ಕಂಟೆಂಟ್ ಆಧರಿಸಿದೆ. ಇದರಲ್ಲಿ ನಾಯಕ, ನಾಯಕಿ ಇಲ್ಲ. ಪ್ರಮುಖ ಪಾತ್ರಧಾರಿಗಳಷ್ಟೇ ಇದ್ದಾರೆ. ಇದೊಂದು ಸಿಚುಯೇಶನಲ್ ಕಾಮಿಡಿ ಸಿನಿಮಾ. ಸಂದರ್ಭಗಳೇ ಪ್ರೇಕ್ಷಕರನ್ನು ನಗಿಸುತ್ತವೆ. ನನಗೆ ಸಿನಿಮಾ ಮಾಡಿದ ಅನುಭವವಿಲ್ಲ. ಆದರೆ ಕಿರುಚಿತ್ರಗಳಲ್ಲಿ ಹೆಚ್ಚಿನ ಅನುಭವ ಪಡೆದಿದ್ದೇನೆ. ಒಂದು ತಂಡ ಕಟ್ಟಿ, ಉತ್ತಮ ಸ್ಕ್ರಿಪ್ಟ್ ಬರೆದು, ನಂತರ ಅದೇ ತಂಡದೊಂದಿಗೆ ಸಂಪೂರ್ಣ ಸ್ಕ್ರಿಪ್ಟ್ ಬರೆದು, ಪಕ್ಕಾ ಪ್ಲ್ಯಾನ್ ಮಾಡಿ ಪೂರ್ಣ ತಯಾರಿಯೊಂದಿಗೆ ಈ ಸಿನಿಮಾ ಮಾಡಿದ್ದೇವೆ. ಹಾಗಾಗಿ ಈ ಸಿನಿಮಾ ನೋಡಿದ ಒಂದಷ್ಟು ಜನರು ಇದನ್ನು ಇಷ್ಟಪಟ್ಟಿದ್ದಾರೆ’ ಎಂದಿದ್ದಾರೆ.