ಬೆಂಗಳೂರು: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 6ರ ವಿನ್ನರ್ ಆಗಿ ಹೊರಹೊಮ್ಮಿದ ಶಶಿಕುಮಾರ್ ಕಾಲಿಗೆ ಗಾಯವಾಗಿದೆ. ಮೆಹಬೂಬ ಸಿನಿಮಾದ ಚಿತ್ರೀಕರಣದ ವೇಳೆ ಈ ಅವಘಡ ಸಂಭವಿಸಿದೆ.
ಶೂಟಿಂಗ್ ವೇಳೆ ನಟ ಶಶಿಕುಮಾರ್ ಆಕ್ಷನ್ ಸೀನ್ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಿಲ್ಡಿಂಗ್ ಹತ್ತುವ ಸೀನ್ ಇತ್ತು. ಬಿಲ್ಡಿಂಗ್ ಹತ್ತುವ ವೇಳೆ ನಟ ನಿಯಂತ್ರಣ ತಪ್ಪಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಪರಿಣಾಮ ನಟ ಶಶಿಕುಮಾರ್ ಅವರ ಕಾಲಿಗೆ ಗಾಯಗಳಾಗಿವೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದೆ ಶಶಿ ನಟಿಸಿರುವ ‘ಮೆಹಬೂಬಾ’ ಸಿನಿಮಾದ ಹೊಸ ಪೋಸ್ಟರ್ನ್ನು ಸಚಿವ ಚಲುವನಾರಾಯಣ ಸ್ವಾಮಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ‘ಮೆಹಬೂಬಾ’ ಸಿನಿಮಾಗೆ ಶಶಿ ಅವರೇ ನಿರ್ಮಾಪಕ ಹಾಗೂ ನಾಯಕ. ಹೀಗಾಗಿ ಲಾಭ-ನಷ್ಟ ಹಾಗೂ ಹೆಸರು ಅವರದ್ದೇ. ಚಿತ್ರತಂಡಕ್ಕೆ ಒಳಿತಾಗಲಿ’ ಎಂದು ಸಚಿವ ಚಲುವ ನಾರಾಯಣ ಸ್ವಾಮಿ ಹಾರೈಸಿದ್ದರು.