ಸ್ಯಾಂಡಲ್ ವುಡ್: ನಿರ್ದೇಶಕ ನೀನಾಸಂ ಮಂಜು ಕನ್ನೇರಿ ಸಿನಿಮಾ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಚಿತ್ರ ಕನ್ನೇರಿ. ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯವನ್ನು ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಆರಂಭಿಸಿದೆ.
ಚಂದನವನದ ಖ್ಯಾತ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಫಸ್ಟ್ ಲುಕ್ ರಿಲೀಸ್ ಮಾಡಿ, ಶುಭ ಹಾರೈಸಿದ್ದಾರೆ. ಇದೊಂದು ನೈಜ ಘಟನೆ ಆಧಾರಿತ ಸಿನಿಮಾ. ಕೊಡಗಿನ ದಿಡ್ಡಳ್ಳಿ ಸಂತ್ರಸ್ತರ ನೋವು ನಲಿವನ್ನ ಡೈರೆಕ್ಟರ್ ನೀನಾಸಂ ಮಂಜು ಹೇಳೋದಕ್ಕೆ ಹೊರಟಿದ್ದಾರೆ. ಬುಡಕಟ್ಟು ಜನಾಂಗದವರಿಗೆ ನಿಲ್ಲಲು ಒಂದು ನೆಲೆ ಇಲ್ಲ. ಅವರಲ್ಲಿಯೂ ಹೆಣ್ಣು ಮಕ್ಕಳಿದ್ದಾರೆ. ಅವರಲ್ಲಿಯೂ ಬದುಕು ಕಟ್ಟಿಕೊಳ್ಳಬೇಕೆಂಬ ತುಡಿತವಿದೆ. ಆದ್ರೆ ಅವರ ಪರಿಸ್ಥಿತಿ ಎಲ್ಲರಂತೆಯೂ ಇಲ್ಲ. ಇದೆಲ್ಲವನ್ನೂ ಕನ್ನೇರಿ ಮೂಲಕ ಹೇಳ ಹೊರಟಿದ್ದಾರೆ ನೀನಾಸಂ ಮಂಜು.
ಇದಕ್ಕಾಗಿ ನೀನಾಸಂ ಮಂಜು ಸಾಕಷ್ಟು ಹೋಮ್ ವರ್ಕ್ ಕೂಡ ಮಾಡಿದ್ದಾರೆ. ಅದರ ಜೊತೆಗೆ ಕ್ಷೀರಸಾಗರ ಅವರ ಜೇನು: ಆಕಾಶದ ಅರಮನೆ ಕಾದಂಬರಿಯ ಎಳೆಯನ್ನು ಆಧಾರವಾಗಿಟ್ಟುಕೊಂಡಿದ್ದಾರೆ. ಮನಮುಟ್ಟುವಂತ ಕಥೆ ರಚಿಸೋ ಜವಾಬ್ದಾರಿಯನ್ನು ಕೋಟಿಗಾನಹಳ್ಳಿ ರಾಮಯ್ಯ ಹೊತ್ತುಕೊಂಡಿದ್ದಾರೆ.
ನೈಜ ಘಟನೆಯಾಧಾರಿವಾಗಿರೋ ಕಾರಣ ಸಿನಿಮಾದಲ್ಲಿ ಬುಡಕಟ್ಟು ಜನಾಂಗದವರನ್ನು ತೊಡಗಿಸಿಕೊಳ್ಳಲಾಗಿದೆ. ಇನ್ನುಳಿದಂತೆ ಚಿತ್ರಕ್ಕೆ ಅರ್ಚನಾ ಮಧುಸೂಧನ್ ಮುಖ್ಯಭೂಮಿಕೆಯಲ್ಲಿ ಜೀವ ತುಂಬಿದ್ದಾರೆ. ಚಿತ್ರದ ತಾರಾಗಣದಲ್ಲಿ ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ.ಮಠ್, ಕರಿಸುಬ್ಬು ಒಳಗೊಂಡಂತೆ ಹಲವು ಪ್ರತಿಭಾನ್ವಿತ ಕಲಾವಿದರು ಜೊತೆಯಾಗಿದ್ದಾರೆ. ಬೆಂಗಳೂರು. ಎಚ್.ಡಿ.ಕೋಟೆ, ಕೋಲಾರ ಸೇರಿದಂತೆ ಹಲವು ಭಾಗಗಳಲ್ಲಿ ಸಿನಿಮಾ ಸೆರೆ ಹಿಡಿಯಲಾಗಿದೆ. ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್ ಮಣಿಕಾಂತ್ ಕದ್ರಿ ಸಂಗೀತ ನರ್ದೇಶನ, ಸುಜಿತ್ ನಾಯಕ್ ಸಂಕಲನ ಚಿತ್ರಕ್ಕಿದೆ. ಬುಡ್ಡಿ ದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.