ಬೆಂಗಳೂರು: ದರ್ಶನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಹಿನ್ನೆಲೆ ಅವರ ಹಿಂಬಾಲಕರು ಇಂದ್ರಜಿತ್ ಅವರಿಗೆ ಕರೆ ಮಾಡಿ ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರೆ ಎಂದು ಇಂದ್ರಜಿತ್ ತಿಳಿಸಿದ್ದಾರೆ.
ದರ್ಶನ್ ಪ್ರಚೋದನೆಯಿಂದ ಅವರ ಹಿಂಬಾಲಕರು ,ರೌಡಿಗಳು ಫೋನ್, ವಾಟ್ಸ್ ಆಪ್ ಕಾಲ್, ವೀಡಿಯೋ ಕಾಲ್ ಮೂಲಕ ಸಮಸ್ಯೆ ಮಾಡುತ್ತಿದ್ದಾರೆ. ಕಳೆದ 24 ಗಂಟೆಯಿಂದ ಇಪ್ಪತ್ತರಿಂದ ಮೂವತ್ತು ಜನ ಕಾಲ್ ಮಾಡುತ್ತಲೇ ಇದ್ದಾರೆ. ಅಶ್ಲೀಲವಾದ ಭಾಷೆ, ಚಿತ್ರಗಳನ್ನ ಬಳಸಿಕೊಂಡು ಬೆದರಿಕೆ ಹಾಕುತ್ತಿದ್ದಾರೆ. ಇದಕ್ಕೆಲ್ಲಾ ನಾನು ಹೆದರುವುದಿಲ್ಲ ಎಂದರು.
ನಾನು 25 ವರ್ಷದಿಂದ ಪತ್ರಿಕೋದ್ಯಮದಲ್ಲಿದ್ದೇನೆ. ಅವರಿಗೆ ಪಾಠ ಕಲಿಸಬೇಕು, 30 ಸೆಕೆಂಡ್ ಗೆ ಒಂದು ಕಾಲ್ ಮಾಡುತ್ತಿದ್ದಾರೆ. ದರ್ಶನ್ ಹಿಂಬಾಲಕರು ರೌಡಿಗಳು ಕಾಲ್ ಇದಾಗಿದೆ. ಮಾಧ್ಯಮದವರ ಬಗ್ಗೆ ದರ್ಶನ್ ಆಡಿರೋ ಮಾತಿನ ಆಡಿಯೋ ಕ್ಲಿಪ್ ನಾನು ಕೇಳಿದೆ. ದರ್ಶನ್ ಎಷ್ಟು ಅಶ್ಲೀಲವಾಗಿ ಪದಬಳಕೆ ಮಾಡಿದ್ದಾರೆ ಅಂತ ನೋಡಿ. ದರ್ಶನ್ ಪದ ಬಳಕೆಯನ್ನ ಯಾವ ಮಾಧ್ಯಮದಲ್ಲೂ ಹಾಕೋಕೆ ಆಗಲ್ಲ ಅಷ್ಟು ಕೆಟ್ಟ ಪದಗಳನ್ನ ಬಳಸಿದ್ದಾರೆ. ದರ್ಶನ್ ಅವರ ಹಿಂಬಾಲಕರು, ಅವರ ಕಡೆ ಇರೋ ರೌಡಿಗಳು ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಇಂದ್ರಜಿತ್ ಆರೋಪಿಸಿದರು.
ನಾನು ಸತ್ಯ ಮಾತನಾಡುತ್ತಿರುವುದರಿಂದ ದರ್ಶನ್ ವಿಚಲಿತರಾಗಿದ್ದಾರೆ. ಮಾಧ್ಯಮಗಳ ಮುಂದೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರು ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕು ಎಂದು ನಿನ್ನೆ ಇಂದ್ರಜಿತ್ ಸಲಹೆ ನೀಡಿದ್ದರು. 2 ದಿನಗಳ ಹಿಂದೆ ನಾನು ಹಲ್ಲೆ ಮಾಡಿರುವ ವಿಡಿಯೋ ಬಿಡುಗಡೆ ಮಾಡುವಂತೆ ಇಂದ್ರಜಿತ್ಗೆ ದರ್ಶನ್ ಸವಾಲು ಹಾಕಿದ್ದರು. ನೀವು ಹಲ್ಲೆ ಮಾಡಿಲ್ಲ ಎಂದು ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ ನೋಡೋಣ ಎಂದು ಇಂದ್ರಜಿತ್ ಪ್ರತಿಸವಾಲು ಹಾಕಿದ್ದರು. ಈ ಬಗ್ಗೆ ಸೈಬರ್ ಕ್ರೈಮ್ ಪೋಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು ಪೋಲೀಸರು ತನಿಖೆ ನಡೆಸುತಿದ್ದಾರೆ.