ಬೆಂಗಳೂರು : ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಎಂ ಬಿ ಪಾಟೀಲ್ ಸಿಎಂ ಬಿಎಸ್ ಯಡಿಯೂರಪ್ಪ ಪರ ಮಾತನಾಡಿ ಕುತೂಹಲ ಮೂಡಿಸಿದ್ದಾರೆ. ಅವರು ಲಿಂಗಾಯತ ಸಮುದಾಯದ ಧೀಮಂತ ನಾಯಕ ಎಂದು ಬಣ್ಣಿಸಿದ್ದಾರೆ. ಅಷ್ಟೇ ಅಲ್ಲದೇ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಿದರೆ, ನಿಶ್ಚಿತವಾಗಿಯೂ ಬಿಜೆಪಿ ವರಿಷ್ಠರು ಲಿಂಗಾಯತರ ಅವಕೃಪೆಗೆ ತುತ್ತಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜು. 26ಕ್ಕೆ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾಗಿ ಎರಡು ವರ್ಷ ಪೂರೈಸಲಿದ್ದು, ಇದಾದ ಬಳಿಕ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಹೆಚ್ಚಿದೆ ಎಂಬ ಸುದ್ದಿ ಬಿಜೆಪಿ ವಲಯದಲ್ಲಿ ಜೋರಾಗಿದೆ. ಇದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆ ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಧ್ವನಿಯಲ್ಲಿ ಕೇಳಿ ಬಂದಿರು ಆಡಿಯೋ ಕೂಡ ವೈರಲ್ ಆಗಿದೆ. ಆದರೆ, ನಳೀನ್ ಕುಮಾರ್ ಕಟೀಲ್ ತಮ್ಮ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಯಾರೋ ಈ ರೀತಿ ಆಡಿಯೋ ಮಾಡಿದ್ದಾರೆ ಎಂದು ಈ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ.
ಯಡಿಯೂರಪ್ಪನವರ ವಯಸ್ಸು ಮತ್ತು ಕೊಡುಗೆಯನ್ನು ಪರಿಗಣಿಸಿ ಅವರನ್ನು ಘನತೆ ಮತ್ತು ಮರ್ಯಾದೆಯಿಂದ ನಡೆಸಿಕೊಳ್ಳಬೇಕೆಂಬುದು ನನ್ನ ವೈಯಕ್ತಿಕ ಅನಿಸಿಕೆ ಎಂದು ತಿಳಿಸಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಹೈ ಕಮಾಂಡ್ ಭೇಟಿಯಾಗಿ ಮರಳಿದ ಬಿಎಸ್ ಯಡಿಯೂರಪ್ಪ ಅವರ ಮಾತಿನ ವರಸೆಯಲ್ಲಿ ಕೊಂಚ ಬದಲಾವಣೆ ಯಾಗಿತ್ತು. ಹೈ ಕಮಾಂಡ್ಗೆ ನನ್ನ ಮೇಲೆ ವಿಶ್ವಾಸವಿದೆ ಎನ್ನತ್ತಿರುವ ಬಿಎಸ್ವೈ ಇದೇ ವೇಳೆ ಹೈಕಮಾಂಡ್ ಬಯಸಿದರೆ ಅವರ ಮಾತು ಕೇಳಬೇಕಾಗುತ್ತದೆ ಎನ್ನುವ ಮೂಲಕ ನಾಯಕತ್ವ ಬದಲಾವಣೆ ಕುರಿತ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ನೀಡಿದ್ದರು. ಇದೇ ವೇಳೆ ಸಿಎಂ ಜು. 26ರ ಒಳಗೆ ಎಲ್ಲಾ ಕಡತಗಳನ್ನು ಕ್ಲಿಯರ್ ಮಾಡುವಂತೆ ಕೂಡ ಸೂಚನೆ ನೀಡಿರುವುದು ಬಹಳಷ್ಟು ಪ್ರಶ್ನೆ ಹುಟ್ಟು ಹಾಕಿದೆ. ಇದರೊಟ್ಟಿಗೆ ಜು. 26ರಂದು ಸಿಎಂ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದು, ಜು. 25ಕ್ಕೆ ಔತಣಕೂಟವನ್ನು ಆಯೋಜಿಸಿದ್ದಾರೆ. ಇದೇ ಹಿನ್ನಲೆ ಯಡಿಯೂರಪ್ಪ ಅವರ ನಾಯಕತ್ವ ಇದೇ ತಿಂಗಳಿಗೆ ಮುಕ್ತಾಯವಾಗಲಿದೆ ಎನ್ನಲಾಗುತ್ತಿದೆ.