ಮೈಸೂರು: ನಂಜನಗೂಡು ತಾಲೂಕಿನ ಈಶ್ವರಗೌಡನ ಹಳ್ಳಿ ಗ್ರಾಮದಲ್ಲಿ ವರ್ಷದ ಮೊದಲ ಮಳೆ ಸುರಿದ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ರಾಜ್ಯದ ಜನತೆಗೆ ಹಾಗೂ ರೈತರಿಗೆ ಉತ್ತಮ ಮಳೆ ಬೆಳೆಯಾಗಿ ಸಮೃದ್ಧಿ ನೀಡಲಿ ಎಂದು ಗ್ರಾಮದ ಶ್ರೀ ಕಾಡು ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಶ್ರೀ ಕಾಡುಬಸವೇಶ್ವರನಿಗೆ ಅಭಿಷೇಕ, ವಿವಿಧ ಹೂವಿನ ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ಇದೇ ವೇಳೆ ಮಾತನಾಡಿದ ಗ್ರಾಮದ ಕೆಪಿಸಿಸಿ ಮಾಧ್ಯಮ ವಕ್ತಾರರಾದ ಬಿ.ರೇವಣ್ಣ ಗ್ರಾಮದ ಶ್ರೀ ಕಾಡು ಬಸವೇಶ್ವರ ಸ್ವಾಮಿ ತುಂಬಾ ಶಕ್ತಿಯುತ ದೇವರಾಗಿದ್ದು, ಪ್ರತಿ ವರ್ಷದಂತೆ ನಮ್ಮ ಗ್ರಾಮದ ಶ್ರೀ ಕಾಡು ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿದ ನಂತರ ದಿನವೇ ಮಳೆಯಾಗುತ್ತಿದ್ದು, ಈ ಬಾರಿಯೂ ಅದೇ ರೀತಿ ಪೂಜೆ ನೆರವೇರಿಸಿದ ನಂತರ ಉತ್ತಮ ಮಳೆಯಾಗಿದೆ.
ಪ್ರತಿ ಬಾರಿಯೂ ನಾವು ಏಪ್ರಿಲ್ ತಿಂಗಳಲ್ಲೆ ಪೂಜೆ ನೆರವೇರಿಸುತ್ತಿದ್ದೆವು, ಆದರೆ ಈ ಬಾರಿ ಚುನಾವಣೆ ಇದ್ದ ಹಿನ್ನೆಲೆಯಲ್ಲಿ ಚುನಾವಣೆ ಮುಗಿದ ನಂತರ ಪೂಜೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರಲ್ಲದೇ, ರಾಜಕೀಯ ಮುಖಂಡರು ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಈ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ನಂತರ ಚುನಾವಣಾ ಪ್ರಚಾರ ಕೈಗೊಂಡರೆ ವಿಜಯಶಾಲಿಯಾಗುತ್ತಾರೆ ಎಂಬ ನಂಬಿಕೆಯಿದ್ದು, ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿ ಬಾರಿ ಚುನಾವಣೆಯ ಸಂದರ್ಭದಲ್ಲಿ ಈ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದ್ದರು ಎಂದು ಹೇಳಿದರು.
ಈಶ್ವರಗೌಡನ ಹಳ್ಳಿ, ಬೀರಿಹುಂಡಿ, ಕೊಟ್ರಯ್ಯನ ಹುಂಡಿ, ಮುದ್ದೇಬೀರನಹುಂಡಿ, ಹೆಳವರ ಹುಂಡಿ, ತಾಯೂರು, ಡಣಾಯಕನಪುರ, ಬಿಲಿಗೆರೆಹುಂಡಿ, ಸೇರಿದಂತೆ ಸುತ್ತ ಮುತ್ತಲ ಗ್ರಾಮದ ಸುಮಾರು 8ರಿಂದ 10ಸಾವಿರ ಭಕ್ತಾಧಿಗಳು ಆಗಮಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ದೇವಾಲಯಕ್ಕೆ ಆಗಮಿಸಿದ್ದ ಎಲ್ಲಾ ಭಕ್ತಾಧಿಗಳಿಗೂ ಗ್ರಾಮಸ್ಥರು ಹಾಗೂ ದೇವಾಲಯ ಸಮಿತಿಯ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.