‘ಸರ್ವ ಕಾಮಾಧುದೇ ದೇವಿ ಸರ್ವತಿರ್ಥಿಭಿಶೇಚಿನಿ, ಪಾವನೇ ಸುರಭಿ ಶ್ರೇಷ್ಠ ದೇವಿ ತುಭ್ಯಂ ನಮೋಸ್ತುತೆ’ ಎನ್ನುವಂತೆ ಬಹಳ ಹಳೆಯ ಕಾಲದಿಂದಲೂ ಸನಾತನ ಧರ್ಮದಲ್ಲಿ ಹಸುವನ್ನು ಒಂದು ಪವಿತ್ರತೆಯ ಸಂಕೇತವಾಗಿ ತಾಯಿಯ ಸ್ಥಾನವನ್ನು ನೀಡುತ್ತಾ ಬಂದಿದೆ. ಗೋ ಪೂಜೆ ಎಂದರೆ ಹಸುವಿನ ರೂಪದ ಕಾಮಧೇನುವನ್ನು ಪೂಜಿಸುವುದು.
ಪುರಾಣ ಗ್ರಂಥಗಳ ಪ್ರಕಾರ ಗೋವು ಬೇಡಿದನ್ನೆಲ್ಲಾ ನೀಡುವ ಕಾಮಧೇನು ಎಂದು. ಗೋಮಾತೆಯಲ್ಲಿ ಮುಕ್ಕೊಟಿ ದೇವತೆಗಳು ವಾಸಿಸುತ್ತಾರೆ ಹೀಗಾಗಿ ಹಸುವಿಗೆ ಆಹಾರ ನೀಡುವುದರಿಂದ ಸುಖ, ಶಾಂತಿ ನೆಮ್ಮದಿ ಲಭ್ಯವಾಗುತ್ತದೆ ಎಂದು ಹಿರಿಯರು ನಂಬುತ್ತಾರೆ. ಅಷ್ಟೇ ಅಲ್ಲ ನಿತ್ಯ ಗೋಮಾತೆಯ ಆರಾದನೆ ಮಾಡಿದರೆ ಮಾಡಿದ ಪಾಪಕರ್ಮಗಳೆಲ್ಲ ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ.
ದೀಪಾವಳಿ ಹಬ್ಬದಂದು ವಿಶೇಷವಾಗಿ ಬಲೀಂದ್ರ ಪೂಜೆಯ ದಿನದಂದು ಅಂದರೆ ದಿಪಾವಳಿಯ ಮೂರನೇ ದಿನದಂದು ಗೋ ಪೂಜೆಯನ್ನು ಮಾಡುತ್ತಾರೆ. ಆ ದಿನ ಹಸುವಿಗೆ ಸ್ನಾನ ಮಾಡಿಸಿ, ಮೈ ತುಂಬಾ ಗಂಧದ ಲೇಪವನ್ನು ಹಾಕಿ, ಅರಶಿನ ಕುಂಕುಮದಿಂದ ತಿಲಕವಿಟ್ಟು ಕೊರಳಿಗೆ ಹೂವಿನ ಮಾಲೆ ಹಾಕಿ ಆರತಿ ಎತ್ತಿ ತಮ್ಮ ಮನೆ ಮನದಲ್ಲಿ ಯಾವತ್ತೂ ಶಾಂತಿ ನೆಲೆಸಲಿ ಹಾಗೂ ಗೋ ಮಾತೆಯು ತಮ್ಮೊಂದಿಗಿದ್ದು, ಸದಾಕಾಲ ಹಸಿವನ್ನು ನೀಗಿಸುವ ಅಮೃತವನ್ನು ನೀಡುವಂತೆ ಬೇಡಿಕೊಂಡು ಗೋಮಾತೆಯ ಆಶೀರ್ವಾದವನ್ನು ಪಡೆಯುತ್ತಾರೆ.
ಇದಾದ ಬಳಿಕ ಗೋಮಾತೆಗೆ ಆಹಾರ ನೀಡುತ್ತಾರೆ. ನೀಡುವ ಆಹಾರಗಳೂ ಕೂಡ ಆಯಾ ಪ್ರದೇಶಗಳಿಗೆ ಬದಲಾಗುತ್ತಾ ಹೋಗುತ್ತದೆ. ಹಲವು ಕಡೆ ದೋಸೆ, ಅವಲಕ್ಕಿ, ಕಡುಬು, ಅರಶಿನ ಎಲೆ ಕಡುಬು, ಹೊದ್ಲು ಹೀಗೆ ವಿಭಿನ್ನ ರೀತಿಯ ಆಹಾರಗಳು ಆ ದಿನ ಗೋಮಾತೆಗೆ ಸಮರ್ಪಿತವಾಗುತ್ತದೆ.
ಕಾಮಧೇನುವಿನ ಜನನ
ದೇವತೆಗಳು ಮತ್ತು ಅಸುರರ ನಡುವೆ ಅಮೃತಕ್ಕಾಗಿ ಕ್ಷೀರ ಸಾಗರವನ್ನು ಮಂಥನ ಮಾಡಿದಾಗ 14ರತ್ನಗಳು ಉದಿಸಿ ಬಂದವು ಅವುಗಳಲ್ಲಿ ಮಾತೆ ಲಕ್ಷ್ಮಿ ದೇವಿ, ಅಪ್ಸರೆ, ವಾರುಣಿ, ಐರಾವತ, ಕೌಸ್ತುಭ ಮಣಿ, ಕಲ್ಪವೃಕ್ಷ, ಶಾರಂಗ ಧನ್ವಂತರಿ,ಅಮರತ್ವ, ಚಂದ್ರ, ಉಚ್ಚಯ್ ಶ್ರವಸ್, ಪಾಂಚಜನ್ಯ, ಹಾಲಾಹಲ, ಜೇಷ್ಟ, ವರುಣ, ನಿದ್ರಾದೇವಿ ಹಾಗೂ ಕಾಮಧೇನು ಈ ಗೋವು. ಬೇಡಿದನ್ನ ಆಲೋಚಿಸಿದನ್ನಾ ಪೂರೈಸುವ ಸಾಮರ್ಥ್ಯವನ್ನು ಈ ಹಸು ಹೊಂದಿದೆ.
ಗೋ ಪೂಜೆಯ ಪ್ರಯೋಜನಗಳು
• ಹಸುವಿನ ಬಳಿ ಒಂದು ಸುತ್ತಿನ ಜಪ ಮಾಡುವುದು ನೂರು ಸುತ್ತು ಮಾಡಿದಷ್ಟು ಸಮನಾಗಿರುತ್ತದೆ,
• ಮನೆಯಲ್ಲಿ ಹಸುವಿನ ಉಪಸ್ಥಿತಿ ಮನೆಯ ಎಲ್ಲಾ ವಾಸ್ತು ದೋಷವನ್ನು ನಿವಾರಿಸುತ್ತದೆ.
• ಹಸುವಿನ ಸ್ಪರ್ಶ ಸಕಾರಾತ್ಮಕ ಶಕ್ತಿ ನೀಡುತ್ತದೆ.
• ಹಸುವಿನ ಹಾಲು ಮನುಷ್ಯನಲ್ಲಿ ಸತ್ವಗುಣವನ್ನು ಹೆಚ್ಚಿಸುತ್ತದೆ.
• ಹಸುವಿನ ಸೆಗಣಿಯಿಂದ ಮನೆ ಸಾರಿಸಿದರೆ ಮನೆ ಶುದ್ಧವಾಗಿ ಯಾವುದೇ ರೋಗ ಹರಡುವ ಸಂಭವ ಕಡಿಮೆ ಇರುತ್ತದೆ.
ತಾನು ಹುಟ್ಟಿ ದಾಗಿನಿಂದ ಕೊನೆಯ ವರೆಗೂ ಒಬ್ಬ ತಾಯಿಯಂತೆ ಹಾಲು ಕೊಟ್ಟು ನಮ್ಮನ್ನು ಪೋಷಿಸುತ್ತಿರುವ ಹಸುವು ಇತ್ತೀಚಿನ ದಿನಗಳಲ್ಲಿ ರೋಗಗ್ರಸ್ಥಳಾಗುತ್ತಿದ್ದಾಳೆ. ಚರ್ಮರೋಗ ಎಂಬ ಮಹಾ ಮಾರಿಯು ಆ ತಾಯಿಯನ್ನು ಕಾಡುತ್ತಿದೆ. ನಮಗೆ ತನ್ನ ಅಮೃತವನ್ನು ನೀಡಿ ಪೋಷಿಸಿದ ತಾಯಿಯನ್ನು ನಾವು ಪೋಷಿಸುವ ಸಮಯ ಬಂದಿದೆ. ಸಾಧ್ಯವಾದಷ್ಟು ಗೋಮಾತೆಗೆ ಈ ರೋಗ ಹರಡದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.