ಚಾಮರಾಜನಗರ ಜಿಲ್ಲೆ ಸಾಮಾನ್ಯವಾಗಿ ಇದನ್ನು ಶಾಪಗ್ರಸ್ತ ಜಿಲ್ಲೆ ಎಂದು ಕರೆಯುತ್ತಾರೆ. ಈ ಜಿಲ್ಲೆ ಅತ್ಯದ್ಭುತವಾದ ನೈಸರ್ಗಿಕ ಸಂಪತ್ತು ಹೊಂದಿದೆ. ಎರಡುಹುಲಿ ಸಂರಕ್ಷಿತ ಅರಣ್ಯ ಗಳಿರುವುದು ಈ ಜಿಲ್ಲೆಯ ಹೆಮ್ಮೆ. ಅದಲ್ಲದೆ ಬಿಳಿಗಿರಿ ರಂಗನ ಬೆಟ್ಟ ಬಂಡೀಪುರ ಅರಣ್ಯ ಸಹ ಇದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಈ ಪ್ರದೇಶ ನಿಸರ್ಗಪ್ರಿಯರ ಪಾಲಿನ ಸ್ವರ್ಗ ಎಂದೇ ಕರೆಸಿಕೊಳ್ಳುತ್ತದೆ.
ಬಿಳಿಗಿರಿರಂಗನ ಬೆಟ್ಟ ನೋಡಿ ಚಾಮರಾಜನಗರಕ್ಕೆ ನೇರವಾಗಿ ಹೋಗುವ ಹಾದಿಯಲ್ಲಿ ಈ ಪ್ರದೇಶ ಸಿಗುತ್ತದೆ. ಬೆಂಗಳೂರು ಮೂಲಕ ಹೋಗುವವರು ಯಳಂದೂರು ಮಾರ್ಗವಾಗಿ ಬಿಳಿಗಿರಿರಂಗನ ಬೆಟ್ಟದ ಹಾದಿಯಿಂದ ಕ್ಯಾತದೇವರಾಯ ಗುಡಿಯನ್ನು ತಲಪಬಹುದು. ಮೈಸೂರಿನಿಂದ ಹೋಗುವರು ಚಾಮರಾಜನಗರಕ್ಕೆ ಬಂದು ಅಲ್ಲಿಂದ ನೇರವಾಗಿ ಕ್ಯಾತದೇವರಾಯ ಗುಡಿಗೆ ಹೋಗಬಹುದು. ಯಳಂದೂರಿನಿಂದ ಬರುವಾಗ ಹೆಚ್ಚು ಅರಣ್ಯ ಪ್ರದೇಶ ಹಾದಿಯಲ್ಲಿ ಸಿಗುವುದರಿಂದ, ಕೆಲವೊಮ್ಮೆ ವನ್ಯಜೀವಿಗಳು ಕಾಣಿಸುವುದರಿಂದ ಆ ಹಾದಿ ರೋಚಕವಾಗಿರುತ್ತದೆ.
ಕ್ಯಾತದೇವರಾಯ ಗುಡಿಗೆತಲುಪಿದರೆ ಅಲ್ಲಿನ ಪರಿಸರ ನಮಗೆ ಸ್ವಾಗತ ಕೋರುತ್ತದೆ.ಕ್ಯಾತದೇವರಾಯಗುಡಿಯನ್ನು ಇನ್ನೇನು ತಲುಪಿದ್ದೇವೆ ಎಂಬ ಹೊತ್ತಿಗೆ ಒಮ್ಮೊಮ್ಮೆ ರಸ್ತೆ ಬದಿಯಲ್ಲಿ ಈ ಕ್ಯಾತದೇವರಾಯ ಗುಡಿಯ ಮುಕುಟವಿಲ್ಲದ ಮಹಾರಾಜನಂತಿರುವ ಗಜೇಂದ್ರನ ದರ್ಶನವಾಗುತ್ತದೆ. ಅಲ್ಲಿನ ವಿಶಾಲವಾದ ಕೆರೆ, ಅದರ ತಟದಲ್ಲಿನ ಹುಲ್ಲುಗಾವಲು, ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುವ ಜಿಂಕೆಗಳು,ಕಾಲುಬುಡದಲ್ಲಿ ಓಡಾಡುವ ಕಾಡು ಹಂದಿಗಳ ದಂಡು ನೋಡುಗರ ಗಮನವನ್ನು ಸೆಳೆಯುತ್ತದೆ. ಹಾಗೆಯೇ ಚಾಮರಾಜನಗರ ಮಾರ್ಗವಾಗಿ ಬರುವ ಪ್ರವಾಸಿಗರಿಗೆ ಸುಮಾರು ೧೦ಕಿ.ಮೀ ಕಾಡಿನ ಹಾದಿ ಸಿಗುತ್ತದೆ. ಆ ದಾರಿಯಲ್ಲಿ ಕೂಡಾ ಕಾಡುಪ್ರಾಣಿಗಳನ್ನು ನೋಡುತ್ತಾ ಬರಬಹುದು. ರಸ್ತೆ ಬದಿಯಲ್ಲಿ ಕಾಣುವ ಜಲಪಾತಗಳು,ನೋಡಿದಷ್ಟು ದೂರ ಕಾಣುವ ಹಸಿರು ರಾಶಿ, ಮುಂಜಾನೆ ಮತ್ತು ಸಂಜೆಯಹೊತ್ತಲ್ಲಿ ಆಗಸ ಭೂಮಿಯನ್ನು ಒಂದುಮಾಡುವಂತೆ ಕಾಣುವ ಹಿಮದ ರಾಶಿ ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಸಫಾರಿ ವ್ಯವಸ್ಥೆ ಸಹ ಮಾಡಲಾಗಿದ್ದ ಕಾರಣದಿಂದ ಪ್ರವಾಸಿಗರ ಬರುವಿಕೆ ಹೆಚ್ಚಾಗುತ್ತಿದೆ.ಈ ಕ್ಯಾತದೇವರಾಯ ಗುಡಿ ಬಿ.ಆರ್.ಟಿ (ಬಿಳಿಗಿರಿರಂಗಟೆಂಪಲ್) ಹುಲಿ ಸಂರಕ್ಷಣಾ ಅಭಯಾರಣ್ಯಕ್ಕೆ ಸೇರುವ ಕಾರಣ ಸಾಕಷ್ಟು ಪ್ರಾಣಿಗಳನ್ನು ನೋಡಲು ಅವಕಾಶವಿದೆ. ಹುಲಿ, ಆನೆ, ಜಿಂಕೆ, ಕಾಟಿ, ಕೆಂಪು ಬಾಲದ ದೊಡ್ಡ ಅಳಿಲು, ಕಾಡು ನಾಯಿಗಳು ಮುಂತಾದ ವನ್ಯಜೀವಿಗಳನ್ನು ನೋಡಬಹುದು. ಇದಲ್ಲದೆ ಕ್ಯಾತದೇವರಾಯ ಗುಡಿ ಸಫಾರಿಯಲ್ಲಿ ಅತ್ಯದ್ಭುತವಾದ ಕಾಡುಗಳನ್ನು ನೋಡಬಹುದು. ಅಲ್ಲಲ್ಲಿ ಹರಿಯುವ ಝರಿಗಳು,ಕಡಿದಾದ ದಾರಿ,ಆಕಾಶವನ್ನೇಮುಟ್ಟುತ್ತಿವೆ ಎನ್ನುವ ಹಾಗೆ ಮುಗಿಲೆತ್ತರಕ್ಕೆ ಬೆಳೆದು ನಿಂತ ಮರಗಳು ಇವೆಲ್ಲವೂ ಕ್ಯಾತದೇವರಾಯ ಗುಡಿಯ ವಿಶೇಷ. ಬಂಡೀಪುರ ಹಾಗೂ ನಾಗರಹೊಳೆಅರಣ್ಯ ಪ್ರದೇಶದಲ್ಲಿ ಕಾಣುವ ಹಾಗೆ ಪ್ರಾಣಿ ವೀಕ್ಷಣೆಗೆ ಸಿಗದಿದ್ದರೂ ಸಫಾರಿಯ ಹಾದಿಯೇ ವಿಚಾರದಲ್ಲಿ ಕ್ಯಾತದೇವರಾಯ ಗುಡಿ ಅತ್ಯದ್ಭುತವಾದ ಅನುಭವಗಳನ್ನು ಕೊಡುತ್ತವೆ.ಬೆಟ್ಟಗಳನ್ನು ಹತ್ತಿ ಕಣಿವೆಗಳಲ್ಲಿ ಇಳಿದು ಬರುವ ದಾರಿ ಹಾಫ್ರೋಡ್ಟ್ರ್ಯಾಕ್ರೀತಿಯಿದೆ ಎಂದು ಹೇಳಿದರೆ ತಪ್ಪಾಗದು.
ಈ ಅಚ್ಚ ಹಸಿರು ಅರಣ್ಯ ಪ್ರದೇಶದಲ್ಲಿ ೨೬೦ಅಧಿಕ ಪಕ್ಷಿ ಪ್ರಭೇದಗಳು,೮೦೦ಹೆಚ್ಚು ಸಸ್ಯ ಪ್ರಭೇದಗಳು,೨೭ರೀತಿಯ ಸಸ್ತನಿಗಳು, ೨೨ವಿಧವಾದ ಸರ್ಪಗಳು ಸೇರಿದ ಹಲವಾರು ವೈವಿಧ್ಯಮಯ ಜೀವರಾಶಿಗಳನ್ನು ಕಾಣಲು ಸಾಧ್ಯ.ಕ್ಯಾತದೇವರಾಯಗುಡಿ ಸಮುದ್ರಮಟ್ಟದಿಂದ ಸುಮಾರು೧೮೦೦ಮೀಟರ್ ಎತ್ತರದಲ್ಲಿರುವ ಕಾರಣ ಆಹ್ಲಾದಕರವಾದ ವಾತಾವರಣ ಹೊಂದಿರುತ್ತದೆ.
೨೦೧೧ರಲ್ಲಿ ಈ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಅರಣ್ಯ ಎಂದು ಘೋಷಿಸಲಾಯಿತು.ಈ ಅಭಯಾರಣ್ಯ ತಮಿಳುನಾಡಿನ ಸತ್ಯಮಂಗಲ ಅರಣ್ಯ ಶ್ರೇಣಿಯೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಈ ಬಿಳಿಗಿರಿರಂಗನಬೆಟ್ಟದ ಹುಲಿ ಸಂರಕ್ಷಣಾ ಅರಣ್ಯದಲ್ಲಿ ೬೦೦-೭೦೦ಆನೆಗಳಿವೆ ಎಂಬುದು ಮತ್ತೊಂದು ವಿಶೇಷವಾದ ಸಂಗತಿ. ಕೆಲವು ವರ್ಷಗಳ ಹಿಂದೆ ಇಲ್ಲಿ ಆನೆ ಶಿಬಿರ ಕೇಂದ್ರ ಕೂಡ ಇತ್ತು. ಮೈಸೂರು ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದು ಗಜೇಂದ್ರ, ಕವಿತ,ಶ್ರೀರಾಮ, ಕಾಂತಿ ಮುಂತಾದ ಆನೆಗಳು ಇಲ್ಲಿದ್ದವು.ಇತ್ತೀಚೆಗೆ ಈ ಶಿಬಿರ ಕೇಂದ್ರವನ್ನು ಸ್ಥಳಾಂತರಗೊಳಿಸಿದ್ದಾರೆ ಕೇವಲ ಗಜೇಂದ್ರನನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.ಅವನ ರಾಜ ಗಾಂಭೀರ್ಯದ ಹೆಜ್ಜೆಯನ್ನು ನೋಡುವುದರಿಂದ ಮನಸ್ಸಿಗೆ ಆನಂದ ನೀಡುತ್ತದೆ.
ಈ ಕ್ಯಾತದೇವರಾಯ ಗುಡಿಸಹ ಪಶ್ಚಿಮ ಘಟ್ಟದ ಯಾವುದೇ ಅರಣ್ಯಕ್ಕೂ ಕಡಿಮೆಯಿಲ್ಲ ಈ ವ್ಯಾಪ್ತಿಯಲ್ಲಿ ಪೂರ್ವ ಹಾಗೂ ಪಶ್ಚಿಮ ಘಟ್ಟಗಳು ಸೇರುವುದರಿಂದ ಇಲ್ಲಿನ ಸಸ್ಯರಾಶಿಗಳು ವಿಭಿನ್ನ ಹಾಗೂ ವಿಶೇಷವಾಗಿದೆ. ಈ ಕ್ಯಾತದೇವರಾಯಗುಡಿಯಲ್ಲಿಉಳಿದುಕೊಳ್ಳಲು ವ್ಯವಸ್ಥೆ ಕೂಡ ಇದೆ. ಐಬಿ,ಡಿಮಿಟ್ರಿ, ಜಂಗಲ್ ಲಾಡ್ಜ್ ಸಹ ಎಲ್ಲ ಮೂಲ ಸೌಕರ್ಯಗಳೊಂದಿಗೆ ಇದೆ. ರಾತ್ರಿ ವೇಳೆ ಅತ್ಯದ್ಭುತವಾದ ಅನುಭವಗಳಾಗುತ್ತದೆ, ಹಾಗೆಯೇ ಮಳೆ ಮತ್ತು ಮಂಜು ಎರಡೂ ಒಟ್ಟೊಟ್ಟಿಗೆ ಬಂದಾಗಲಂತೂ ಈ ಕ್ಯಾತದೇವರಾಯ ಗುಡಿಯ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಕಾಗುವುದಿಲ್ಲ. ವನ್ಯಜೀವಿಗಳನ್ನು ನೋಡಲು ಬಯಸುವವರು ಡಿಸೆಂಬರ್ ಹಾಗೂ ಮಾರ್ಚ್ ತಿಂಗಳಿನೊಳಗೆ ಬಂದರೆ ಒಳ್ಳೆಯದು.
ಇಲ್ಲಿ 4 ಸಫಾರಿವಾಹನಗಳು ಕೆಲಸ ಮಾಡುತ್ತಿದೆ, ತುಂಬಾ ಅನುಭವಿ ವಾಚರ್ಗಳಿದ್ದಾರೆ. ಸಫಾರಿ ಹೋಗುವವರಿಗೆ ತಲಾ ೪೮೦ರೂ.ಗಳ ಶುಲ್ಕ ನೀಡಬೇಕು. ಪ್ರವಾಸೋದ್ಯಮಕ್ಕೆ ಸರ್ಕಾರ ಅನುಮತಿ ನೀಡಿ ಸಫಾರಿ ವಾಸಗೃಹಕ್ಕೆ ಸ್ಥಳ ನೀಡಿದೆ. ಅದರ ಜತೆಗೆ ಪರಿಸರ, ಕಾಡು, ಜೀವರಾಶಿ,ವನ್ಯಜೀವಿಗಳ ಕುರಿತು ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಬಹುದು. ಸರ್ಕಾರದ ಅರಣ್ಯ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ಈ ಕೆಲಸ ಮಾಡಿದರೆ ಉತ್ತಮ.
ಹೀಗೆ ಎಲ್ಲ ಅರಣ್ಯಗಳಿಗೂ ನೀತಿ ನಿಯಮಾವಳಿಗಳು ಇದೆಯೋ ಅದೇ ರೀತಿ ಈ ಅರಣ್ಯ ಪ್ರದೇಶಕ್ಕೂ ಇದೆ. ಪ್ಲಾಸ್ಟಿಕ್ಬಳಕೆ ನಿಷೇಧ,ಕಾಡುಪ್ರಾಣಿಗಳಿಗೆ ಮನುಷ್ಯರು ತಿನ್ನುವ ಆಹಾರ ನೀಡಬಾರದು, ಧೂಮಪಾನ ಹಾಗೂ ಮದ್ಯಪಾನ ನಿಷೇಧ ಹೀಗೆ ಹಲವಾರು ನಿಯಮಾವಳಿಗಳಿವೆ.ಪ್ರವಾಸಿಗರು ಯಾವುದೇ ಕಾರಣಕ್ಕೂ ಸೂಚನೆಗಳನ್ನು ಪಾಲಿಸದೆ ಮೃಗಗಳಂತೆ ವರ್ತಿಸಿದ್ದಾರೆ ಕಾನೂನು ಅಡಿಯಲ್ಲಿ ಸೆರೆವಾಸಕಟ್ಟಿಟ್ಟ ಬುತ್ತಿ.
ಈ ಕ್ಯಾತದೇವರಾಯ ಗುಡಿಯಲ್ಲಿ ಮತ್ತೊಂದು ವಿಶೇಷ ಸಂಗತಿ ಎಂದರೆ ಕಾಡಿನಲ್ಲಿ ವಾಸಿಸುವ ಮಕ್ಕಳಿಗೆ ವಿಶೇಷ ವಿದ್ಯಾಭ್ಯಾಸಕ್ಕೆ ವಿದ್ಯಾಮಂದಿರ ಅಂದರೆ ಶಾಲೆ ಇದೆ. ಅಲ್ಲಿ ಉತ್ಸಾಹ ಶಿಕ್ಷಕರು ಇದ್ದಾರೆ. ಈ ಶಾಲೆ ಕೇವಲ ಕಾಡು ಮಕ್ಕಳಿಗೆ ಮಾತ್ರ ಸೀಮಿತವಾಗಿದೆ.
ನಗರದ ಜಂಜಾಟಕ್ಕೆ, ಯಾಂತ್ರಿಕ ಬದುಕಿಗೆ ಅಂಟಿಕೊಂಡ ನಮಗೆ ಅಂತೂ ಕ್ಯಾತದೇವರಾಯ ಗುಡಿಅವಿಸ್ಮರಣೀಯ ಅನುಭವಗಳನ್ನು ಕಟ್ಟಿಕೊಟ್ಟಿದೆ. 2ದಿನ ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ದೂರವಿದ್ದಕ್ಕೆ ನಮ್ಮ ಮನಸ್ಸಿನ ಒತ್ತಡ, ಕೆಲಸದ ಒತ್ತಡ ಎಲ್ಲವನ್ನು ಹೋಗಲಾಡಿಸಿ ಆರುತಿಂಗಳಿಗೆ ಬೇಕಾಗುವಷ್ಟು ಉತ್ಸಾಹ,ಎನರ್ಜಿ ದೊರಕಿದೆ. ನಿರ್ಗಮಿಸುವಾಗ ಅಲ್ಲಿನ ಪ್ರಕೃತಿ,ಪರಿಸರವನ್ನು ಬಿಟ್ಟು ಬರಲು ಮನಸ್ಸಾಗುವುದಿಲ್ಲ.