ಚಾಮರಾಜನಗರ: ಸಚಿವ ಸೋಮಣ್ಣ ಅವರು ನನಗೆ ಥಳಿಸಿದ್ದಾರೆ ಎಂಬ ವಿಚಾರವನ್ನಿರಿಸಿಕೊಂಡು ಹಣದ ಆಮಿಷವೊಡ್ಡಿ ಪೊಲೀಸರಿಗೆ ದೂರು ನೀಡುವಂತೆ ಕೆಲ ಸಂಘ ಸಂಸ್ಥೆಯವರು, ರಾಜಕೀಯ ನಾಯಕರು ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದ ಕೆಂಪಮ್ಮಈ ಸಂಬಂಧ ತನಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಂಪಮ್ಮ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಹಂಗಳ ಗ್ರಾಮದಲ್ಲಿನ ನಿವೇಶನ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಕ್ಷಮ ನನಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದುದು. ಸಚಿವರು ನನ್ನ ಸಮಸ್ಯೆಯನ್ನ ಆಲಿಸಿ ನಿವೇಶನ ನೀಡುತ್ತೇನೆ ನೀನು ನನ್ನ ಕಾಲಿಗೆ ನಮಸ್ಕರಿಸಬೇಡ ಸುಮ್ಮನಿರು ಎಂದು ನನ್ನ ಕೈಹಿಡಿದು ಮೇಲೆತ್ತಿದ್ದರು ಅಷ್ಟೇ. ಇದನ್ನೇ ಕೆಲವರು ತಪ್ಪಾಗಿ ಅರ್ಥೈಸಿಕೊಂಡು ನನಗೆ ಹಿಂಸೆ ನೀಡುತ್ತಿದ್ದಾರೆ. ಮನೆ ಬಳಿ ಬಂದು ನಿನಗೆ 15 ಲಕ್ಷ ಹಣ ನೀಡ್ತಿವಿ ಸೋಮಣ್ಣ ಅವರು ಕಪಾಳಕ್ಕೆ ಹೊಡೆದರು ಎಂದು ಪೊಲೀಸ್ ಠಾಣೆಗೆ ದೂರು ನೀಡು ಎಂದು ಒತ್ತಾಯಿಸುತ್ತಿದ್ದಾರೆ, ಇವರಿಂದ ನನಗೆ ಮಾನಸಿಕವಾಗಿ ಹಿಂಸೆಯಾಗಿದೆ ಎಂದು ಹೇಳಿದ್ದಾರೆ.
ಗ್ರಾಮಪಂಚಾಯತಿಯಲ್ಲಿ ಆಗಿದ್ದ ಅನ್ಯಾಯವನ್ನ ಸಚಿವರ ಬಳಿ ಹೇಳಿಕೊಂಡಾಗ ನನ್ನ ಮನವಿಗೆ ಸ್ಪಂದಿಸಿ ನನಗೆ ನಿವೇಶನ ಹಕ್ಕುಪತ್ರ ವಿತರಣೆ ಮಾಡಿ ಔದಾರ್ಯತೆ ತೋರಿದ್ದಾರೆ. ಸುಖಾ ಸುಮ್ಮನೆ ನನಗೆ ಹಣದ ಆಮಿಷವೊಡ್ಡಿ ಹೇಳಿಕೆ ಕೊಡುವಂತೆ ಪೀಡಿಸಲಾಗ್ತಿದೆ ಎಂದು ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ನನಗೆ ಸೂಕ್ತ ರಕ್ಷಣೆ ನೀಡಬೇಕು ಇಲ್ಲವಾದಲ್ಲಿ ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ರೆ ನಾನು ಮತ್ತು ನನ್ನ ಮಕ್ಕಳ ಸಾವಿಗೆ ಸಂಘ ಸಂಸ್ಥೆಯವರೆ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪುರಸಭಾ ಅಧ್ಯಕ್ಷ ಪಿ.ಗಿರೀಶ್ ಮಾತನಾಡಿ ಹಕ್ಕುಪತ್ರ ವಿತರಣಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಇದು ಸಚಿವ ಸೋಮಣ್ಣ ಅವರನ್ನ ರಾಜಕೀಯವಾಗಿ ಮುಗಿಸಲು ರೂಪಿಸಿರುವ ವ್ಯವಸ್ಥಿತ ಪಿತೂರಿಯಾಗಿದೆ. ಇದಾದ ಮೇಲೆ ಘಟನೆಗೆ ಸಂಬಂದಿಸಿದಂತೆ ಕೆಂಪಮ್ಮ ಅವರೇ ಘಟನೆಯ ನೈಜತೆಯನ್ನ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೇಯಾದರೂ ಬಡ ಮಹಿಳೆ ನೆಮ್ಮದಿಯಾಗಿ ಜೀವನ ನಡೆಸಿಕೊಂಡು ಹೋಗಲು ಬಿಡಿ ವಿನಂತಿಸಿದರು.