ಮೈಸೂರು: ವರುಣಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿ ಯಾರು? ಸದ್ಯಕ್ಕೆ ಈ ಪ್ರಶ್ನೆಗಳಿಗೆ ಉತ್ತರ ಮಾತ್ರ ಗೊಂದಲಮಯವಾಗಿದೆ. ಆದರೆ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧೆ ಮಾಡಲ್ಲ ಎಂಬುದಂತು ಖಚಿತವಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರು ನಿರಾಳ ಎಂದರೆ ತಪ್ಪಾಗಲಾರದು.
ಹಾಗೆನೋಡಿದರೆ ವರುಣಾ ಕ್ಷೇತ್ರ ಕೂಡ ಎಲ್ಲ ಕ್ಷೇತ್ರದಂತೆಯೇ ಇತ್ತು. ಇದು ರಾಜಕೀಯವಾಗಿ ಮುನ್ನಲೆಗೆ ಬಂದಿರಲಿಲ್ಲ. ಆದರೆ ಯಾವಾಗ ಕಾಂಗ್ರೆಸ್ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರ ಹೆಸರಿತ್ತೋ ಆಗಲೇ ವರುಣಾ ಕ್ಷೇತ್ರದ ಬಗ್ಗೆ ಚರ್ಚೆಗಳು ಶುರುವಾದವು. ಜತೆ ಜತೆಯಲ್ಲಿಯೇ ಅವರ ವಿರುದ್ಧ ಸ್ಪರ್ಧಿಸುವ ವಿಚಾರದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರು ಹೆಸರು ಚಾಲ್ತಿಗೆ ಬಂದಿತು.
ಇದಾದ ನಂತರ ಮೇಲಿಂದ ಮೇಲೆ ಚರ್ಚೆಗಳು ಶುರುವಾದವು. ಸಿದ್ದರಾಮಯ್ಯ ಅವರನ್ನು ಮಣಿಸಬೇಕಾದರೆ ವಿಜಯೇಂದ್ರ ಅವರೇ ಸೂಕ್ತ ಅಭ್ಯರ್ಥಿ ಎಂದು ಹೇಳಲಾಯಿತು. ಆದರೆ ಎಲ್ಲಿಯೂ ನಾನು ಸ್ಪರ್ಧೆ ಮಾಡುತ್ತೇನೆ ಎಂದು ವಿಜಯೇಂದ್ರ ಸ್ಪಷ್ಟವಾಗಿ ಹೇಳಲೇ ಇಲ್ಲ. ಬದಲಿಗೆ ಎಲ್ಲವೂ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದಾಗಿ ಹೇಳಿ ಜಾರಿಕೊಂಡರು. ಇದಾದ ಬಳಿಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ ವಿಜಯೇಂದ್ರ ವರುಣಾದಲ್ಲಿ ಸ್ಪರ್ಧಿಸುವುದಿಲ್ಲ. ಬದಲಿಗೆ ಶಿಕಾರಿಪುರದಿಂದ ಸ್ಪರ್ಧಿಸುತ್ತಾರೆ ಎಂದರು. ಈ ವಿಷಯ ಹೊರ ಬರುತ್ತಿದ್ದಂತೆಯೇ ವರುಣಾ ಕ್ಷೇತ್ರದ ಕುರಿತಂತೆ ಚರ್ಚೆಗಳು ಹೆಚ್ಚಾದವು.
ಇದೆಲ್ಲದರ ನಡುವೆ ಶಿಕಾರಿಪುರ ನಮ್ಮ ತಂದೆಯ ಕ್ಷೇತ್ರವಾಗಿದ್ದು, ಅಲ್ಲಿಂದಲೇ ಸ್ಪರ್ಧಿಸಬೇಕು ಎನ್ನುವುದು ಅವರ ಇಚ್ಚೆ ಆಗಿದೆ. ನಾನು ವರುಣದಿಂದ ಸ್ಪರ್ಧೆ ಮಾಡಬೇಕೋ? ಶಿಕಾರಿಪುರದಿಂದ ಸ್ಪರ್ಧೆ ಮಾಡಬೇಕೋ ಅಥವಾ ಎಲ್ಲಿಂದಲೂ ಸ್ಪರ್ಧಿಸಬಾರದಾ? ಎಲ್ಲವನ್ನೂ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ತಂದೆಯವರ ಇಚ್ಚೆಯಂತೇ ಈಗಾಗಲೇ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸುತ್ತು ಪ್ರಚಾರ ಮುಗಿಸಿದ್ದೇನೆ. ಏ.3ರ ನಂತರ ಮತ್ತೆ ಪ್ರಚಾರ ನಡೆಸುತ್ತೇನೆ. ನನಗೆ ವರುಣ ಕ್ಷೇತ್ರದಷ್ಟೇ ರಾಜ್ಯದ 223 ಕ್ಷೇತ್ರಗಳು ಮುಖ್ಯ.
ವರುಣ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಎಲ್ಲ ವಾತಾವರಣ ಇದ್ದು, ಜನ ನಮ್ಮ ಪಕ್ಷಕ್ಕೆ ಮತ ಹಾಕಲು ಮತದಾರರು ಉತ್ಸುಕರಾಗಿದ್ದಾರೆ. ನಮ್ಮ ಪಕ್ಷದ ಸಂಘಟನೆ ಅತ್ಯತ್ತುಮವಾಗಿದ್ದು, ಯಾರು ಏನೇ ಹೇಳಿದರೂ ಬಿಜೆಪಿ ವರುಣದಲ್ಲಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರ ಹೇಳಿಕೆ ಬಳಿಕ ಕಾರ್ಯಕರ್ತರಲ್ಲಿ ಗೊಂದಲವಂತು ಇದ್ದೇ ಇತ್ತು. ಹೀಗಾಗಿ ಕಾರ್ಯಕರ್ತರು ವರುಣಾದಿಂದಲೇ ಸ್ಪರ್ಧಿಸುವಂತೆ ದುಂಬಾಲು ಬಿದ್ದರಲ್ಲದೆ, ವರುಣಾ ಕ್ಷೇತ್ರದಿಂದ ನೀವು ಸ್ಪರ್ಧಿಸಬೇಕು. ಇಲ್ಲವಾದರೆ ಊಟಕ್ಕೆ ವಿಷ ಹಾಕಿ ಕೊಡಿ ಎಂದು ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರ ಹೊಡೆತ ತಡೆಯಲು ಆಗುತ್ತಿಲ್ಲ. ವರ್ಷದಿಂದ ಕಾರ್ಯಕರ್ತರು ತಬ್ಬಲಿ ಆಗಿದ್ದೇವೆ. ನೀವು ರಾಜ್ಯ ನಾಯಕರು. ಶಿಕಾರಿಪುರ ಮತ್ತು ವರುಣ ಎರಡೂ ಕಡೆ ಸ್ಪರ್ಧಿಸಿ ಆದರೆ ಯಾವ ಕಾರಣಕ್ಕೂ ವರುಣ ಮಾತ್ರ ಕೈಬಿಡಬೇಡಿ. ನೀವಲ್ಲದೆ ಬೇರೆ ಯಾರೇ ಬಂದರೂ ಗೆಲ್ಲಲ್ಲ ಹುಲಿ ಜತೆಯಲ್ಲಿ ಹುಲಿಯೇ ಫೈಟ್ ಮಾಡಬೇಕು. ಆಡು ಕಟ್ಟಿದರೆ ಹುಲಿ ಅದನ್ನು ತಿಂದುಕೊಂಡು ಹೋಗುತ್ತದೆ. ವಿಜಯೇಂದ್ರ ಬಂದರೆ 50 ಸಾವಿರ ಮತದ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಹೇಳುವ ಮೂಲಕ ವಿಜಯೇಂದ್ರ ಅವರಲ್ಲಿ ವಿಶ್ವಾಸ ತುಂಬಿದರು.
ಕಾರ್ಯಕರ್ತರ ಮನವಿ ಸ್ವೀಕರಿಸಿದ ವಿಜಯೇಂದ್ರ ಕಾರ್ಯಕರ್ತರನ್ನು ಸಂತೈಸುವ ಪ್ರಯತ್ನ ಮಾಡಿದ್ದಲ್ಲದೆ, ಶಿಕಾರಿಪುರ ನಮ್ಮ ತಂದೆಯವರಿಗೆ ರಾಜಕೀಯ ಜನ್ಮನೀಡಿದೆ. ನಾನು ಇಂದು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷ ಆಗಿದ್ದೇನೆ. ಇದಕ್ಕೆ ಮುಖ್ಯ ಕಾರಣ ವರುಣಾ ಕ್ಷೇತ್ರ. ವರುಣಾ ಕ್ಷೇತ್ರ ರಾಜಕೀಯವಾಗಿ ನನಗೆ ಪರಿಚಯ ಮಾಡಿಕೊಟ್ಟಿದೆ. ವರುಣದಲ್ಲಿ ಬಿಜೆಪಿ ಗೆಲ್ಲುವುದಕ್ಕೆ ತೊಂದರೆ ಇಲ್ಲ, ನಮ್ಮ ಪಕ್ಷದ ಮುಖಂಡರು ಪ್ರತಿಯೊಬ್ಬರೂ ಬಿಜೆಪಿ ಗೆಲ್ಲಬೇಕು ಅಂತ ಕೆಲಸ ಮಾಡಬೇಕು. ಯಾರೇ ಅಭ್ಯರ್ಥಿಯಾದರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಾನೂ ಬರುತ್ತೇನೆ ಎಂದು ಧೈರ್ಯ ಹೇಳಿದರು.
ಇಷ್ಟೆಲ್ಲ ಬೆಳವಣಿಗೆ ನಡುವೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು ವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್ ಒಪ್ಪಿತ್ತು. ಆದರೆ ನಾನೇ ವರುಣದಿಂದ ಸ್ಪರ್ಧೆ ಬೇಡವೆಂದು ಹೇಳಿದ್ದೇನೆ. ಹೀಗಾಗಿ ವಿಜಯೇಂದ್ರ ಅವರು ಯಾವ ಕಾರಣಕ್ಕೂ ವರುಣಾದಿಂದ ಸ್ಪರ್ಧೆ ಮಾಡುವ ಪ್ರಶ್ನಯೇ ಇಲ್ಲ. ಈ ವಿಚಾರದಲ್ಲಿ ನಾನು ಹೈಕಮಾಂಡ್ ಮನವೊಲಿಸುತ್ತೇನೆ. ಈ ಭಾಗದ ಕಾರ್ಯಕರ್ತರು ವಿಜಯೇಂದ್ರ ಸ್ಪರ್ಧೆಗೆ ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ. ಆದರೆ ಶಿಕಾರಿಪುರ ಬಿಟ್ಟು ಅವರು ಬರುವುದಿಲ್ಲ. ಶಿಕಾರಿಪುರದಿಂದಲೇ ಸ್ಪರ್ಧೆ ಮಾಡುತ್ತಾರೆ ಎಂದಿದ್ದಾರೆ.
ಇದೆಲ್ಲವನ್ನು ಗಮನಿಸಿದರೆ ಸದ್ಯದ ಪರಿಸ್ಥಿತಿಯಲ್ಲಿ ವಿಜಯೇಂದ್ರ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲ್ಲ ಎಂಬುದು ಮನದಟ್ಟಾಗಿದೆ. ಆದರೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡುವ ತನಕ ಯಾವುದನ್ನೂ ನಿಖರವಾಗಿ ಹೇಳಲಾಗದು. ಆದ್ದರಿಂದ ಅಲ್ಲಿ ತನಕ ಕಾದು ನೋಡುವುದು ಅನಿವಾರ್ಯವಾಗಿದೆ.