ಸುಳ್ಯ: ಪ್ರಪಂಚದಾದ್ಯಂತ ಸುದ್ದಿ ಮಾಡುತ್ತಿರುವ ಐಲೇಸಾ–ದಿ ವಾಯ್ಸ್ ಆಫ್ ಓಷನ್ (ರಿ). ಡಿಜಿಟಲ್ ಸಂಸ್ಥೆ ತನ್ನ ಎರಡನೇ ಹುಟ್ಟು ಹಬ್ಬದ ಶುಭಾವಸರದಲ್ಲಿ ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ನಾಡಿನ ಶ್ರೇಷ್ಟ ಕವಿ ಸುಬ್ರಾಯ ಚೊಕ್ಕಾಡಿ ಅವರಿಗೆ ”ವಯೋ ಸಮ್ಮಾನ್” ಗೌರವ ಪ್ರದಾನಿಸಲಿದೆ.
ಐಲೇಸಾ ಸಂಸ್ಥೆಯು ಚೊಕ್ಕಾಡಿ ಜೊತೆ ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಳ್ಳಲು ಈಗಾಗಲೇ ಸಿದ್ಧತೆ ನಡೆಸಿ ಕೊಂಡಿದ್ದು ಇದೇ ಬರುವ ಸೆ.04ನೇ ಭಾನುವಾರ ಬೆಳಿಗ್ಗೆ 9.30 ಗಂಟೆಗೆ ಸುಳ್ಯ ಹಳೇ ಗೇಟು ಅಲ್ಲಿನ ಚೊಕ್ಕಾಡಿ ಅವರ ‘ಪ್ರಕೃತಿ’ ನಿವಾಸ, ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆ ಇಲ್ಲಿ ಕಾರ್ಯಕ್ರಮ ನಡೆಸಲಿದೆ.
ಸುಬ್ರಾಯ ಚೊಕ್ಕಾಡಿ ಅವರಿಗೆ ‘ವಯೋ ಸಮ್ಮಾನ್’ ಗೌರವ :
ಐಲೇಸಾ ದ ಈ ಹುಟ್ಟು ಹಬ್ಬ ತೀರಾ ವಿಶೇಷವಾಗಿರಬೇಕು ಎಂದು ಮೊದಲೇ ನಿರ್ಧರಿಸಿದ್ದರಿಂದ ಈ ಸಾರಿಯ ಆಚರಣೆ ಸ್ವಲ್ಪ ವಿಳಂಭವಾಯ್ತು. ವಿಶೇಷವಾಗಿರಬೇಕು ಎಂದಾಗ ಒಬ್ಬ ವಿಶಿಷ್ಟ ವ್ಯಕ್ತಿಯೊಂದಿಗೆ ಹುಟ್ಟು ಹಬ್ಬ ಹಂಚಿಕೊಂಡು ಆಚರಿಸುವುದು ಒಳಿತು ಎಂದೆನಿಸಿ ಹುಡುಕಾಡಿದಾಗ ಹತ್ತಿರದಲ್ಲಿಯೇ ಸಿಕ್ಕವರು ನಮ್ಮ ಮೆಚ್ಚಿನ ಮತ್ತು ನಾಡು ಕಂಡ ಕವಿ ಶ್ರೇಷ್ಠ ಸುಬ್ರಾಯ ಚೊಕ್ಕಾಡಿಯವರು .
ತನ್ನ 83 ವರ್ಷಗಳ ( 29 June 1940) ಸಾರ್ಥಕ ಬದುಕನ್ನು ಸಾಹಿತ್ಯಪೂರ್ಣವಾಗಿ , ಅತ್ಯಂತ ಸರಳವಾಗಿ , ಮತ್ತು ನಿಷ್ಕಲ್ಮಷವಾಗಿ ಕಳೆದು ನಮಗೆಲ್ಲಾ ಮಾದರಿ ಚೊಕ್ಕಾಡಿಯವರು. ಎಂಬತ್ತಮೂರು ವರ್ಷಗಳ ಅವಿರತ ಬದುಕಿನ ನಡುವೆಯೂ ಬತ್ತದ ಸಾಹಿತ್ಯ ಚಿಲುಮೆಯಾಗಿ ತಂಪಾಗಿ , ಇಂಪಾಗಿ ಹರಿದು ಜೀವನೋತ್ಸಾಹಕ್ಕೆ ಹೊಸ ವ್ಯಾಖ್ಯಾನ ಕೊಟ್ಟ ಚೊಕ್ಕಾಡಿಯವರ ವಯಸ್ಸಿನಷ್ಟು ಸಹಸ್ರ ಗುರುಕಾಣಿಕೆ ಅರ್ಪಿಸಿ ಧನ್ಯರಾಗ ಬೇಕೆನ್ನುವುದು ಐಲೇಸಾದ ಕೆಲ ದಿನಗಳ ಕನಸು. ಅದು ಬರುವ ತಿಂಗಳ ನಾಲ್ಕನೇ ತಾರೀಕು ಕವಿ ಮನೆಯಂಗಳದಲ್ಲಿ ವನಸಿರಿ ಸಾನಿಧ್ಯದಲ್ಲಿ ನೆರವೇರಲಿದೆಯೆನ್ನುವ ಆತ್ಮ ವಿಶ್ವಾಸದೊಂದಿಗೆ ಸುಗಮ ದಾರಿಯಲ್ಲಿ ಪಯಣಿಸುತ್ತಿದೆ.
ಈ ಸಂದರ್ಭದಲ್ಲಿ ಕವಿಯ ಸಾರ್ಥಕ ಸಾಹಿತ್ಯ ಜೀವನದ ಗೌರವಾರ್ಥ ಅವರಿಗೆ ”ವಯೋ ಸಮ್ಮಾನ್” ವಿಶಿಷ್ಟ ಗೌರವ ಪ್ರದಾನ ನಡೆಯಲಿದೆ. ಶಾಲು ಹಾರ ತುರಾಯಿಗಳಿಲ್ಲದ ಈ ಸರಳ ಸಮಾರಂಭದಲ್ಲಿ ಕವಿಯ ಕೆಲವು ಆಪ್ತ ಪರಿಕರಗಳೊಂದಿಗೆ ಅವರ ಜೀವನದ ನೆನಪುಗಳನ್ನು ಮೆಲುಕು ಹಾಕುವ ಪ್ರಯತ್ನ ಮಾಡಲಾಗಿ ಅವರ ವಯಸ್ಸಿಗನುಗುಣ ಗುರು ಗೌರವಧನ ಕಾಣಿಕೆಯಾಗಿ ನೀಡಲು ಐಲೇಸಾ ಸಿದ್ಧತೆ ನಡೆಸಿದೆ.
ಸರ್ವೋತ್ತಮ ಶೆಟ್ಟಿ ಅಬುಧಾಬಿ, ಮೂಡಂಬೈಲು ರವಿ ಶೆಟ್ಟಿ ಕತಾರ್, ಶ್ರೀವಲ್ಲಿ ರೈ ಮಾರ್ಟೆಲ್ ಫ್ಲೋರಿಡಾ, ಅನಂತ್ ರಾವ್ ಬೆಂಗಳೂರು, ವಿಶ್ವನಾಥ್ ಶೆಟ್ಟಿ ಮುಂಬಯಿ, ಲಕ್ಷ್ಮೀಶ ಶೆಟ್ಟಿ. ಶೈಲಜಾ ಶೆಟ್ಟಿ, ಭಾಸ್ಕರ ಶೇರಿಗಾರ್, ಸುರೇಂದ್ರ ಮಾರ್ನಾಡ್ ಮತ್ತು ಐಲೇಸಾದ ಪ್ರಧಾನ ರೂವಾರಿ ಡಾ.ರಮೇಶ್ಚಂದ್ರ ಮತ್ತು ಐಲೇಸಾ ತಂಡವು ಸದಸ್ಯರನ್ನೊಳಗೊಂಡ ಗೌರವ ಸಮಿತಿ ತೀರ್ಮಾನಿಸಿದೆ.