ಪುತ್ತೂರು: ಮಾತೃ ಭಾಷೆಗೆ ಪ್ರಾಮುಖ್ಯತೆ ನೀಡುವ ದೃಷ್ಟಿಯಿಂದ ಕೇಂದ್ರ ಸರಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದೆ. ಆಯಾಯ ಪ್ರಾದೇಶಿಕ ಭಾಷೆಯ ಮೂಲಕವೇ ಶಿಕ್ಷಣ ನೀಡುವುದು ಶಿಕ್ಷಣ ನೀತಿಯ ಉದ್ಧೇಶ ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಹೇಳಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಅಂಗಸಂಸ್ಥೆ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ)ದ ಸ್ವಾಯತ್ತತೆಯ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಂಗಳವಾರ ಅವರು ಮಾತನಾಡಿದರು.
ಮಾತೃ ಭಾಷೆಯಿಂದಲೇ ವಿಶ್ವದ ಹಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಗುರುತಿಸಿಕೊಂಡಿವೆ. ಚೀನಾದ ಚೈನೀಸ್, ಫ್ರಾನ್ಸ್ ಫೆಂಚ್, ಜರ್ಮನಿ ಜರ್ಮನ್ ಹೀಗೆ ಮಾತೃ ಭಾಷೆಯ ಮೂಲಕವೇ ವ್ಯವಹರಿಸುತ್ತಿದೆ. ಇದೇ ಉದ್ಧೇಶವನ್ನಿಟ್ಟು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ.
ಕರ್ನಾಟಕ ದೇಶದಲ್ಲೇ ಮೊದಲು ಹೊಸ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ರಾಜ್ಯವಾಗಿದೆ. ಶಿಕ್ಷಣದ ಜೊತೆಗೆ ಕ್ರೀಡೆಗೂ ಹೊಸ ಶಿಕ್ಷಣ ನೀತಿಯಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಹೊಸ ಶಿಕ್ಷಣ ನೀತಿಯ ಸಫಲತೆಗೆ ಜನರ ಸಹಭಾಗಿತ್ವ ಅಗತ್ಯವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯ ಪಟ್ಟರು.