ಮೈಸೂರು: ನಗರದಲ್ಲಿ ಅಡ್ಡಾಡುವವರಿಗೆ ವಿನಾಯಕನಗರ ನಿವಾಸಿ, ಇಳಿವಯಸ್ಸಿನ ಪಂಡಿತ್ ಅಪ್ಪಸ್ವಾಮಿ ಪರಿಚಿತರು. ನಗರದ ಹೃದಯಭಾಗ ದೇವರಾಜ ಮಾರುಕಟ್ಟೆ ಸೇರಿದಂತೆ ಎಲ್ಲೆಡೆ ತಮ್ಮ ಹಳೆಯ ಲೂನಾದಲ್ಲಿ ಗಂಧದ ಕಡ್ಡಿ ಮತ್ತು ಗಿಡಮೂಲಿಕೆಗಳಿಂದ ತಯಾರಾದ ನೋವು ಶಮನಗೊಳಿಸುವ ಎಣ್ಣೆಗಳನ್ನು ಮಾರಾಟ ಮಾಡುವ ಇವರು ಅಣ್ಣಾವ್ರ ಮತ್ತು ಕನ್ನಡಾಭಿಮಾನಿ.
ತಮ್ಮ ಲೂನಾದಲ್ಲಿ ಕನ್ನಡದ ಹಾಡುಗಳನ್ನು ಬಿತ್ತರಿಸುತ್ತಾ ನಗರದಾದ್ಯಂತ ಸಂಚರಿಸಿ ಗಂಧದ ಕಡ್ಡಿ ಮತ್ತು ನೋವಿನ ಎಣ್ಣೆಯನ್ನು ಮಾರುತ್ತಾರೆ. ವಯಸ್ಸು ಎಂಬತ್ತಾದರೂ ದುಡಿದು ತಿನ್ನುತ್ತಿರುವ ಇವರು ಏನಾದರೊಂದು ಕೆಲಸ ಮಾಡಿ ಬದುಕಬೇಕೆನ್ನುವ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.
ಕಳೆದ 60 ವರ್ಷಗಳಿಂದ ನೋವು ಶಮನಕಾರಿ ಎಣ್ಣೆ ಹಾಗೂ ಗಂಧದಕಡ್ಡಿಯನ್ನು ಮಾರಾಟ ಮಾಡುತ್ತಲೇ ಬಂದಿದ್ದಾರೆ. ತಲೆಗೊಂದು ಟೋಪಿ, ಟೈ ಕಟ್ಟಿ ನೀಟಾಗಿ ಡ್ರೆಸ್ ಮಾಡುವ ಇವರು ತಮ್ಮ ಲೂನಾದಲ್ಲಿ ಮಾರಾಟ ಮಾಡಬೇಕಾದ ಪದಾರ್ಥಗಳನ್ನು ತುಂಬಿಸಿಕೊಂಡು ಕನ್ನಡದ ಹಾಡುಗಳನ್ನು ಬಿತ್ತರಿಸುತ್ತಾ ಸಾಗುತ್ತಾರೆ. ಇದು ದೂರದಿಂದ ಬಂದವರಿಗೆ ಮತ್ತು ಮೊದಲ ಬಾರಿಗೆ ನೋಡುವವರಿಗೆ ಅಚ್ಚರಿಯಾಗಿ ಕಾಣುತ್ತದೆ.
ಹಾಗೆನೋಡಿದರೆ ಮೈಸೂರು ಸಾಂಸ್ಕೃತಿಕ, ಪಾರಂಪರಿಕ ನಗರಿಯಾಗಿದ್ದು, ಪ್ರತಿದಿನವೂ ನಗರಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಹೀಗೆ ಬರುವ ಪ್ರವಾಸಿಗರಿಗೆ ಇವರು ಅಚ್ಚರಿ ಮೂಡಿಸುತ್ತಾರೆ. ಇವರು ಹಳೆಯ ಮೈಸೂರು ಮತ್ತು ಈಗಿನ ಅಭಿವೃದ್ಧಿಗೊಂಡ ಮೈಸೂರನ್ನು ಹತ್ತಿರದಿಂದ ನೋಡಿದ್ದಾರೆ. ನಗರದ ಪ್ರತಿ ಗಲ್ಲಿಯ ಬಗ್ಗೆಯೂ ಇವರಿಗೆ ಗೊತ್ತಿದೆ. ಅಷ್ಟೇ ಅಲ್ಲ ಇಲ್ಲಿನ ಇತಿಹಾಸವೂ ಗೊತ್ತಿದೆ. ಹೀಗಾಗಿಯೇ ದೂರದಿಂದ ಬರುವವರು ಇವರಿಂದ ಪದಾರ್ಥಗಳನ್ನು ಖರೀದಿಸುವುದಲ್ಲದೆ, ಮೈಸೂರಿನ ಬಗೆಗಿನ ಮಾಹಿತಿಯನ್ನು ಕೂಡ ಪಡೆದುಕೊಳ್ಳುತ್ತಾರೆ. ಇನ್ನು ಇವರ ಬಳಿ ಮನುಷ್ಯರನ್ನು ಸಾಮಾನ್ಯವಾಗಿ ಕಾಡುವ ಮಂಡಿನೋವು, ತಲೆನೋವು, ಸೊಂಟನೋವು, ಬೆನ್ನುನೋವು, ಕೈಕಾಲು ನೋವು, ಹಲ್ಲುನೋವುಗಳನ್ನು ಶಮನಗೊಳಿಸುವ ಮತ್ತು ಪಾರ್ಶ್ವವಾಯುಗೂ ಎಣ್ಣೆಗಳಿದ್ದು, ಮಸಾಜ್ ಕೂಡ ಮಾಡಿಕೊಡುತ್ತಾರೆ.
ಪ್ರತಿ ಭಾನುವಾರ ಇವರು ತಮ್ಮ ಮನೆಯಲ್ಲಿ ರೋಗಿಗಳಿಗೆ ಉಚಿತವಾಗಿ ಮಸಾಜ್ ಮಾಡಿಕೊಡುವುದರ ಮೂಲಕ ಸಮಾಜ ಸೇವೆ ಮಾಡಿಕೊಂಡು ಬಂದಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಪಂಡಿತ್ ಅಪ್ಪಸ್ವಾಮಿ ಅವರು ಇಳಿ ವಯಸ್ಸಿನಲ್ಲಿಯೂ ದುಡಿದು ತಿನ್ನುತ್ತಾ ತನ್ನ ಕೈಲಾದ ಸಮಾಜ ಸೇವೆ ಮಾಡುತ್ತಾ ಎಲ್ಲರ ಗಮನಸೆಳೆಯುತ್ತಿದ್ದಾರೆ.