ಚೆನ್ನೈ: ಪ್ರೀತಿ ಧ್ಯೋತಕವಾಗಿ ತಾಜ್ಮಹಲ್ ಅನ್ನು ನಿರ್ಮಿಸಿರುವುದು ನಮಗೆಲ್ಲರಿಗೂ ತಿಳಿದಿದೆ. ಆದರೆ ತಾಯಿಯ ಮೇಲಿನ ಪ್ರೀತಿಗಾಗಿ ತಾಜ್ಮಹಲ್ ನಿರ್ಮಿಸಿದರವರನ್ನು ಕೇಳಿದ್ದೀರಾ. ಅಂತಹ ಒಂದು ವಿಶಿಷ್ಟ ವ್ಯಕ್ತಿತ್ವದ ಪರಿಚಯ ಇಲ್ಲಿದೆ ನೋಡಿ.
ಚೆನ್ನೈ ಮೂಲದ ಉದ್ಯಮಿಯೊಬ್ಬರು ತಾಯಿಗಾಗಿ ಮಿನಿ ತಾಜ್ ಮಹಲ್ ವಿಶ್ವದ ಗಮನಸೆಳೆದಿದ್ದಾರೆ. ಅಮೃತೀನ್ ಶೇಕ್ ದಾವೂದ್ ಸಾಹಿಬ್ ಚೆನ್ನೈನಲ್ಲಿ ಹಾರ್ಡ್ವೇರ್ ಉದ್ಯಮಿಯಾಗಿದ್ದಾರೆ. ಅಬ್ದುಲ್ ಖಾದರ್ ಶೇಕ್ ಅವರ ಐವರು ಮಕ್ಕಳ ಪೈಕಿ ಅಮೃತೀನ್ ಶೇಕ್ ಮಾತ್ರ ಗಂಡು, ಉಳಿದವರು ಹೆಣ್ಣುಮಕ್ಕಳು. ತಂದೆ ಅಬ್ದುಲ್ ಖಾದರ್ ಶೇಕ್ ದಾವೂದ್ ಚೆನ್ನೈನಲ್ಲಿ ಉದ್ಯಮಿಯಾಗಿದ್ದು, ಚರ್ಮದ ಸರಕು ವ್ಯಾಪಾರ ಮಾಡುತ್ತಿದ್ದರು. ಆದರೆ ದುರದೃಷ್ಟವಶಾತ್ ಮಕ್ಕಳು ಚಿಕ್ಕವರಿದ್ದಾಗಲೇ ಶೇಕ್ ನಿಧನರಾದರು.
ಆದರೆ ಶೇಕ್ ಅವರ ಪತ್ನಿ ಪತ್ನಿ ಜೈಲಾನಿ ಬೀವಿ ಛಲಬಿಡದೆ ವ್ಯಾಪಾರ ಉದ್ಯಮವನ್ನು ಮುಂದುವರಿಸಿದರು. ಅಲ್ಲದೆ ನಾಲ್ವರು ಹೆಣ್ಣು ಮಕ್ಕಳು ಮತ್ತು ಪುತ್ರನನ್ನು ಕಷ್ಟಪಟ್ಟು ಬೆಳೆಸಿದರು.
ಅದೇ ರೀತಿ ನಾಲ್ವರು ಸಹೋದರಿಯರ ಮದುವೆಯಾದ ನಂತರ ಅಮೃತೀನ್ ಶೇಕ್ ಕೂಡ ವಿವಾಹವಾದರು. 2020 ರಲ್ಲಿ ಅಮೃತೀನ್ಗೆ ಪ್ರತಿಹಂತದಲ್ಲಿಯೂ ಪ್ರೇರಣೆಯಾಗಿದ್ದ ತಾಯಿ ನಿಧನರಾಗಿದ್ದು, ದೊಡ್ಡ ಆಘಾತವನ್ನೇ ಉಂಟುಮಾಡಿದರು. ತಾಯಿ ಅಮಾವಾಸ್ಯೆ ದಿನ ನಿಧನರಾಗಿದ್ದು, ಈ ಕಾರಣದಿಂದ ಅಮರುದ್ದೀನ್ ಪ್ರತಿ ಅಮಾವಾಸ್ಯೆಯಂದು 1 ಸಾವಿರ ಜನರಿಗೆ ಬಿರಿಯಾನಿ ಊಟವನ್ನು ಉಚಿತವಾಗಿ ನೀಡಲು ಆರಂಭಿಸಿದರು.
ತಾಯಿಗಾಗಿ ತಾಜ್ಮಹಲ್ ನಿರ್ಮಿಸಿದರು: ತನ್ನ ಪ್ರೀತಿಯ ತಾಯಿಯ ನೆನಪು ಶಾಶ್ವತವಾಗಿರಬೇಕೆಂದು ಅಮೃತೀನ್ ಪ್ರತಿದಿನ ಯೋಚಿಸುತ್ತಿದ್ದರು. ಈ ನಿಟ್ಟಿನಲ್ಲಿ ಮಿನಿ ತಾಜ್ ಮಹಲ್ ಒಂದನ್ನು ನಿರ್ಮಿಸಲು ನಿಶ್ಚಯಿಸಿದರು. ಬಳಿಕ ತಮ್ಮ ಪೂರ್ವಜರ ಹಳ್ಳಿಯಾದ ಅಮ್ಮಯ್ಯಪ್ಪನ್ನಲ್ಲಿ ಒಂದು ಎಕರೆ ಭೂಮಿ ಖರೀದಿಸಿ, ತನ್ನ ಬಿಲ್ಡರ್ ಸ್ನೇಹಿತರ ಬೆಂಬಲದೊಂದಿಗೆ ಮಿನಿ ತಾಜ್ಮಹಲ್ ನಿರ್ಮಿಸಲು ಮುಂದಾದರು. ಇದಕ್ಕಾಗಿ ರಾಜಸ್ಥಾನದಿಂದ ಅಮೃತಶಿಲೆಯನ್ನು ಖರೀದಿಸಿ ತಂದರು. ಆಗ್ರಾದ ತಾಜ್ ಮಹಲ್ನಲ್ಲಿರುವಂತೆಯೇ ಸ್ಮಾರಕದ ಸುತ್ತಲೂ ಮಾರ್ಗಗಳು ಮತ್ತು ನಡಿಗೆ ಮಾರ್ಗಗಳನ್ನು ನಿರ್ಮಿಸಿದರು.
ಈ ಸ್ಮಾರಕ ಜೂನ್ 2ರಂದು ಸಾರ್ವಜನಿಕರ ಪ್ರವೇಶಕ್ಕೆ ತೆರೆದುಕೊಂಡಿದೆ. ಇಲ್ಲಿ ಎಲ್ಲ ಧರ್ಮದ ಜನರು ಧ್ಯಾನ ಮಾಡಲು ಅವಕಾಶ ನೀಡಲಾಗಿದ್ದು, ಪ್ರಸ್ತುತ 10 ವಿದ್ಯಾರ್ಥಿಗಳು ಉಳಿದುಕೊಂಡಿರುವ ಮದ್ರಸಾವನ್ನು ಹೊಂದಿದೆ. ಈಗ ಮಿನಿ ತಾಜ್ ಮಹಲ್ ರಾಜ್ಯಾದ್ಯಂತ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.