ವರಲಕ್ಷ್ಮಿ ವ್ರತದ ಪೂಜೆಯು ಭಗವಾನ್ ವಿಷ್ಣುವಿನ ಪತ್ನಿಯಾದ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸುವ ಹಬ್ಬವಾಗಿದೆ. ಪ್ರತಿ ವರ್ಷ ಪೌರ್ಣಮಿಯ ಸಮೀಪದ ಶ್ರಾವಣ ಮಾಸದ ಎರಡನೇ ಶುಕ್ರವಾರ ಬರುವ ಈ ವರಲಕ್ಷ್ಮಿ ವ್ರತವನ್ನು ಎಲ್ಲಾ ಮುತ್ತೈದೆಯರು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಭವಿಷ್ಯೋತ್ತರ ಪುರಾಣದ ಪ್ರಕಾರ, ಲಕ್ಷ್ಮಿಯು ಕ್ಷೀರ ಸಾಗರದಿಂದ ಅವತಾರ ತಾಳಿದಳೆಂದು ಹೇಳಲಾಗುತ್ತದೆ.
ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯದೊಂದಿಗೆ ಮಂದರ ಪರ್ವತವನ್ನು ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಉದ್ಭವಿಸುತ್ತಾಳೆ ಲಕ್ಷ್ಮೀ.
ಹಾಗಾಗಿ ಈ ವರಮಹಾಲಕ್ಷ್ಮಿ ವ್ರತದ ದಿನ ತಾಯಿಗೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸುತ್ತಾರೆ. ಲಕ್ಷ್ಮಿ ಎಂದರೆ ಶುದ್ಧತೆಯ ಸಂಕೇತವಾಗಿರುವುದರಿಂದ ಹಬ್ಬದ ದಿನದಂದು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ ಅಭ್ಯಂಜನವನ್ನು ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ ನೈವೇದ್ಯವನ್ನು ತಯಾರಿಸಲಾಗುತ್ತದೆ.
ವರಲಕ್ಷ್ಮಿ ವ್ರತವು ಮುಖ್ಯವಾಗಿ ಮಹಿಳೆಯರಿಗೆ ಹಬ್ಬವಾಗಿದೆ ಮತ್ತು ಇದನ್ನು ಮಹಿಳೆಯರು ಮಾತ್ರ ಆಚರಿಸುತ್ತಾರೆ. ವರಲಕ್ಷ್ಮೀ ವ್ರತದ ಮಹತ್ವವನ್ನು ‘ಸ್ಕಂದ ಪುರಾಣ’ದಲ್ಲಿ ವಿವರಿಸಲಾಗಿದೆ
ಲಕ್ಷ್ಮಿ ದೇವಿಯು ಹಿಂದೂ ಪುರಾಣಗಳಲ್ಲಿ ಸಂಪತ್ತು, ಸಮೃದ್ಧಿ, ಫಲವತ್ತತೆ, ಶಕ್ತಿ ಮತ್ತು ಅದೃಷ್ಟದ ದೇವತೆ. ವಿವಾಹಿತ ಮಹಿಳೆಯರು ತಮ್ಮ ಗಂಡನಿಗೆ ದೀರ್ಘ ಮತ್ತು ಸಮೃದ್ಧ ಜೀವನಕ್ಕಾಗಿ ದೇವಿಯನ್ನು ಪ್ರಾರ್ಥಿಸುತ್ತಾರೆ. ಉಪವಾಸವನ್ನು ಆಚರಿಸುವ ಮಹಿಳೆಯರಿಗೆ ಲಕ್ಷ್ಮಿ ದೇವಿಯು ದೀರ್ಘಾಯುಷ್ಯ, ಆರೋಗ್ಯ ಮತ್ತು ಸಂತತಿಯನ್ನು ನೀಡುತ್ತಾಳೆ ಎಂದು ನಂಬಲಾಗಿದೆ.
ಈ ವ್ರತವನ್ನು ಸಂಪೂರ್ಣ ಶ್ರದ್ಧಾಭಕ್ತಿಯಿಂದ ಆಚರಿಸಿದರೆ ಮನೆಯಿಂದ ಬಡತನದ ಛಾಯೆಯೂ ದೂರವಾಗುತ್ತದೆ ಮತ್ತು ಅನೇಕ ತಲೆಮಾರುಗಳು ತಮ್ಮ ಜೀವನವನ್ನು ಸಂತೋಷದಿಂದ ಕಳೆಯುತ್ತಾರೆ ಎಂದು ನಂಬಲಾಗಿದೆ.
ಮಕ್ಕಳಿಲ್ಲದ ದಂಪತಿಗಳು ಸಂತಾನ ಸುಖವನ್ನು ಪಡೆಯುತ್ತಾರೆ ಮತ್ತು ಅಖಂಡ ಸೌಭಾಗ್ಯವನ್ನು ಪಡೆಯುತ್ತಾರೆ. ಈ ಉಪವಾಸ ಅವಿವಾಹಿತ ಹೆಣ್ಣುಮಕ್ಕಳಿಗೆ ಅಲ್ಲ. ವಿವಾಹಿತ ಮಹಿಳೆಯರು ಮಾತ್ರ ಈ ಉಪವಾಸವನ್ನು ಆಚರಿಸಬಹುದು. ಪತಿ-ಪತ್ನಿಯರಿಬ್ಬರೂ ಒಟ್ಟಾಗಿ ಈ ವ್ರತವನ್ನು ಆಚರಿಸಿದರೆ ತುಂಬಾ ಶುಭ ಫಲಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ.