ಹಾಸನ: ಹಿಂಗಾರು ಮಳೆಯ ಅಭಾವದಿಂದ ಗೊರೂರು ಹೇಮಾವತಿ ಜಲಾಶಯಕ್ಕೆ ಒಳಹರಿವು ಕ್ಷೀಣಿಸುತ್ತಿದ್ದು ಜಲಾಶಯದಲ್ಲಿ ನೀರಿನ ಮಟ್ಟ ದಿನೇ ದಿನೇ ಕಡಿಮೆಯಾಗುತ್ತಿದೆ.
ಕಾವೇರಿ ಕಣಿವೆಯ ಪ್ರಮುಖ ಜಲಾಯಗಳಲ್ಲಿ ಒಂದಾಗಿರುವ ಹೇಮಾವತಿ ಜಲಾಶಯ, ಹಾಸನ, ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶ ಮತ್ತು ಕುಡಿಯುವ ನೀರಿಗೆ ಆಧಾರ.
ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 22 ಟಿಎಂಸಿ ನೀರು ಸಂಗ್ರಹವಿತ್ತು. ಆದರೆ ಈ ಬಾರಿ 17 ಟಿಎಂಸಿಗೆ ಇಳಿದಿದೆ.ಕಳೆದ ವರ್ಷ 2094 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು ಈ ಬಾರಿ 2895 ಅಡಿಗಳಷ್ಟು ನೀರು ಸಂಗ್ರಹವಾಗಿದೆ.
ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ರೈತರಿಗೆ ಅನುಕೂಲವಾಗುವಂತೆ ನಾಲೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ 20 ಟಿಎಂಸಿ ಪ್ರಮಾಣಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿದ್ದರೆ ಮಾತ್ರ ನಾಲೆಗಳಿಗೆ ನೀರನ್ನು ಹರಿಬಿಡಬಹುದಾಗಿದೆ.
ಮುಂದಿನ ದಿನಗಳಲ್ಲಿ ಮುಂಗಾರು ಆರಂಭವಾದರೆ ಉತ್ತಮ ಮಳೆ ಬೀಳುವ ಸಾಧ್ಯತೆಗಳು ಇದ್ದು ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳವಾಗಲಿದೆ ಅಂತೆಯೇ ನಾಲೆಗೂ ನೀರನ್ನು ಹರಿ ಬಿಡಲಾಗುವುದು ಜಲಾಶಯದಿಂದ ಇಲ್ಲಿಯವರೆಗೆ ಮಂಡ್ಯ ತುಮಕೂರು ಮೈಸೂರು ಜಿಲ್ಲೆಗಳಿಗೆ ನಿಗದಿಯಂತೆ ನೀರನ್ನು ಹರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದೀಗ ಜಲಾಶಯ ಮಟ್ಟ ದಿನೇದಿನೇ ಕಡಿಮೆಯಾಗುತ್ತಿದ್ದು ಆದ್ದರಿಂದ ಅಚ್ಚುಕಟ್ಟು ಪ್ರದೇಶದ ಬೇಸಿಗೆ ಬೆಳೆಗೆ ನೀರು ಹರಿಸುತ್ತಿಲ್ಲ. ಆದರೆ, ಹಾಸನ ನಗರಕ್ಕೆ ಕುಡಿಯುವ ನೀರು, ಪ್ರಾಣಿ, ಪಕ್ಷಿ ಹಾಗೂ ಜಲಚರಗಳಿಗೆ ಕುಡಿಯಲು ನದಿಯಲ್ಲಿ 500ಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಸಲಾಗುತ್ತಿದೆ ಅಷ್ಟೆ ಎಂದು ಜಲಾಶಯ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಹಾಸನ ತಾಲೂಕು ಗೊರೂರಿನ ಬಳಿಯಿರುವ ಹೇಮಾವತಿ ಜಲಾಶಯದಲ್ಲಿ ಈಗ 12.7 ಟಿಎಂಸಿ ನೀರಿನ ಸಂಗ್ರಹವಿದೆ.ಹಾಗಾಗಿ, ಹಾಸನ ನಗರ ಸೇರಿ ನದಿ ಪಾತ್ರದಲ್ಲಿ ಕುಡಿಯುವ ನೀರಿಗೆ ಆತಂಕ ಪಡುವ ಅಗತ್ಯವಿಲ್ಲ. ಹೇಮಾವತಿ ಜಲಾಶಯದ ಗರಿಷ್ಠ ಸಂಗ್ರಹಣಾ ನಾಮರ್ಥಯ 37.10 ಟಿಎಂಸಿ ಮಾತ್ರ ಈ ವರ್ಷ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯಕ್ಕೆ 120 ಕ್ಕೂ ಹೆಚ್ಚು ಟಿಎಂಸಿಗೂ ಹೆಚ್ಚು ನೀರು ಹರಿದು ಬಂದಿದೆ.
ಆದರೆ ಅದನ್ನು ಹಿಡಿದಿಟ್ಟುಕೊಳ್ಳಲಾಗದೆ ನದಿಯಲ್ಲಿ ಪ್ರವಾಹವಾಗಿ ಹರಿದು ಹೋಗಿದೆ. ನಾಲೆಗಳ ಮೂಲಕ ಸುಮಾರು 36.607 ಟಿಎಂಸಿ ನೀರು ಮಾತ್ರ ಬಳಕೆಯಾಗಿದೆ. ಹಾಸನ ನಗರಕ್ಕೆ ಕುಡಿಯಲು 0.15 ಟಿಎಂಸಿ ಸಾಕು, ಹೇಮಾವತಿಯಿಂದ ತುಮಕೂರು ಜಿಲ್ಲೆಗೆ ನಿಗದಿಯಂತ ನೀರು ಹಂಚಿಕೆಯಾಗಿದ್ದು, ಹಾಸನ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ಸುಮಾರು 90.00 ಟಿಎಂಸಿ ನೀರು ಹಂಚಿಕೆಯಾಗಿದೆ, ತುಮಕೂರು ಜಿಲ್ಲೆಗೆ ಈ ವರ್ಷ 30 ಟಿಎಂಸಿ ನೀರು ಹರಿದಿದೆ. ಒಟ್ಟು 4 ಜಿಲ್ಲೆಗಳಲ್ಲಿ 7.08 ಲಕ್ಷ ಎಕರೆ ಅಚ್ಚುಕಟ್ಟು ಹೊಂದಿರುವ ಹೇಮಾವತಿ ಯೋಜನೆಯಲ್ಲಿ ತುಮಕೂರು ಜಿಲ್ಲೆ ಪಾಲು 3,17,672 ಎಕರಗಳು. ಹಾಸನ ಜಿಲ್ಲೆ 1,55,030 ಎಕರೆ, ಮಂಡ್ಯ ಜಿಲ್ಲೆ 2,30,585 ಎಕರೆ, ಮೈಸೂರು ಜಿಲ್ಲೆಯ ಅಚ್ಚುಕಟ್ಟು ಪ್ರದೇಶ 5665 ಎಕರೆಗಳು ಹೇಮಾವತಿ ಎಡದಂಡೆ ನಾಲೆ (ಎ.ಜಿ.ರಾಮಚಂದ್ರರಾವ್ ನಾಲೆ) ಈ ಯೋಜನೆಯ ಬಹುದೊಡ್ಡ ನಾಲೆಯಾಗಿದ್ದು, ಹಾಸನ, ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ಅಚ್ಚುಕಟ್ಟು ಪ್ರದೇಶ ಹೊಂದಿದ್ದರೆ, ಬಲದಂಡೆ ನಾಲೆ (ಗೊರೂರು ರಾಮಸ್ವಾಮಿ ಅಯ್ಯಂಗಾರ್ ನಾಲೆ) ಹಾಸನ ಜಿಲ್ಲೆಯ ಅರಕಲಗೂಡು ಮತ್ತು ಹೊಳೆನರಸೀಪುರ ತಾಲೂಕಿನಲ್ಲಿ ಬಲ ಮೇಲ್ದಂಡೆ ನಾಲೆ (ಬೋರಣ್ಣಗೌಡ ನಾಲೆ) ಅರಕಲಗೂಡು ಮತ್ತು ಹೊಳೆನರಸೀಪುರ ತಾಲೂಕಿನಲ್ಲಿ ಅಚ್ಚಕಟ್ಟು ಪ್ರದೇಶ ಹೊಂದಿದೆ.
ನೀರಿನ ಸಂಗ್ರಹದಲ್ಲಿ ಗಣನೀಯ ಇಳಿಕೆ
ಜಲಾಶಯ ನೀರಿನ ಮಟ್ಟ: ಗರಿಷ್ಠ ಮಟ್ಟ: 2922.00 ಅಡಿ,
ಇಂದಿನ ಮಟ್ಟ : 2895.46 ಕಳೆದ ಬಾರಿ ಇದೇ ಅವಧಿಯಲ್ಲಿ(2904.46)ಅಡಿ.
ಜಲಾಶಯ ಸಾಮರ್ಥ್ಯ: 37.103 ಟಿಎಂಸಿ
ಇಂದಿನ ಮಟ್ಟ 17.109 ಟಿಎಂಸಿ, ಕಳೆದ ವರ್ಷ ಇದೇ ಅವಧಿಯಲ್ಲಿ(22.683)ಟಿಎಂಸಿ
ಸದ್ಯದ ನೀರಿನ ಮಟ್ಟ: 12.737(18.321) ಟಿಎಂಸಿ
ಒಳ ಹರಿವು :30 ಕ್ಯೂಸೆಕ್ಸ್ , ಕಳೆದ ಬಾರಿ 500 ಕ್ಯೂಸೆಕ್ ಹರಿವಿತ್ತು.
ನದಿಗೆ 680 ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದ್ದು ಕಳೆದ ಬಾರಿ ಇದೇ ಅವಧಿಯಲ್ಲಿ (200) ಕ್ಯೂಸೆಕ್ ಬಿಡಲಾಗುತ್ತಿತ್ತು.ಹಾಸನ ನಗರ ಸೇರಿ ಹೇಮಾವತಿ ನದಿ ಪಾತ್ರದ ಯಾವುದೇ ಪಟ್ಟಣಗಳಿಗೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ.
ಕುಡಿಯವ ನೀರಿಗೆ ಸಾಕಷ್ಟು ಸಂಗ್ರಹವಿದೆ. ಅಚ್ಚುಕಟ್ಟು ಪ್ರದೇಶಕ್ಕೆ ಸಮೃದ್ಧವಾಗಿ ನೀರು ಹರಿಯಿತು. ಆದರೆ, ಹಿಂಗಾರು ಹಂಗಾಮಿನಲ್ಲಿ ಮಳೆಯಾಗದಿದ್ದರಿಂದ ಜಲಾಶಯಕ್ಕೆ ನೀರು ಬರಲಿಲ್ಲ. ಹಾಗಾಗಿ, ಬೇಸಿಗೆ ಬೆಳೆಗೆ ನೀರು ಕೊಡಲಾಗಲಿಲ್ಲ.
-ಅರುಣ್ , ಎಂಜಿನಿಯರ್, ಹೇಮಾವತಿ ಆಣೆಕಟ್ಟು ವಿಭಾಗ