ದೀಪಾವಳಿ ಹಬ್ಬವನ್ನು ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ಅದರಂತೆ ಕರ್ನಾಟಕ ಹಾಗೂ ತಮಿಳುನಾಡು ಗಡಿಭಾಗದಲ್ಲಿರುವ ಚಾಮರಾಜನಗರ ಗಡಿಭಾಗದ ತಮಿಳುನಾಡು ಬಳಿಯ ತಾಳವಾಡಿ ಫಿರ್ಕಾ ವ್ಯಾಪ್ತಿಯ ಗುಮಟಾಪುರ ಗ್ರಾಮದಲ್ಲಿ ಜನ ಸೆಗಣಿಯಿಂದ ಬಡಿದಾಡಿಕೊಂಡು ದೀಪಾವಳಿ ಹಬ್ಬವನ್ನುಆಚರಿಸುತ್ತಾರೆ.ಇದು ಪ್ರತಿವರ್ಷವೂ ಬಲಿಪಾಡ್ಯಮಿಯ ಮಾರನೆಯ ದಿನ ನಡೆಯುತ್ತದೆ.
ಈ ಹಬ್ಬವನ್ನು ಸ್ಥಳೀಯರು ಗೋರೆಹಬ್ಬ ಎಂದು ಕರೆಯುತ್ತಾರೆ. ಇಷ್ಟಕ್ಕೂ ಈ ಹಬ್ಬ ಇಲ್ಲಿ ಹೇಗೆ ಆಚರಣೆಗೆ ಬಂತು ಎಂಬುವುದನ್ನು ಹುಡುಕುತ್ತಾ ಹೋದರೆ ಇಲ್ಲಿನ ಹಿರಿಯರು ಒಂದಷ್ಟು ಇತಿಹಾಸವನ್ನು ಮೆಲುಕು ಹಾಕುತ್ತಾರೆ. ಜತೆಗೆ ಹಬ್ಬ ಆಚರಣೆಯ ಒಂದಷ್ಟು ಮಾಹಿತಿಯನ್ನು ನಮ್ಮ ಮುಂದೆ ಇಡುತ್ತಾರೆ. ಆ ಹಿರಿಯರು ಹೇಳುವ ಪ್ರಕಾರ ಹಿಂದಿನ ಕಾಲದಲ್ಲಿ ಗುಮಟಾಪುರ ಗ್ರಾಮದ ಗೌಡನ ಮನೆಗೆ ವ್ಯಕ್ತಿಯೊಬ್ಬ ಕೆಲಸಕ್ಕೆ ಸೇರಿದ್ದನು. ಈತ ಇದ್ದಕ್ಕಿದ್ದಂತೆ ಮರಣ ಹೊಂದಿದನು. ಆತ ಬಳಸುತ್ತಿದ್ದ ಜೋಳಿಗೆಯನ್ನು ತಿಪ್ಪೆಗೆ ಎಸೆಯಲಾಗಿತ್ತು. ಇದಾದ ಕೆಲ ದಿನಗಳ ನಂತರ ಗೌಡನ ಎತ್ತಿನ ಗಾಡಿ ಜೋಳಿಗೆ ಎಸೆಯಲಾಗಿದ್ದ ತಿಪ್ಪೆಯಲ್ಲಿ ಹಾದು ಹೋಗುವಾಗ ಎತ್ತಿನ ಗಾಡಿಯ ಚಕ್ರಕ್ಕೆ ಆ ಜೋಳಿಗೆ ಸಿಕ್ಕಿ ಹಾಕಿಕೊಳ್ಳುತ್ತದೆ. ಈ ವೇಳೆ ಸಮೀಪದಲ್ಲಿಯೇ ಇದ್ದ ಶಿವಲಿಂಗದಿಂದ ರಕ್ತ ಬರುತ್ತದೆ.
ಅದೇ ದಿನ ರಾತ್ರಿ ಗೌಡರ ಕನಸಿನಲ್ಲಿ ದೇವರು ಕಾಣಿಸಿಕೊಂಡು ಈ ದೋಷ ನಿವಾರಣೆಗಾಗಿ ಗ್ರಾಮದಲ್ಲಿ ಗುಡಿಯೊಂದನ್ನು ನಿರ್ಮಿಸಬೇಕು. ದೀಪಾವಳಿ ಹಬ್ಬದ ಮರುದಿನ ಸಗಣಿ ಹಬ್ಬ ಆಚರಿಸಬೇಕು ಎಂದು ಹೇಳಿತಂತೆ. ಹೀಗಾಗಿ ತಿಪ್ಪೆ ಸ್ಥಳದಲ್ಲಿ ಬೀರಪ್ಪನ ಗುಡಿ ಕಟ್ಟಿ ಸಗಣಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆಯಂತೆ. ಹಬ್ಬದ ದಿನದಂದು ಗ್ರಾಮದ ಯುವಕನೊಬ್ಬನನ್ನು ಕತ್ತೆ ಮೇಲೆ ಕೂರಿಸಿಕೊಂಡು ಗ್ರಾಮದ ಪ್ರಮುಖ ಬಡಾವಣೆಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಕತ್ತೆ ಮೇಲೆ ಕುಳಿತ ಈತನನ್ನು ಚಾಡಿಕೋರ ಎಂದು ಕರೆಯಲಾಗುತ್ತದೆ. ಮೆರವಣಿಗೆ ವೇಳೆ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗುತ್ತದೆ. ಇದಕ್ಕೂ ಮುನ್ನ ಗೋವುಗಳು ಹಾಕಿದ ಸಗಣಿಯನ್ನು ಗ್ರಾಮದ ದೇವಸ್ಥಾನದ ಬಳಿ ತಂದು ಗುಡ್ಡೆ ಹಾಕಲಾಗುತ್ತದೆ. ಮತ್ತೊಂದೆಡೆ ಮಕ್ಕಳು ಮನೆ, ಮನೆಗೆ ತೆರಳಿ ಎಣ್ಣೆಯನ್ನು ಬೇಡಿ ತರುತ್ತಾರೆ. ಆ ಎಣ್ಣೆಯಿಂದ ಪೂಜೆ ಸಲ್ಲಿಸಿ, ಬಳಿಕ ಕಾರಪ್ಪ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ.
ಇದೇ ವೇಳೆಗೆ ಯುವಕನಿಗೆ ಹುಲ್ಲಿನ ಮೀಸೆ, ಗಡ್ಡ ಮಾಡಿ ಕಟ್ಟಿ ಬಳಿಕ ಆತನನ್ನು ಕತ್ತೆಯೊಂದರಲ್ಲಿ ಕೂರಿಸಿ ಗ್ರಾಮದ ಕೆರೆಯಿಂದ ಪ್ರಮುಖ ಬಡಾವಣೆಗಳಲ್ಲಿ ಮೆರವಣಿಗೆ ಮಾಡಿ ಬೀರೇಶ್ವರನ ದೇವಸ್ಥಾನದವರೆಗೂ ಕರೆತರಲಾಗುತ್ತದೆ. ಈ ವೇಳೆ ಕತ್ತೆ ಮೇಲೆ ಕುಳಿತಿದ್ದವನಿಗೆ ಜನ ಅಶ್ಲೀಲ ಪದಗಳಿಂದ ನಿಂದಿಸುತ್ತಾ ಬರುತ್ತಾರೆ. ಮೆರವಣಿಗೆ ಬಂದು ಬೀರೇಶ್ವರನ ದೇವಸ್ಥಾನ ತಲುಪಿದ ನಂತರ ಆತನ ಹುಲ್ಲಿನ ಮೀಸೆ ಹಾಗೂ ಗಡ್ಡ ತೆಗೆದು ಸಗಣಿ ರಾಶಿಯಲ್ಲಿ ಇರಿಸಿ ಬೀರೇಶ್ವರನಿಗೆ ಪೂಜೆ ಸಲ್ಲಿಸಿ ಸೆಗಣಿ ಎರಚಾಟಕ್ಕೆ ಚಾಲನೆ ನೀಡಲಾಗುತ್ತದೆ.
ಸೆಗಣಿ ಎರಚಾಡಲೆಂದೇ ಗ್ರಾಮದ ಯುವಕರು ಸಗಣಿಯನ್ನು ಉಂಡೆ ಮಾಡಿಕೊಂಡು ತಯಾರಾಗಿ ನಿಲ್ಲುತ್ತಾರೆ. ಪೂಜೆ ಮುಗಿಯುತ್ತಿದ್ದಂತೆಯೇ ಸೆಗಣಿ ಎರಚಾಟ ಆರಂಭವಾಗುತ್ತದೆ. ಒಬ್ಬರಿಗೊಬ್ಬರು ಸೆಗಣಿಯಲ್ಲಿ ಹೊಡೆದಾಡಿ, ಬಡಿದಾಡಿ, ಉರುಳಾಡಿ ಸಂತೋಷ ಪಡುತ್ತಾರೆ. ಇಡೀ ಗ್ರಾಮದ ಜನ ಸೆಗಣಿಯಲ್ಲಿ ಮುಳುಗಿ ಏಳುತ್ತಾರೆ. ಕೆಲವು ಸಮಯಗಳವರೆಗೆ ನಡೆಯುವ ಈ ಸೆಗಣಿ ಎರಚಾಟಕ್ಕೆ ಇತಿಶ್ರೀ ಹಾಡಲಾಗುತ್ತದೆ.
ಆ ನಂತರ ಚಾಡಿಕೋರ ಗುಡ್ಡದಲ್ಲಿ ಹಿಡಿಕಟ್ಟೆಗಳಿಂದ ಚಾಡಿಕೋರನ ಪ್ರತಿಕೃತಿ ನಿರ್ಮಿಸಿ ಸುಡುತ್ತಾರೆ. ಅಲ್ಲಿಗೆ ಹಬ್ಬ ಮುಗಿಯುತ್ತದೆ. ಸೆಗಣಿಯಲ್ಲಿ ಉರುಳಾಡಿದವರು ಕೆರೆ, ಬಾವಿಗಳಿಗೆ ತೆರಳಿ ಸ್ನಾನ ಮಾಡಿ ಮೈಕೈ ಶುಚಿಗೊಳಿಸಿಕೊಂಡು ಶುಭ್ರರಾಗುತ್ತಾರೆ. ಅಲ್ಲಿಗೆ ಗೋರೆಹಬ್ಬಕ್ಕೆ ತೆರೆ ಬೀಳುತ್ತದೆ.