ಮತ್ತೆ ಬಂದ ದೀಪಾವಳಿ ಕೊರೊನಾ ತಂದೊಡ್ಡಿದ ಸಂಕಷ್ಟವೆಲ್ಲ ಮಾಯ ಮಾಡಿ ನೆಮ್ಮದಿ ಸಂತಸದ ಹಣತೆ ಎಲ್ಲರ ಮನೆಗಳಲ್ಲಿ ಬೆಳಗಲಿ ಎಂಬ ಆಶಾಭಾವನೆಯೊಂದಿಗೆ ಈ ಬಾರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನ ಅಣಿಯಾಗುತ್ತಿದ್ದಾರೆ.
ದೀಪಾವಳಿ ಹಬ್ಬ ಮೂರು ದಿನಗಳ(ಅ.24,25,26) ಆಚರಣೆಯಾಗಿದ್ದು,ಮೂರು ದಿನವೂ ಮನೆ ಮತ್ತು ಮನದಲ್ಲಿ ಸಂಭ್ರಮ ಸಂತಸದೊಂದಿಗೆ ಒಂದಷ್ಟು ಸಂಪ್ರದಾಯದ ಆಚರಣೆ ಹಬ್ಬದಲ್ಲಿ ಎದ್ದು ಕಾಣಿಸುತ್ತದೆ.
ದೀಪಾವಳಿ ಹಬ್ಬದ ಮೊದಲ ದಿನ ಎಣ್ಣೆ ಸ್ನಾನ ಮಾಡುವ ಸಂಪ್ರದಾಯವಿದೆ. ಇದು ಹೇಗೆ ಬಂತು ಎಂಬುದನ್ನು ನೋಡುವುದಾದರೆ ಸಮುದ್ರ ಮಥನದ ಸಮಯದಲ್ಲಿ ಶ್ರೀವಿಷ್ಣು ಅಮೃತಕಲಶದೊಡನೆ ಧನ್ವಂತರಿಯಾಗಿ ಅವತಾರವೆತ್ತಿದ್ದು, ಹೀಗಾಗಿ ಈ ದಿನ ಸ್ನಾನ ಮಾಡುವ ನೀರಿನಲ್ಲಿ ಗಂಗೆಯೂ, ಎಣ್ಣೆಯಲ್ಲಿ ಧನಲಕ್ಷ್ಮೀಯೂ ಇರುತ್ತಾಳೆಂಬುದು ನಂಬಿಕೆ ಜನರಲ್ಲಿದ್ದು, ಎಣ್ಣೆ ಸ್ನಾನ ಮಾಡುವುದರಿಂದ ಆಯುರಾರೋಗ್ಯ ಆಯಸ್ಸು ವೃದ್ಧಿಸಿ ಸಕಲ ಪಾಪ ನಿವಾರಣೆ ಆಗುತ್ತದೆ ಎಂಬುದು ನಂಬಿಕೆಯಾಗಿದೆ.
ಪೌರಾಣಿಕ ಇತಿಹಾಸವನ್ನು ಗಮನಿಸಿದರೆ ನರಕಾಸುರನನ್ನು ಕೊಂದ ಪಾಪ ಪರಿಹಾರಕ್ಕಾಗಿ ಶ್ರೀಕೃಷ್ಣ ಕೂಡ ಈ ದಿನ ಎಣ್ಣೆಸ್ನಾನ ಶಾಸ್ತ್ರ ಮಾಡಿದ್ದನಂತೆ. ಇದೆಲ್ಲವನ್ನು ಗಮನಿಸಿದರೆ ಹಬ್ಬದಾಚರಣೆ ಹಿಂದಿನ ಮಹತ್ವ ನಮಗೆ ಅರಿವಾಗುತ್ತದೆ.
ಹಬ್ಬದ ಎರಡನೇ ದಿನ (ನರಕ ಚತುರ್ದಶಿಯ ಮಾರನೆಯ ದಿನ) ದೀಪಾವಳಿ ಅಮಾವಾಸ್ಯೆಯಾಗಿದ್ದು, ಅವತ್ತು ಮಹಾ ವಿಷ್ಣುವಿನ ಪತ್ನಿಯೂ ಆದ ಮಹಾಲಕ್ಷ್ಮಿಯನ್ನು ಪೂಜಿಸಿ ಧನಲಕ್ಷ್ಮೀಯನ್ನು ಆರಾಧಿಸಲಾಗುತ್ತದೆ. ವ್ಯಾಪಾರಿಗಳು ದೀಪ ಬೆಳಗಿ ಧನಲಕ್ಷ್ಮೀಯನ್ನು ಆರಾಧಿಸುವ ದಿನವಾಗಿದೆ.
ಹಬ್ಬದಲ್ಲಿ ಮೂರನೆಯ ದಿನ ಬಲಿಪಾಡ್ಯಮಿಯಾಗಿದ್ದು, ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದ ಮಹಾವಿಷ್ಣು, ಬಲಿಯಿಂದ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ಪಡೆದು ಎರಡು ಹೆಜ್ಜೆಗಳಲ್ಲಿ ಆಕಾಶ- ಭೂಮಿಗಳನ್ನು ಅಳೆದುಕೊಂಡು ತ್ರಿವಿಕ್ರಮನಾಗಿ ಬೆಳೆದು ಮೂರನೇ ಹೆಜ್ಜೆಯನ್ನು ಬಲಿಯ ಕೋರಿಕೆಯಂತೆ ಅವನ ತಲೆಯ ಮೇಲಿಟ್ಟು ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದು ಬಿಡುತ್ತಾನೆ. ಆಗ ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಆ ರೀತಿ ಆಚರಿಸಲ್ಪಡುವ ದಿನವೇ ಬಲಿಪಾಡ್ಯಮಿ. ಅಂದು ಬಲಿ ಚಕ್ರವರ್ತಿ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರಪೂಜೆ ನಡೆಸಲಾಗುತ್ತದೆ.
ಒಟ್ಟಾರೆ ಮೂರು ದಿನಗಳ ಕಾಲ ನಡೆಯುವ ದೀಪಾವಳಿ ಪ್ರತಿ ಮನೆಯಲ್ಲೂ ಮಕ್ಕಳಿಂದ ವೃದ್ಧರಾದಿಯಾಗಿ ಎಲ್ಲರಲ್ಲೂ ಸಂಭ್ರಮವನ್ನು ತುಂಬುವ ಹಬ್ಬವಾಗಿರುವುದಂತು ಸತ್ಯ.