ಮೈಸೂರು: ಕೊಡಗಿನಲ್ಲಿ ಮಳೆಯಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಾಳೆಂದರೆ ನಿಸರ್ಗ ಪ್ರೇಮಿಗಳ ಮನದಲ್ಲಿ ಉಲ್ಲಾಸ ಉತ್ಸಾಹ ಮೂಡುವುದು ಖಚಿತ. ಧಾರಾಕಾರ ಮಳೆ ಸುರಿದಾಗ ಕಾವೇರಿ ನದಿ ಪ್ರವಾಹೋಪಾದಿಯಲ್ಲಿ ಹರಿಯುತ್ತಾಳೆ. ಈ ವೇಳೆ ತಾನು ಹರಿಯುವ ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಸುವುದು ಮಾಮೂಲಿ.
ಸಮತಟ್ಟಾದ ಪ್ರದೇಶದಲ್ಲಿ ನಿಧಾನಗತಿಯಲ್ಲಿ ಹರಿಯುವ ಕಾವೇರಿ ತಗ್ಗು ಪ್ರದೇಶಗಳಲ್ಲಿ ತನ್ನ ರೌದ್ರತೆಯನ್ನು ಪ್ರದರ್ಶಿಸಿ ಬಿಡುತ್ತಾಳೆ. ಈ ವೇಳೆ ಆಕೆಯ ಜಲನರ್ತನ ನೋಡುವುದೇ ಕಣ್ಣಿಗೆ ಹಬ್ಬವಾಗುತ್ತದೆ. ತಲಕಾವೇರಿಯಲ್ಲಿ ಹುಟ್ಟಿ ಸಮುದ್ರ ಸೇರುವ ತನಕವೂ ಕಾವೇರಿ ಹಲವಾರು ಜಲಪಾತಗಳನ್ನು ಸೃಷ್ಟಿಸಿದ್ದಾಳೆ. ಹೀಗೆ ಸೃಷ್ಟಿಯಾದ ಜಲಧಾರೆಗಳಲ್ಲಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆಯ ಧನುಷ್ಕೋಟಿಯೂ ಒಂದಾಗಿದೆ.
ಇಲ್ಲಿ ವಿಶಾಲವಾಗಿ ಹರಿಯುವ ಕಾವೇರಿ ವಿಶಾಲ ಬಂಡೆಗಳ ಕೆಳಗೆ ಧುಮುಕುವ ದೃಶ್ಯ ರೌದ್ರಮಯವಾಗಿದ್ದು, ಎದೆ ಝಲ್ಲೆನಿಸುತ್ತದೆ. ಈ ರುದ್ರರಮಣೀಯ ದೃಶ್ಯ ನೋಡಲೆಂದೇ ಜನ ಇತ್ತ ದೌಡಾಯಿಸುತ್ತಾರೆ. ಈಗ ಭಾರೀ ಮಳೆ ಸುರಿಯುತ್ತಿರುವುದರಿಂದ ಕಾವೇರಿ ತನ್ನ ಜಲವೈಭವವನ್ನು ಇಲ್ಲಿ ಮೆರೆಯುತ್ತಿದ್ದು, ಆ ದೃಶ್ಯಗಳಿಗೆ ಸಾಕ್ಷಿಯಾಗಲೆಂದೇ ಪ್ರವಾಸಿಗರು ಬರುತ್ತಿರುವುದು ಕಾಣಿಸುತ್ತಿದೆ.
ಹಾಗೆನೋಡಿದರೆ ಚುಂಚನಕಟ್ಟೆ ಧನುಷ್ಕೋಟಿ ಪೌರಾಣಿಕವಾಗಿ ತನ್ನದೇ ಆದ ಖ್ಯಾತಿಯನ್ನು ಪಡೆದಿದ್ದರೆ, ಕಾವೇರಿಯ ಜಲನರ್ತನವೂ ಈ ಕ್ಷೇತ್ರ ಹೆಸರುವಾಸಿಯಾಗುವಂತೆ ಮಾಡಿದೆ. ಕಾವೇರಿ ನದಿಯಿಂದ ಸೃಷ್ಠಿಯಾಗಿರುವ ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತ ಈ ಭಾಗದ ಜನಕ್ಕೆ ಮುದ ನೀಡುವ ಜಲಧಾರೆ ಎಂದರೆ ತಪ್ಪಾಗಲಾರದು. ಇದೀಗ ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಪರಿಣಾಮ ಧನುಷ್ಕೋಟಿಯಲ್ಲಿ ಭೋರ್ಗರೆದು ಧುಮ್ಮಿಕ್ಕುವ ದೃಶ್ಯ ಕಣ್ಮನ ಸೆಳೆಯುತ್ತಿದೆ.
ಕಾವೇರಿ ಭೋರ್ಗರೆದು ಹರಿಯುವಾಗ ಸೃಷ್ಠಿಯಾಗುವ ಈ ಜಲಧಾರೆಯ ದೃಶ್ಯ ವೈಭವವನ್ನು ನೋಡಲೆಂದೇ ಜನ ಮುಗಿ ಬೀಳುವುದು ಸಾಮಾನ್ಯವಾಗಿದೆ. ಇನ್ನು ಬೇಸಿಗೆಯಲ್ಲಿ ಯಾವುದೇ ಅಬ್ಬರವಿಲ್ಲದೆ ಧುಮುಕುವ ಜಲಧಾರೆ ಮಳೆಗಾಲದಲ್ಲಿ ಮಾತ್ರ ತನ್ನ ರೌದ್ರತೆಯನ್ನು ತಾಳುತ್ತದೆ. ಅದರಲ್ಲೂ ಈಗ ಹೆಬ್ಬಂಡೆಗಳ ಮೇಲೆ ಅಗಲವಾಗಿ ಕೆಂಬಣ್ಣದಿಂದ ಕೂಡಿ ಸುಮಾರು 40ಕ್ಕೂ ಹೆಚ್ಚು ಅಡಿ ಎತ್ತರದಿಂದ ಧುಮುಕುವ ರೋಚಕ ದೃಶ್ಯ ನೋಡುಗರಿಗೆ ಮನಸೆಳೆಯುತ್ತಿದೆ. ಹೀಗಾಗಿ ವೀಕೆಂಡ್ ಗೆ ನಗರವಾಸಿಗಳು ಇತ್ತ ಮುಖ ಮಾಡುತ್ತಿದ್ದಾರೆ. ಎಲ್ಲರಿಗೂ ಒಂದೇ ಒಂದು ಸಲಹೆ ಏನೆಂದರೆ ಕಾವೇರಿ ಪ್ರವಾಹೋಪಾದಿಯಲ್ಲಿ ಹರಿಯುತ್ತಿರುವುದರಿಂದ ಎಲ್ಲರೂ ದೂರದಿಂದಲೇ ರುದ್ರಮಣೀಯ ದೃಶ್ಯ ನೋಡಿ ಆನಂದಿಸಿ ಹಿಂತಿರುಗಿದರೆ ಕ್ಷೇಮ.