ಕುಶಾಲನಗರ: ವ್ಯಕ್ತಿಯೊಬ್ಬ ಸೇತುವೆಯಿಂದ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದ್ದು, ಸ್ಥಳೀಯ ಯುವಕರು ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಗಣೇಶ ಎಂಬಾತನೇ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದವನು. ಈತ ನಗರದ ಕೊಪ್ಪ ಗಡಿಭಾಗದಲ್ಲಿ ಕಾವೇರಿ ನದಿಯ ಹಳೆ ಸೇತುವೆಯಿಂದ ದಿಢೀರ್ ಆಗಿ ಕಾವೇರಿ ನದಿಗೆ ಜಿಗಿದು ಆತ್ಮಹತ್ಯೆಗೆ ಮುಂದಾದನು. ನೋಡ ನೋಡುತ್ತಿದ್ದಂತೆಯೇ ನಡೆದ ಈ ಘಟನೆಯಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.
ಅತ್ತ ನದಿಗೆ ಹಾರಿದ ಗಣೇಶ ನೀರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದನಲ್ಲದೆ, ಈಜಿ ದಡ ಸೇರುವ ಪ್ರಯತ್ನ ಮಾಡುತ್ತಿದ್ದನು. ಈ ದೃಶ್ಯ ನೋಡಿದವರು ಮುಂದೇನು ಮಾಡುವುದೇನು ಎಂದು ಯೋಚಿಸುತ್ತಿರುವಾಗಲೇ ಆತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಬಿದಿರಿನ ಪೊದೆಯಲ್ಲಿ ಸಿಕ್ಕಿಹಾಕಿಕೊಂಡನು. ಈ ವೇಳೆ ಹೇಗಾದರೂ ಮಾಡಿ ಆತನನ್ನು ರಕ್ಷಿಸಲೇ ಬೇಕೆಂಬ ಹಠಕ್ಕೆ ಬಿದ್ದ ಸ್ಥಳೀಯರಾದ ಚಂದ್ರು ಮತ್ತು ಸ್ನೇಹಿತರು ಸಮಯ ಪ್ರಜ್ಞೆಯಿಂದ ತಕ್ಷಣವೇ ತೆಪ್ಪದೊಂದಿಗೆ ನದಿಗಿಳಿದು ಗಣೇಶನನ್ನು ರಕ್ಷಿಸಿ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತುಂಬಿ ಹರಿಯುವ ನದಿ ನೀರಿನಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಗಣೇಶನನ್ನು ರಕ್ಷಿಸಿದ ಚಂದ್ರು ಮತ್ತು ಅವರ ಸ್ನೇಹಿತರನ್ನು ನಾಗರಕರು ಶ್ಲಾಘಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಗಣೇಶನ ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ.