ಮೈಸೂರು: ಕೊಡಗು ಮತ್ತು ಮೈಸೂರಿಗೆ ಹೊಂದಿಕೊಂಡಂತೆ ಇರುವ ನಾಗರಹೊಳೆ ಪ್ರಕೃತಿ ಪ್ರೇಮಿಗಳ ಮನಸೆಳೆಯುವ ತಾಣವಾಗಿದೆ. ಈಗಂತು ಮುಂಗಾರು ಹಿಂಗಾರು ಮಳೆ ಉತ್ತಮವಾಗಿರುವುದರಿಂದ ಸಂಪೂರ್ಣ ಹಸಿರಿನಿಂದ ಕಂಗೊಳಿಸುತ್ತಿದ್ದು, ಅರಣ್ಯದೊಳಗೆ ಇರುವ ವನ್ಯ ಪ್ರಾಣಿಗಳೆಲ್ಲವೂ ಖುಷಿಯಾಗಿ ವಿಹರಿಸುತ್ತಿವೆ.
ಕಳೆದ ಐದು ವರ್ಷಗಳಿಂದ ಮಳೆ ಜಾಸ್ತಿಯಾಗಿ ಕಾಡ್ಗಿಚ್ಚು ಕಡಿಮೆಯಾಗಿರುವುದರಿಂದ ಬಹುತೇಕ ಅರಣ್ಯ ಪ್ರದೇಶಗಳು ಸಮೃದ್ಧವಾಗಿವೆ. ಅದರಂತೆ ಪ್ರತಿವರ್ಷವೂ ಒಂದಲ್ಲ ಒಂದು ಕಡೆಗಳಲ್ಲಿ ಕಾಡ್ಗಿಚ್ಚಿಗೆ ಬಲಿಯಾಗುತ್ತಿದ್ದ ಕಾಡು ಅರಣ್ಯ ಇಲಾಖೆಯ ಮುಂಜಾಗ್ರತಾ ಕ್ರಮಗಳಿಂದ ಉಳಿಯುವಂತಾಗಿದೆ. ಈ ಹಿಂದೆ ಅಗ್ನಿಗೆ ಬಲಿಯಾಗಿ ಬೋಳಾಗಿದ್ದ ಕಾಡುಗಳು ಈಗ ಮತ್ತೆ ಯಥಾ ಸ್ಥಿತಿಗೆ ಮರಳುತ್ತಿರುವುದು ವಿಶೇಷವಾಗಿದೆ.
ಅರಣ್ಯ ಸಮೃದ್ಧವಾಗಿ ವನಸಂಪತ್ತನ್ನು ಹೊಂದಿರುವ ಕಾರಣ ಮರಗಿಡಗಳ ನಡುವೆ ಬೆಳೆದು ನಿಂತ ಹುಲ್ಲು, ಕುರುಚಲು ಗಿಡಗಳೊಳಗೆ ವನ್ಯಪ್ರಾಣಿಗಳು ಖುಷಿಯಿಂದ ಎಲ್ಲೆಂದರಲ್ಲಿ ಅಡ್ಡಾಡುತ್ತಾ ನಲಿದಾಡುತ್ತಿವೆ. ಬಿದಿರುಗಳಿಂದ ಹುಟ್ಟಿ ಬಂದ ಮೊಳಕೆಗಳು ಮೆಳೆಗಳಾಗಿ ಬೆಳೆಯುತ್ತಾ ನಿಧಾನವಾಗಿ ಕಾಡನ್ನು ಆಕ್ರಮಿಸಿಕೊಳ್ಳುತ್ತಿವೆ. ಇದರಿಂದ ಮೈದಾನದಂತಿದ್ದ ಬಹುತೇಕ ಪ್ರದೇಶಗಳು ಹಸಿರಿನಿಂದ ಕೂಡಿವೆ.
ಸುಮಾರು 643 ಚ.ಕಿ.ಮೀ ವ್ಯಾಪ್ತಿಯಲ್ಲಿರುವ ಅರಣ್ಯವನ್ನು ವನ್ಯಪ್ರಾಣಿಗಳ ಆಹಾರ ಮತ್ತು ಕಾಡಿನ ರಕ್ಷಣೆ ದೃಷ್ಠಿಯಿಂದ ನಾಗರಹೊಳೆ, ಕಲ್ಲಹಳ್ಳ, ವೀರನಹೊಸಹಳ್ಳಿ, ಹುಣಸೂರು, ಆನೆಚೌಕೂರು, ಅಂತರಸಂತೆ, ಡಿ.ಬಿ.ಕುಪ್ಪೆ, ಮೇಟಿಕುಪ್ಪೆ ಹೀಗೆ ಎಂಟು ವಲಯಗಳಾಗಿ ವಿಂಗಡಣೆ ಮಾಡಲಾಗಿದೆ. ಅರಣ್ಯದ ನಡುವೆ ಹೆಮ್ಮರಗಳು, ಕುರುಚಲು ಕಾಡುಗಳು, ಬಿದಿರುಮೆಳೆಗಳು, ಕೆರೆ, ನದಿ, ತೊರೆ, ಬೆಟ್ಟ ಗುಡ್ಡ ಹೀಗೆ ಹತ್ತಾರು ಪ್ರಕೃತಿ ವಿಸ್ಮಯಗಳೊಂದಿಗೆ ಅಡಕವಾಗಿ ಕ್ರೂರ, ಸಾಧು ಪ್ರಾಣಿಗಳಿಗೆ ಆವಾಸ ಸ್ಥಾನಗಳಾಗಿದೆ.
ಅರಣ್ಯದಲ್ಲಿರುವ ಚನ್ನಮ್ಮನಕಟ್ಟೆ, ಎರೆಕಟ್ಟೆ, ಮಂಟಳ್ಳಿಕೆರೆ, ಮಾದಳ್ಳಿಕಟ್ಟೆ ಮುದಗನೂರುಕೆರೆ, ಬಿಲ್ಲೆನಹೊಸಹಳ್ಳಿಕೆರೆ, ಭೀಮನಕಟ್ಟಿ, ಬಾಣೇರಿಕೆರೆ ಸೇರಿದಂತೆ ಹಲವು ಕೆರೆ-ಕಟ್ಟೆಗಳಲ್ಲಿ ಜಲವೃದ್ಧಿಯಾಗಿರುವುದು ಕಂಡು ಬರುತ್ತಿದೆ. ಸದ್ಯ ಹಸಿರು ಮೇವು ಸಮೃದ್ಧವಾಗಿರುವುದರಿಂದ ಸಸ್ಯಹಾರಿ ಪ್ರಾಣಿಗಳು ನೆಮ್ಮದಿಯಾಗಿ ಅರಣ್ಯದಲ್ಲಿ ವಿಹರಿಸುತ್ತಿವೆ. ಒಟ್ಟಾರೆ ಪ್ರಕೃತಿ ಪ್ರಿಯರು ಅರಣ್ಯದ ಚೆಲುವು ನೋಡಬೇಕೆಂದರೆ ಇತ್ತ ತೆರಳಬಹುದಾಗಿದೆ.